ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಅಭಾವ: ಸಂಕಷ್ಟದಲ್ಲಿ ಕೋವಿಡ್ ಪೀಡಿತರು

ನಗರದ ಖಾಸಗಿ ಆಸ್ಪತ್ರೆಗಳಿಗೆ ಬೇಡಿಕೆಯ ಶೇ 30ರಷ್ಟು ಮಾತ್ರ ಆಮ್ಲಜನಕ ಪೂರೈಕೆ
Last Updated 17 ಏಪ್ರಿಲ್ 2021, 20:09 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ (ಆಕ್ಸಿಜನ್) ಕೊರತೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ದಿನವೊಂದಕ್ಕೆ ಅಗತ್ಯವಿರುವ ಆಮ್ಲಜನಕ ಪ್ರಮಾಣದಲ್ಲಿ ಶೇ 30ರಷ್ಟು ಮಾತ್ರ ಸದ್ಯ ಪೂರೈಕೆಯಾಗುತ್ತಿರುವ ಪರಿಣಾಮ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಲಾರಂಭಿವೆ. ಇದರಿಂದಾಗಿ ಕೋವಿಡ್ ಪೀಡಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿರುವ ಬೆನ್ನಲ್ಲಿಯೇ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಸದ್ಯ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 56 ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 55 ಹಾಸಿಗೆಗಳು ಮಾತ್ರ ಖಾಲಿಯಿವೆ. ಇದರಿಂದಾಗಿ ಸೋಂಕಿತರನ್ನು ಕೆಲ ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಿವೆ. ಈಗಾಗಲೇ ಶಿಫಾರಸು ಮಾಡಲಾದ ಸಾವಿರಕ್ಕೂ ಅಧಿಕ ಕೋವಿಡ್ ಪೀಡಿತರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ಒದಗಿಸುತ್ತಿವೆ. ಇದೇ ವೇಳೆ ಗಂಭೀರವಾಗಿ ಅಸ್ವಸ್ಥಗೊಳ್ಳುವ ಕೋವಿಡ್‌ ಪೀಡಿತರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಸದ್ಯ 124 ರೋಗಿಗಳು ತೀವ್ರ ನಿಗಾ ಘಟಕದಲ್ಲಿ ಇದ್ದಾರೆ.

ಕಳೆದ ವರ್ಷ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡ ಬಳಿಕ ಕಿಮ್ಸ್‌ ಸೇರಿದಂತೆ ಕೆಲ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಉಂಟಾಗಿ, ರೋಗಿಗಳು ಸಮಸ್ಯೆ ಎದುರಿಸಿದ್ದರು.ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ವೈದ್ಯರೊಬ್ಬರು ಆಮ್ಲಜನಕ ಸಂಪರ್ಕ ಹೊಂದಿದ್ದ ಹಾಸಿಗೆ ಸಿಗದೆಯೇ ಆಸ್ಪತ್ರೆಗಳಿಗೆ ಅಲೆದು ಮೃತಪಟ್ಟಿದ್ದರು. ಈಗ ಕೂಡ ಶೇ 70ರಷ್ಟು ಅಭಾವ ಸೃಷ್ಟಿಯಾಗಿರುವ ಕಾರಣ ಖಾಸಗಿ ಆಸ್ಪತ್ರೆಗಳು ಸರ್ಕಾರದ ಮೊರೆ ಹೋಗಿವೆ.

ಈ ಸಂಬಂಧಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫಾನಾ) ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಪತ್ರ ಬರೆದು, ‘ಗಂಭೀರವಾಗಿ ಅಸ್ವಸ್ಥರಾಗಿರುವ ಸೋಂಕಿತರನ್ನು ಅಪಾಯದಿಂದ ಪಾರು ಮಾಡಲು ಆಮ್ಲಜನಕದ ಅಗತ್ಯವಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ನಿಗದಿತ ಪ್ರಮಾಣದಲ್ಲಿ ಆಮ್ಲಜನಕದ ಸರಬರಾಜು ಆಗಬೇಕು’ ಎಂದು ಮನವಿ ಮಾಡಿಕೊಂಡಿವೆ.

300 ಟನ್ ಅಗತ್ಯ: ‘ನಗರದ ಖಾಸಗಿ ಆಸ್ಪತ್ರೆಗಳಿಗೆ ಪ್ರತಿದಿನ ವೈದ್ಯಕೀಯ ಬಳಕೆಗೆ 300 ಟನ್ ಆಕ್ಸಿಜನ್ ಬೇಕಾಗುತ್ತದೆ. ಈಗ 100 ಟನ್ ಮಾತ್ರ ಪೂರೈಕೆಯಾಗುತ್ತಿದೆ. ಬೇಡಿಕೆ ಸಲ್ಲಿಸಿದಷ್ಟು ವೈದ್ಯಕೀಯ ಆಮ್ಲಜನಕವನ್ನು ಉತ್ಪಾದನಾ ಕಂಪನಿಗಳು ಒದಗಿಸುತ್ತಿಲ್ಲ ಎನ್ನುವುದು ಪೂರೈಕೆದಾರರ ಆರೋಪ. ಈ ಸಮಸ್ಯೆಯನ್ನು ಔಷಧ ನಿಯಂತ್ರಕರ ಗಮನಕ್ಕೆ ಕೂಡ ತಂದಿದ್ದೇನೆ. ಈಗಾಗಲೇ ಹಲವು ಸೋಂಕಿತರನ್ನು ಶಿಫಾರಸು ಆಧಾರದ ಮೇಲೆ ದಾಖಲಿಸಿಕೊಳ್ಳಲಾಗಿದೆ. ಅವರಿಗೆ ಸೂಕ್ತ ಪ್ರಮಾಣದಲ್ಲಿ ಆಮ್ಲಜನಕ ಒದಗಿಸದಿದ್ದಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ’ ಎಂದು ಫಾನಾ ಅಧ್ಯಕ್ಷ ಡಾ. ಪ್ರಸನ್ನ ಎಚ್‌.ಎಂ. ‘ಪ್ರಜಾವಾಣಿ’ಗೆ ತಿಳಿಸಿದರು.

'ಇದೇ ರೀತಿ ಕೊರತೆ ಮುಂದುವರಿದಲ್ಲಿ ಹೊಸ ರೋಗಿಗಳನ್ನು ದಾಖಲಿಸಿಕೊಳ್ಳುವುದು ಕಷ್ಟವಾಗುತ್ತದೆ. ಕೆಲ ಆಸ್ಪತ್ರೆಗಳಲ್ಲಿ 6 ಗಂಟೆಗಳಿಗೆ ಸಾಕಾಗುವಷ್ಟು ಮಾತ್ರ ಆಮ್ಲಜನಕವಿದೆ. ಬಹುತೇಕ ಆಸ್ಪತ್ರೆಗಳು ಪ್ರತಿನಿತ್ಯ ಪೂರೈಕೆಯಾಗುವ ಆಮ್ಲಜನಕದ ಮೇಲೆಯೇ ಅವಲಂಬಿತವಾಗಿವೆ. ನಮಗೆ ಎಷ್ಟು ಪ್ರಮಾಣದಲ್ಲಿ ವೈದ್ಯಕೀಯ ಆಮ್ಲಜನಕ ಅಗತ್ಯವಿದೆ ಎನ್ನುವ ವಿವರವನ್ನು ಸರ್ಕಾರಕ್ಕೆ ನೀಡಲಾಗಿದೆ’ ಎಂದು ವಿವರಿಸಿದರು.

‘ರಾಜ್ಯದಲ್ಲಿ ಪ್ರತಿನಿತ್ಯ 800 ಟನ್ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಆಮ್ಲಜನಕವಿದೆ. ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಕೊರತೆಯ ಬಗ್ಗೆ ತಿಳಿಸಿದ್ದಾರೆ. ಆ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಮಹಾರಾಷ್ಟ್ರಕ್ಕೆ ಆಮ್ಲಜನಕ ಪೂರೈಕೆ

ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ಅಲ್ಲಿನ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಇಲ್ಲಿನ ಉತ್ಪಾದನಾ ಕಂಪನಿಗಳು ದ್ರವರೂಪದ ಆಮ್ಲಜನಕವನ್ನು ಅಲ್ಲಿಗೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲಾರಂಭಿವೆ. ಇದರಿಂದಾಗಿ ಇಲ್ಲಿ ಕೊರತೆ ಎದುರಾಗಿದೆ ಎಂದು ಪೂರೈಕೆದಾರರು ತಿಳಿಸಿದರು.

ಈ ಹಿಂದೆ ಮಧ್ಯಮ ಗಾತ್ರದ ಆಸ್ಪತ್ರೆಗಳು ಪ್ರತಿನಿತ್ಯ 5ರಿಂದ 10 ಸಿಲಿಂಡರ್‌ಗಳಿಗೆ ಬೇಡಿಕೆ ಇಡುತ್ತಿದ್ದವು. ಈಗ ಆ ಸಂಖ್ಯೆ 25ರಿಂದ 50ಕ್ಕೆ ಏರಿಕೆಯಾಗಿದೆ. ಪರಿಣಾಮ ಬೇಡಿಕೆ ಮತ್ತು ಉತ್ಪಾದನೆ ನಡುವೆ ಅಂತರ ಹೆಚ್ಚಾಗಿದೆ ಎಂದು ಹೇಳಿದರು.

‘ಆಮ್ಲಜನಕ ಪೂರೈಸದಿದ್ದಲ್ಲಿ ಜೀವಕ್ಕೆ ಅಪಾಯ’

‘ಆಮ್ಲಜನಕದ ಕೊರತೆ ಗಂಭೀರ ಸಮಸ್ಯೆ ಪಡೆದುಕೊಂಡಿದೆ. ಕಳೆದ ವರ್ಷ ಒಮ್ಮೆಲೆಯೇ 40ಕ್ಕೂ ಅಧಿಕ ರೋಗಿಗಳನ್ನು ದಾಖಲಿಸಿಕೊಂಡರೂ ಆಮ್ಲಜನಕದ ಸಮಸ್ಯೆ ಕಾಣಿಸಿರಲಿಲ್ಲ. ಆದರೆ, ಈ ಬಾರಿ ಬೇಡಿಕೆ ಅನುಸಾರ ಆಮ್ಲಜನಕ ದೊರೆಯುತ್ತಿಲ್ಲ. ಪೂರೈಕೆದಾರರು ಆಮ್ಲಜನಕ ಒದಗಿಸುತ್ತಿಲ್ಲ. ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ಇಲ್ಲದಿದ್ದಲ್ಲಿ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ದಾಖಲಾಗಿರುವ ರೋಗಿಗಳನ್ನು ಸ್ಥಳಾಂತರ ಮಾಡದಿದ್ದಲ್ಲಿ ಅವರ ಜೀವಕ್ಕೆ ಅಪಾಯವಾಗಲಿದೆ. ಆದರೆ, ಎಲ್ಲಿಗೆ ಸ್ಥಳಾಂತರ ಮಾಡಬೇಕೆಂದು ಗೊತ್ತಾಗುತ್ತಿಲ್ಲ’ ಎಂದು ಸ್ವಸ್ತಿಕ್ ಆಸ್ಪತ್ರೆಯ ಮಾಲೀಕ ಡಾ. ವಿಜಯ್ ರಾಘವ್ ರೆಡ್ಡಿ ಹೇಳಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ‘ಸರ್ಕಾರವು ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ಒದಗಿಸಲು ಕ್ರಮಕೈಗೊಳ್ಳದಿದ್ದರೆ ಹಲವರು ಜೀವ ಕಳೆದುಕೊಳ್ಳಲಿದ್ದಾರೆ. ಹಾಗಾಗಿ, ಆಮ್ಲಜನಕ ಮತ್ತು ರೆಮ್‌ಡಿಸಿವಿರ್ ಔಷಧವನ್ನು ಆದ್ಯತೆ ಅನುಸಾರ ಒದಗಿಸಬೇಕು. ಈ ಮೂಲಕ ಕೋವಿಡ್‌ ಪೀಡಿತರನ್ನು ರಕ್ಷಿಸಲು ನೆರವಾಗಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

‘ಪರಿಸ್ಥಿತಿ ಮುಂದುವರಿದಲ್ಲಿ ನಿರ್ವಹಣೆ ಕಷ್ಟ’

‘ಜಂಬೊ ಸಿಲಿಂಡರ್ ಎಂದು ಕರೆಯಲಾಗುವ ಒಂದು ಸಿಲಿಂಡರ್ ಸುಮಾರು 7000 ಲೀಟರ್ ಆಕ್ಸಿಜನ್ ಹೊಂದಿರುತ್ತದೆ. ಸದ್ಯ ನಮಗೆ 30ರಿಂದ 45 ಸಿಲಿಂಡರ್‌ಗಳು ಪ್ರತಿನಿತ್ಯ ಅಗತ್ಯವಿದೆ. ಕೈಗಾರಿಕೆಗಳಿಗೆ ಸರಬರಾಜಾಗುತ್ತಿರುವ ಆಮ್ಲಜನಕವನ್ನು ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ಒದಗಿಸಬೇಕು. ಈ ಮೂಲಕ ಆರೋಗ್ಯ ತುರ್ತುಪರಿಸ್ಥಿತಿಯಲ್ಲಿ ರೋಗಿಗಳಿಗೆ ಅಗತ್ಯ ವೈದ್ಯಕೀಯ ಸೇವೆ ಒದಗಿಸಲು ನೆರವಾಗಬೇಕು’ ಎಂದು ಎಸಿಇ ಸುಹಾಸ್‌ ಆಸ್ಪತ್ರೆಯ ಜಗದೀಶ್‌ ಹಿರೇಮಠ ತಿಳಿಸಿದರು.

ರೀಗಲ್ ಆಸ್ಪತ್ರೆಯ ಮುಖ್ಯಸ್ಥ ಡಾ. ಸೂರಿರಾಜು, ‘ಕೋವಿಡ್ ಸಾವುಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕೋವಿಡ್ ಕಾಣಿಸಿಕೊಳ್ಳುವ ಮೊದಲು ನಮಗೆ ಡಯಾಲಿಸಿಸ್ ಹಾಗೂ ಶಸ್ತ್ರಚಿಕಿತ್ಸೆಗೆ 5 ರಿಂದ 10 ಆಮ್ಲಜನಕದ ಸಿಲಿಂಡರ್ ಅವಶ್ಯಕತೆ ಇತ್ತು. ಆದರೆ, ಈಗ ಪ್ರತಿ ದಿನ 100 ಜಂಬೊ ಸಿಲಿಂಡರ್‌ಗಳು ಕೂಡ ಸಾಕಾಗುತ್ತಿಲ್ಲ. ಕೆಲ ದಿನಗಳಿಂದ ಆಸ್ಪತ್ರೆಯವರೇ ಬೆಳಿಗ್ಗೆ ಕೈಗಾರಿಕೆಗಳಿಗೆ ತೆರಳಿ, ಸಿಲಿಂಡರ್ ತರುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT