ಬೆಂಗಳೂರು: ಜರ್ಮನಿಯಿಂದ ಹಿಂದಿರುಗಿದ್ದ ಕೊರೊನಾ ವೈರಸ್ ಸೋಂಕಿತ ಮಗನನ್ನು (25) ಇಲ್ಲಿನ ಅತಿಥಿ ಗೃಹದಲ್ಲಿ ಗೌಪ್ಯವಾಗಿ ಇರಿಸಿದ್ದ ನೈಋತ್ಯ ರೈಲ್ವೆ ಇಲಾಖೆಯ ಮಹಿಳಾ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
‘ಅಧಿಕಾರಿಯು ತಮ್ಮ ಮಗ ಜರ್ಮನಿಯಿಂದ ವಾಪಸ್ ಆಗಿರುವ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡದಿರುವುದು ಮಾತ್ರವಲ್ಲ,ಆತ ಬೆಂಗಳೂರು (ಸಂಗೋಳ್ಳಿ ರಾಯಣ್ಣ) ರೈಲು ನಿಲ್ದಾಣದ ಸಮೀಪವೇ ಇರುವ ರೈಲ್ವೆ ಅತಿಥಿ ಗೃಹದಲ್ಲಿಉಳಿದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸುವ ಮೂಲಕ ಇತರರ ಆರೋಗ್ಯವನ್ನೂ ಅಪಾಯಕ್ಕೆ ದೂಡಿದ್ದಾರೆ’ ಎಂದು ಇಲಾಖೆಯ ವಕ್ತಾರೆ ಇ. ವಿಜಯ ತಿಳಿಸಿದ್ದಾರೆ.
ಸಂಚಾರ ವಿಭಾಗದ ಸಹಾಯಕ ಸಿಬ್ಬಂದಿ ಅಧಿಕಾರಿಯೂ ಆಗಿರುವ ವಿಜಯ, ‘ಜರ್ಮನಿಯಿಂದ ಸ್ಪೇನ್ ಮೂಲಕ ಮಾರ್ಜ್ 13ರಂದು ದೇಶಕ್ಕೆ ಮರಳಿದ್ದ ಆತನಿಗೆ, ಸ್ವಯಂ ಪ್ರತ್ಯೇಕವಾಸದಲ್ಲಿ (ಸೆಲ್ಫ್ ಕ್ವಾರಂಟೈನ್) ಇರುವಂತೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೂಚಿಸಲಾಗಿತ್ತು. ಮಾರ್ಚ್ 18ರಂದು ಸೋಂಕು ಇರುವುದು ದೃಢಪಟ್ಟಿದೆ’ ಎಂದಿದ್ದಾರೆ.
‘ವಾಸ್ತವದಲ್ಲಿ ಅವರು (ಮಹಿಳಾಧಿಕಾರಿ) ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲುಮಗನನ್ನು ಬಚ್ಚಿಟ್ಟಿದ್ದಾರೆ. ಆದರೆ, ನಮ್ಮನ್ನೆಲ್ಲ ಅಪಾಯಕ್ಕೆ ದೂಡಿದ್ದಾರೆ’ ಎಂದು ದೂರಿದ್ದಾರೆ.
ಕರ್ನಾಟಕ ಸಾಂಕ್ರಾಮಿಕ ರೋಗ ಕಾಯಿದೆ (ಕರ್ನಾಟಕ ಸಾಂಕ್ರಾಮಿಕ ರೋಗ ಕೋವಿಡ್–19 ನಿಯಮ, 2020) ಪ್ರಕಾರ ಕೋವಿಡ್–19 ಕಾಣಿಸಿಕೊಂಡಿರುವ ಯಾವುದೇ ದೇಶದಿಂದ ಪ್ರಯಾಣಿಸಿದ ವ್ಯಕ್ತಿಯ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಬೇಕಿದೆ. ಆ ಬಗ್ಗೆ ಮಾತನಾಡಿರುವ ವಿಜಯಾ,ತಮ್ಮ ಮಗನ ಬಗ್ಗೆ ಅವರು ರಾಜ್ಯ ಸರ್ಕಾರ ಇಲ್ಲವೇ ರೈಲ್ವೆ ಇಲಾಖೆಗೆ ಮಾಹಿತಿ ನೀಡಬೇಕಿತ್ತು ಎಂದಿದ್ದಾರೆ.
‘ರೈಲ್ವೆ ಅಧಿಕಾರಿಗಳಿಂದ ತುಂಬಿರುವ ವಿಶ್ರಾಂತಿ ಗೃಹವನ್ನುತಮ್ಮ ಮಗನ ಪ್ರತ್ಯೇಕ ವಾಸಕ್ಕೆ ಮಹಿಳಾ ಅಧಿಕಾರಿ ಬಳಸಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು’ ಎಂದೂ ಹೇಳಿದ್ದಾರೆ. ಮುಂದುವರಿದು, ‘ಅಧಿಕಾರಿಯ ಮಗ ಶುಕ್ರವಾರದಿಂದ ಭಾನುವಾರದವರೆಗೆ (ಮಾರ್ಚ್ 13–15) ವಿಶ್ರಾಂತಿ ಗೃಹದಲ್ಲಿ ಉಳಿದಿದ್ದ. ಆತ ತಾನಾಗಿಯೇ ಮಾದರಿ ಪರೀಕ್ಷೆಗೆ ಆಸ್ಟತ್ರೆಗೆ ಹೊರಟಿದ್ದಾನೆ. ಅದಾದ ಬಳಿಕ ಆತನಲ್ಲಿ ಸೋಂಕು ಇರುವುದನ್ನು ವರದಿಗಳು ದೃಢಪಡಿಸಿವೆ’
‘ಮುನ್ನೆಚ್ಚರಿಕೆಯಾಗಿ, ಸದ್ಯ ವಿಶ್ರಾಂತಿ ಗೃಹವನ್ನು ಮುಚ್ಚಲಾಗಿದೆ. ಅಲ್ಲಿನ ಸ್ವಚ್ಛತಾ ಸಿಬ್ಬಂದಿ ಮೇಲೂ ನಿಗಾ ಇಡಲಾಗಿದೆ. ವಿಶ್ರಾಂತಿ ಗೃಹದಲ್ಲಿ ಉಳಿದುಕೊಂಡಿದ್ದ ಅಧಿಕಾರಿಗಳು ಹಾಗೂ ಕುಟುಂಬದವರಿಗೆ, ಸೋಂಕಿನ ಲಕ್ಷಣ ಕಂಡುಬಂದರೆ ಕೂಡಲೇ ತಿಳಿಸುವಂತೆ ಸೂಚಿಸಲಾಗಿದೆ. ಅಲ್ಲಿ ಉಳಿದುಕೊಂಡಿದ್ದವರ ಮಾಹಿತಿಯನ್ನು ಸರ್ಕಾರದ ಜೊತೆಗೆ ಹಂಚಿಕೊಳ್ಳಲಾಗಿದೆ. ಕೀಟ ನಿರೋಧಕವನ್ನು ಸಿಂಪಡಿಸಲಾಗಿದೆ’ ಎಂದೂ ಮಾಹಿತಿ ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.