ಬೆಂಗಳೂರು: ಕೊಡಗು ಜಿಲ್ಲೆ ಮತ್ತು ಕೇರಳದ ವಯನಾಡು ಪ್ರದೇಶದಲ್ಲಿ ಮಳೆಯಾಗುತ್ತಿರುವ ಕಾರಣ ಕೆಆರ್ಎಸ್ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ.
ವಾರದಿಂದೀಚೆಗೆ ಜಲಾಶಯಕ್ಕೆ 2 ಅಡಿ ನೀರು ಹರಿದು ಬಂದಿದೆ. ಜಲಾಶಯದ ನೀರಿನ ಮಟ್ಟ ಭಾನುವಾರ 82.30 ಅಡಿಗೆ ತಲುಪಿದ್ದು 3,405 ಕ್ಯುಸೆಕ್ ಒಳಹರಿವು, 533 ಕ್ಯುಸೆಕ್ ಹೊರಹರಿವು ಇತ್ತು. ಈ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 124.80 ಅಡಿಗಳು.
ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಭಾನುವಾರ ಉತ್ತಮ ಮಳೆ ಸುರಿಯಿತು. ನೆಲ ತಂಪಾಯಿತು.
ಕಲಬುರಗಿ ಜಿಲ್ಲೆಯ ಚಿಂಚೋಳಿ, ಯಾದಗಿರಿ ಹಾಗೂ ದೇವದುರ್ಗ ಸೇರಿದಂತೆ ಹಲವೆಡೆ ಗುಡುಗು ಸಿಡಿಲಿ ನೊಂದಿಗೆ ಧಾರಾಕಾರ ಮಳೆಯಾಗಿದೆ.
ಯಾದಗಿರಿ ನಗರದ ರೈಲು ನಿಲ್ದಾಣ ಮತ್ತು ಹಳೆ ಬಸ್ ನಿಲ್ದಾಣದ ರಸ್ತೆ ಜಲಾವೃತಗೊಂಡಿತು. ಚರಂಡಿ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿತು.
ಅಲ್ಲಿಪುರ ಗ್ರಾಮದಲ್ಲಿ ಆಟೊ, ಟ್ರ್ಯಾಕ್ಟರ್ ಮೇಲೆ ಮರ ಉರುಳಿ ಬಿದ್ದಿದೆ. ಹಲವು ಗ್ರಾಮಗಳಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಕಲಬುರಗಿ ಜಿಲ್ಲೆಯ ವಾಡಿ ಸಮೀಪದ ಲಾಡ್ಲಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಸತೀಶ ಪ್ರಹ್ಲಾದ್ (43) ಹಾಗೂ ಪ್ರಕಾಶ ಏಕನಾಥ (50) ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟರು.