ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿರುವ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ.
ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನದಿಂದಲೇ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದ್ದು, ವ್ಯಾಪಾರ-ವಹಿವಾಟು ಸ್ಥಗಿತಗೊಂಡಿದೆ.
ಶಾಂತಿನಗರದ ಜೋಡು ರಸ್ತೆ ಹಾಗೂ ರಿಚ್ಮಂಡ್ ವೃತ್ತಕ್ಕೆ ಹೊಂದಿಕೊಂಡು ಲ್ಯಾಂಗ್ಫೋರ್ಡ್ ರಸ್ತೆ ಇದೆ. ಹಲವು ಪ್ರಮುಖ ಮಳಿಗೆಗಳು ಈ ರಸ್ತೆಯಲ್ಲಿವೆ.
'ಲ್ಯಾಂಗ್ಫೋರ್ಡ್ ರಸ್ತೆಯಲ್ಲಿ ನಿತ್ಯವೂ ಜನರ ಓಡಾಟ ಹೆಚ್ಚಿರುತ್ತದೆ. ಹಲವು ಮಳಿಗೆಗಳು ಜನರಿಂದ ತುಂಬಿರುತ್ತವೆ. ಜನರು ಹೆಚ್ಚಿದ್ದರೆ, ರಸ್ತೆಯಲ್ಲಿ ದಟ್ಟಣೆ ಉಂಟಾಗಬಹುದು. ಹೀಗಾಗಿ, ರಾಷ್ಟ್ರಪತಿ ಭದ್ರತೆ ದೃಷ್ಟಿಯಿಂದ ಅಂಗಡಿ ಬಂದ್ ಮಾಡಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.