ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಹಿತ, ಆಕರ್ಷಕ ಬೆಂಗಳೂರು: ಸರ್ಕಾರಕ್ಕೆ ಶೀಘ್ರ ವರದಿ

ಪ್ರತ್ಯೇಕ ಸಮಿತಿ ಜೊತೆ ಎರಡನೇ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ
Published 8 ಆಗಸ್ಟ್ 2023, 15:30 IST
Last Updated 8 ಆಗಸ್ಟ್ 2023, 15:30 IST
ಅಕ್ಷರ ಗಾತ್ರ

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಜನಹಿತ, ಆಕರ್ಷಕ ಬೆಂಗಳೂರು ವಿಷಯಾಧಾರಿತವಾಗಿ ಆಯ್ಕೆ ಮಾಡಿರುವ ಪ್ರಮುಖ ಸಲಹೆಗಳ ವರದಿ ಸಿದ್ದಪಡಿಸಿ ಶೀಘ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ ರಾಯಪುರ ತಿಳಿಸಿದರು.

ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ರಚಿಸಿರುವ ಜನಹಿತ, ಆಕರ್ಷಕ ಬೆಂಗಳೂರು ವಿಷಯ ಕುರಿತು ಪ್ರತ್ಯೇಕ ಸಮಿತಿ ಜೊತೆ ನಡೆದ ಎರಡನೇ ಸಭೆಯಲ್ಲಿ ಅವರು ಮಾತನಾಡಿದರು.

ನಾಗರಿಕರಿಂದ ಬಂದಂತಹ ಸಲಹೆಗಳನ್ನು ಪಾಲುದಾರ ಶೈಕ್ಷಣಿಕ ಸಂಸ್ಥೆಯಾದ ಸೃಷ್ಟಿ ಮಣಿಪಾಲ್ ಇನ್‌ಸ್ಟಿಟ್ಯೂಟ್‌ ಆಫ್ ಡಿಸೈನ್ ಆ್ಯಂಡ್‌ ಟೆಕ್ನಾಲಜಿ ವತಿಯಿಂದ ಅಧ್ಯಯನ ನಡೆಸಿ ವರದಿಯನ್ನು ಸಿದ್ದಪಡಿಸಲಾಗಿದೆ. ಇದರ ಜೊತೆಗೆ ಸಮಿತಿಯಲ್ಲಿ ಬಂದಿರುವ ಸಲಹೆಗಳನ್ನು ಸೇರಿಸಿ ಅಂತಿಮ ವರದಿಯನ್ನು ಸಿದ್ದಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಲಹೆಗಳನ್ನು ಈಗಾಗಲೇ ವಿವಿಧ ವರ್ಗಗಳಲ್ಲಿ ಬೇರ್ಪಡಿಸಲಾಗಿದೆ. ಪ್ರಮುಖ ಸಲಹೆಗಳನ್ನು ಅಂತಿಮಗೊಳಿಸಬೇಕಿದೆ. ಸಿಎಸ್‌ಆರ್‌ ಅಡಿಯಲ್ಲಿ ತೆಗೆದುಕೊಳ್ಳಬಹುದಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.

ಸಲಹೆಗಳು:

* ಬೆಂಗಳೂರಿಗೆ ‘ಸಾಂಸ್ಕೃತಿಕ ಕ್ಯಾಲೆಂಡರ್’ ಹೊರತರಬೇಕು. ಅದರಲ್ಲಿ ಕೆರೆ ಹಬ್ಬ, ಹೂವಿನ ಹಬ್ಬ, ಕರಗ, ಥಿಯೇಟರ್ ಫೆಸ್ಟಿವಲ್, ನಾಡ ಹಬ್ಬ – ಬೆಂಗಳೂರು ಹಬ್ಬ, ಬೆಂಗಳೂರು ದಸರಾ, ಕನ್ನಡ ರಾಜ್ಯೋತ್ಸವ ಮಾಸ, ಐಟಿ.ಕಾಂ, ಕಡಲೆಕಾಯಿ ಪರಿಷೆ, ಊರ ಹಬ್ಬ - ಗ್ರಾಮ ದೇವತೆ ಉತ್ಸವಗಳು, ಬೆಂಗಳೂರು ಫೆಸ್ಟ್, ಹೊಸ ವರ್ಷದ ಮುನ್ನಾ ದಿನಗಳನ್ನು ಸಾಂಸ್ಕೃತಿ ಕ್ಯಾಲೆಂಡರ್‌ನಲ್ಲಿ ಅಳವಡಿಸುವುದು.

* ಜೆಸಿ ರಸ್ತೆಯಲ್ಲಿ ಥಿಯೇಟರ್ ಕಾಂಪ್ಲೆಕ್ಸ್, ಬಿಬಿಎಂಪಿಯೊಂದಿಗೆ ಎಲ್ಲ ಥಿಯೇಟರ್ ಸಂಕೀರ್ಣಗಳನ್ನು ನವೀಕರಿಸುವುದು ಮತ್ತು ಮರುಸ್ಥಾಪಿಸುವುದು, 4 ದಿಕ್ಕುಗಳಲ್ಲಿ 4 ಹೊಸ ಆಡಿಟೋರಿಯಂ ಸ್ಥಾಪಿಸುವುದು.

* ಸಾರ್ವಜನಿಕ ಸ್ಥಳಗಳನ್ನು ರಚಿಸಲು ಕನಿಷ್ಠ 25 ಜಂಕ್ಷನ್‌ಗಳನ್ನು ವಿನ್ಯಾಸಗೊಳಿಸುವುದು, ಡಿಜಿಟಲ್ ಸೈನೇಜ್‌/ ಗಾಳಿಯ ಗುಣಮಟ್ಟ ಸೂಚಕಗಳನ್ನು ಅಳವಡಿಸುವುದು. ರಸ್ತೆ ಬದಿ, ಮೂಲೆಗಳನ್ನು ಅಭಿವೃದ್ಧಿ ಮಾಡುವುದು.

* ಬೆಂಗಳೂರು ದಕ್ಷಿಣದಲ್ಲಿ ಕೆಂಪೇಗೌಡ ಹೆರಿಟೇಜ್ ಕಾರಿಡಾರ್ - 12 ಕಿಮೀ ಕಾರಿಡಾರ್, ಸ್ಯಾಂಕಿ ಟ್ಯಾಂಕ್ - ಕಾಡು ಮಲ್ಲೇಶ್ವರ ದೇವಸ್ಥಾನ - ಉತ್ತರ ಗೋಪುರ ಕಾರಿಡಾರ್, ಹಲಸೂರು ಟ್ಯಾಂಕ್ / ಸೋಮೇಶ್ವರ ದೇವಸ್ಥಾನ - ಪೂರ್ವ ಗೋಪುರ ಕಾರಿಡಾರ್, ಸಿಬಿಡಿ ವಿಕ್ಟೋರಿಯನ್ ಬೆಂಗಳೂರು ಗೋಲ್ಡನ್ ಕಾರಿಡಾರ್ ರಚಿಸುವುದು.

* ಉದ್ಯಾನ ಮತ್ತು ಕೆರೆಗಳನ್ನು ಅಭಿವೃದ್ಧಿ ಮಾಡುವುದು. ಹೂ ಹಬ್ಬ– ಕೆರೆ ಹಬ್ಬ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸಿವಿಲ್ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದು.

* ಬೆಂಗಳೂರಿಗೆ ಲ್ಯಾಂಡ್‌ಮಾರ್ಕ್ ವಾಚ್‌ಟವರ್, ಪಬ್ಲಿಕ್ ಯುಟಿಲಿಟಿ ಕಟ್ಟಡವನ್ನು ಮರುಬಳಕೆ ಮಾಡುವುದು, ಫ್ರೀಡಂ ಪಾರ್ಕ್ ಅನ್ನು ಮರುರೂಪಿಸುವುದು, ಸಾಂಸ್ಕೃತಿಕ ಚಟುವಟಿಕೆಗೆ ಸರ್ಕಾರಿ ವಸ್ತುಸಂಗ್ರಹಾಲಯ, ವಿಶ್ವೇಶ್ವರಯ್ಯ ಮ್ಯೂಸಿಯಂ, ವೆಂಕಟಪ್ಪ ಆರ್ಟ್ ಗ್ಯಾಲರಿ, ವಾಟರ್ ಮ್ಯೂಸಿಯಂ, ಕೆಂಪೇಗೌಡ ಮ್ಯೂಸಿಯಂ, ತಾರಾಲಯ, ಯುದ್ಧ ಸ್ಮಾರಕದಲ್ಲಿರುವ ಐಜಿ ಸಂಗೀತ ಕಾರಂಜಿಗಳನ್ನು ಬಳಕೆ ಮಾಡಿಕೊಳ್ಳುವುದು.

* ಸಾರ್ವಜನಿಕ ಕಲೆಗಳಿಗಾಗಿ ಸ್ಥಳಗಳನ್ನು ಆಯ್ಕೆಮಾಡುವುದು, ಸ್ಟೋನ್ ಆರ್ಟ್/ಮೆಟಲ್ ಆರ್ಟ್/ ಭಿತ್ತಿ ಚಿತ್ರಗಳು/ ಕಲೆಗಳ ಮರುಬಳಕೆ, ಮೇಲುಸೇತುವೆಗಳ ಕೆಳಗಿನ ಜಾಗಗಳನ್ನು ಬಳಸುವುದು, ಪ್ರತಿ ಮೇಲುಸೇತುವೆ ಕೆಳಭಾಗದಲ್ಲಿ ಕಲಾ ಶಾಲೆಗಳನ್ನು ತೆರೆಯುವುದು, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗೋಪುರ ನಿರ್ಮಿಸುವುದು.

* ಬ್ಯಾಂಡ್ ಸ್ಟ್ಯಾಂಡ್‌ಗಳನ್ನು ಮರು ಬಳಸುವುದು, ಬೆಂಗಳೂರು ಜನಪದ ಕಲಾವಿದರನ್ನು ಪ್ರೋತ್ಸಾಹಿಸುವುದು, ಓಪನ್ ಸ್ಟ್ರೀಟ್ ಕಾರ್ಯಕ್ರಮಗಳನ್ನು ನಡೆಸುವುದು, ಸಮೂಹ ಗಾಯನ, ರಾಮನವಮಿ ಸಂಗೀತೋತ್ಸವ ನಡೆಸುವುದು.

* ಸಾರ್ವಜನಿಕ ಸೂಚನಾ ಫಲಕಗಳ ಅಳವಡಿಕೆ, ವಾಹನ ಸವಾರರಿಗೆ ಮಳೆ ಆಶ್ರಯ ಪ್ರದೇಶಗಳ ನಿರ್ಮಾಣ, ಖಾಲಿ ಇರುವ ಖಾಸಗಿ ಜಮೀನುಗಳಿಗೆ ಕಾಂಪೌಂಡ್ ಗೋಡೆಯನ್ನು ಕಡ್ಡಾಯಗೊಳಿಸುವುದು, ಸಿಗ್ನಲ್ ಫ್ರೀ ಬೆಂಗಳೂರು, ತರಬೇತಿ ಮಾರ್ಗದರ್ಶಿಗಳು ಮತ್ತು ಚಾಲಕರ ನಿಯೋಜನೆ ಹಾಗೂ ಬೆಂಗಳೂರು ಮಾರ್ಗದರ್ಶಿ ಪುಸ್ತಕ ಮಾಡುವುದು.

Cut-off box - ಸಭೆಯಲ್ಲಿ ಬಂದ ಸಲಹೆಗಳು ನಗರದಲ್ಲಿರುವ ಅಶ್ವತ್ಥ ಕಟ್ಟೆಗಳನ್ನು ಗುರುತಿಸಬೇಕು. ಕೆಂಪೇಗೌಡರ ಜೀವನ ಚರಿತ್ರೆಯ ಬಗ್ಗೆ ಯುವ ಪೀಳಿಗೆಯಲ್ಲಿ ತಿಳಿಸಲು ಯೋಜನೆ ರೂಪಿಸಬೇಕು.  ಬೆಂಗಳೂರಿನ ಮೊದಲ ಶಾಲೆಯನ್ನು ಗುರುತಿಸಬೇಕು. ‘ಸ್ವರ್ಣ ವಲಯ’ದಡಿ ಸಿಟಿ ಮಾರುಕಟ್ಟೆ ಲಾಲ್‌ಬಾಗ್ ಸ್ವಾತಂತ್ರ್ಯ ಉದ್ಯಾನ ಪಾರಂಪರಿಕ ತಾಣ ಧರ್ಮರಾಯ ದೇವಸ್ಥಾನ ನವೀಕರಣ ಪೇಟೆಗಳ ಹಬ್ಬ ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್ ನಲ್ಲಿ ಟೆಲಿಸ್ಕೋಪ್ ಅಳವಡಿಸಬೇಕು. ನಗರದಲ್ಲಿ ‘ಅನ್ ಬಾಕ್ಸಿಂಗ್’ ಪರಿಕಲ್ಪನೆಯಡಿ ಕಾರ್ಯಕ್ರಮಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಇನ್ನಿತರ ವಿಷಯಗಳಾಧಾರಿತ ಅಂಶಗಳಡಿ ಕಾರ್ಯಕ್ರಮಗಳನ್ನು ವರ್ಷವಿಡೀ ಆಯೋಜಿಸಬೇಕು ಎಂದು ಸಭೆಯಲ್ಲಿ ಸಲಹೆಗಳು ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT