ಬೆಂಗಳೂರು: ಭಾರತೀಯ ರೈಲ್ವೆಯನ್ನು ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾದ (ಕಮ್ಯುನಿಸ್ಟ್) ನಗರ ಜಿಲ್ಲಾ ಸಮಿತಿ ಸದಸ್ಯರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎಂ.ಎನ್.ಶ್ರೀರಾಮ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ರೈಲ್ವೆ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಅವರು,'ಭಾರತೀಯ ರೈಲ್ವೆ ಎರಡು ಕೋಟಿಗಿಂತಲೂ ಹೆಚ್ಚಿನ ಜನರ ಜೀವನಾಡಿ. ರೈಲ್ವೆ ಯಾವುದೇ ನಷ್ಟಕ್ಕೆ ತುತ್ತಾಗಿಲ್ಲ. 2018ರಲ್ಲಿ ₹1,665 ಕೋಟಿ ಹಾಗೂ 2019ರಲ್ಲಿ ₹3,774 ಕೋಟಿ ನಿವ್ವಳ ಲಾಭ ಮಾಡಿದೆ ಎಂದು ಕಳೆದ ವರ್ಷ ಆರ್ಥಿಕ ಸಚಿವರೇ ಹೇಳಿದ್ದರು. ಹೀಗಿರುವಾಗ ಖಾಸಗಿಯವರಿಗೆ ನೀಡುವುದು ಅರ್ಥಹೀನ' ಎಂದು ದೂರಿದರು.
'ಸಾರ್ವಜನಿಕ ವಲಯದ ರೈಲ್ವೆಯನ್ನು ಖಾಸಗಿಯವರಿಗೆ ನೀಡುವುದರಿಂದ ಕೆಲವೇ ಮಂದಿ ಬಂಡವಾಳಗಾರರಿಗೆ ಅನುಕೂಲವಾದರೆ, 12 ಲಕ್ಷ ಕಾಯಂ ಉದ್ಯೋಗಿಗಳು, ಲಕ್ಷಾಂತರ ಗುತ್ತಿಗೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರೈಲ್ವೆ ಪ್ರಯಾಣ ದುಬಾರಿಯಾಗಲಿದ್ದು, ಪ್ರಯಾಣಿಕರಿಗೂ ಹೊಡೆತ ಬೀಳಲಿದೆ. ಈ ಜನವಿರೋಧಿ ನಿರ್ಧಾರವನ್ನು ಕೈಬಿಡದಿದ್ದರೆ, ಪ್ರತಿಭಟನೆ ಮುಂದುವರಿಸಲಾಗುವುದು' ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.