ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಬಾಕಿ ಇರುವ ಪೂರ್ಣ ಹಣವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬಿಬಿಎಂಪಿ ಗುತ್ತಿಗೆದಾರರ ಸಂಘ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಗುರುವಾರ ಮಾತನಾಡಿದ ಅವರು, ‘ಪೂರ್ಣಗೊಂಡ ಕಾಮಗಾರಿಗಳಿಗೆ ಶೇ 75ರಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ. ಉಳಿದಿರುವ ಶೇ 25ರಷ್ಟು ಹಣವನ್ನೂ ಬಿಡುಗಡೆ ಮಾಡಲು ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗುವುದು’ ಎಂದರು.
‘ಬಿಬಿಎಂಪಿ ಅನುದಾನದಲ್ಲಿ ಪೂರೈಸಲಾಗಿರುವ ಕಾಮಗಾರಿಗಳಿಗೆ 24 ತಿಂಗಳಿಂದ ಬಿಲ್ ಪಾವತಿಸಿಲ್ಲ. ಸರ್ಕಾರದ ಅನುದಾನದ ಕಾಮಗಾರಿಗಳಿಗೆ 12 ತಿಂಗಳಿಂದ ಹಣ ಪಾವತಿ ಮಾಡಿಲ್ಲ. ಅಲ್ಲದೆ, ಈಗ ಬಿಡುಗಡೆ ಮಾಡಲಾಗಿರುವ ಬಿಲ್ನಲ್ಲಿ ಶೇ 25ರಷ್ಟು ಬಾಕಿ ಇದೆ. ಅದನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು’ ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ಡಿಸಿಎಂಗೆ ಮನವಿ ಸಲ್ಲಿಸಿದರು.
ಪ್ಯಾಕೇಜ್ ಕಾಮಗಾರಿಗಳು ಬೇಡ, ಕೇಂದ್ರ ಕಚೇರಿಯಿಂದ ಬಿಲ್ ಪಾವತಿ, ಒಂದು ಸಂಸ್ಥೆಯಿಂದ ಗುಣಮಟ್ಟ ಪರಿಶೀಲನೆ, 2022ರ ಹಿಂದೆ ಅನುಮೋದನೆಗೊಂಡಿರುವ ಕಾಮಗಾರಿಗಳ ಜಿಎಸ್ಟಿಯಿಂದ ಗುತ್ತಿಗೆದಾರರಿಗೆ ವಿನಾಯಿತಿ, ಕೆಆರ್ಐಡಿಎಲ್ ವತಿಯಿಂದ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಬಿಲ್ ಪಾವತಿಗೆ ಮನವಿ ಮಾಡಿಕೊಂಡರು.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಬಿಬಿಎಂಪಿ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ರವೀಂದ್ರ, ಅಧ್ಯಕ್ಷ ನಂದಕುಮಾರ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.