ಬೆಂಗಳೂರು: ಜಯಚಾಮರಾಜ ಒಡೆಯರ್ ಅವರ ಮಕ್ಕಳಾದ ಕಾಮಾಕ್ಷಿ ದೇವಿ ಮತ್ತು ಇಂದ್ರಾಕ್ಷಿ ದೇವಿ ಅವರು ‘ದಿ ಕಿಂಗ್ ಸ್ಪೀಕ್ಸ್’ ಶೀರ್ಷಿಕೆಯಡಿ ಪಾಡ್ಕಾಸ್ಟ್ ಸರಣಿ ಹಮ್ಮಿಕೊಂಡಿದ್ದು, ಇದರಲ್ಲಿ ಬೆಂಗಳೂರಿನ ಗತಕಾಲದ ವೈಭವವನ್ನು ಮೆಲುಕು ಹಾಕಿದ್ದಾರೆ.
ನಗರದ ಜತೆಗೆ ತಂದೆ ಹೊಂದಿದ್ದ ಒಡನಾಟ ಹಾಗೂ ನಗರದ ಬಗೆಗೆ ತಂದೆಗಿದ್ದ ಪ್ರೀತಿಯನ್ನು ಸಹೋದರಿಯರು ಸ್ಮರಿಸಿಕೊಂಡಿದ್ದಾರೆ. ನಗರ ಹೇಗೆ ತಮ್ಮನ್ನು ಆಕರ್ಷಿತು ಎನ್ನುವುದರ ಬಗ್ಗೆಯೂ ಮನದಾಳವನ್ನು ಹಂಚಿಕೊಂಡಿದ್ದಾರೆ. ಈ ಪಾಡ್ಕಾಸ್ಟ್ ಸರಣಿಯಲ್ಲಿ ಜಯಚಾಮರಾಜ ಒಡೆಯರ್ ಅವರು ವಿವಿಧ ಸಂದರ್ಭಗಳಲ್ಲಿ ಮಾಡಿದ ಭಾಷಣದ ತುಣುಕುಗಳನ್ನೂ ಬಳಸಿಕೊಳ್ಳಲಾಗಿದೆ.
‘ನಮ್ಮ ತಂದೆಗೆ ಬೆಂಗಳೂರಿನ ಮೇಲೆ ವಿಶೇಷ ಒಲವಿತ್ತು. ಬಹುತೇಕ ವಾರಾಂತ್ಯಗಳಲ್ಲಿ ನಗರಕ್ಕೆ ಭೇಟಿ ನೀಡುತ್ತಿದ್ದೇವು. ಬೆಂಗಳೂರು ಅರಮನೆಯಲ್ಲಿ ಓಡಾಡಿದ ಸುಂದರ ಸಮಯ, ಇಲ್ಲಿ ಶಾಪಿಂಗ್ ಮಾಡಿದ್ದ ದಿನಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಕಾಮಾಕ್ಷಿ ದೇವಿ ಸ್ಮರಿಸಿಕೊಂಡರು.
‘ಈಗ ಬೆಂಗಳೂರು ಸಾಕಷ್ಟು ಬದಲಾಗಿದೆ. ವಾಹನ ದಟ್ಟಣೆಯಿಂದ ಕೂಡಿರುವ ರಸ್ತೆಗಳಲ್ಲಿ ಹೆಜ್ಜೆ ಹಾಕಲು ಎರಡು ಬಾರಿ ಯೋಚಿಸಬೇಕಾದ ಸ್ಥಿತಿಯಿದೆ’ ಎಂದು ಹೇಳಿದರು.
‘ನಮ್ಮ ಕುಟುಂಬವು ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಪ್ರತಿಷ್ಠಾನದ ಮೂಲಕ ಒಡೆಯರ್ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ಕಾರ್ಯಪ್ರವೃತವಾಗಿದೆ. ನಮ್ಮ ತಂದೆ ಉತ್ತಮ ಆಡಳಿತಗಾರ ಮಾತ್ರ ಆಗಿರದೆ, ಸಂಗೀತ ಪ್ರೇಮಿಯೂ ಆಗಿದ್ದರು. ಅವರು 94 ಕೃತಿಗಳನ್ನು ರಚಿಸಿ, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.