ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಘೋಷಿಸಿದಂತೆ, ರಾಜ್ಯದಾದ್ಯಂತ ಭಾನುವಾರ (ಮೇ 24) ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಾಗಲಿದೆ.
ಈ ಹಿನ್ನೆಲೆಯಲ್ಲಿ ನಗರದಲ್ಲೂ ಅಗತ್ಯ ವಸ್ತುಗಳು ಮತ್ತು ಸೇವೆಗಳನ್ನು ಬಿಟ್ಟು ಉಳಿದೆಲ್ಲ ಚಟುವಟಿಕೆಗೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ. ಜನರ ಓಡಾಟ ನಿಷೇಧಿಸಲಾಗಿದ್ದು, ವಾಹನಗಳ ಸಂಚಾರವೂ ಸ್ಥಗಿತಗೊಳ್ಳಲಿದೆ. ಅನಗತ್ಯವಾಗಿ ಓಡಾಡಿದರೆ ಅಥವಾ ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.
ಕರ್ಫ್ಯೂ ಹಿನ್ನೆಲೆಯಲ್ಲಿ ರಾಜ್ಯದ ಒಳಗೆ ಬರುವ ಹಾಗೂ ರಾಜ್ಯದಿಂದ ಹೊರಗೆ ಹೋಗುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಎಲ್ಲ ಗಡಿಗಳನ್ನು ಬಂದ್ ಮಾಡಲಾಗಿದೆ. ಮಾರುಕಟ್ಟೆಗಳಲ್ಲಿ ಚಟುವಟಿಕೆ ಸ್ತಬ್ಧಗೊಳ್ಳಲಿದೆ. ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೆ, ಮೊದಲೇ ನಿಗದಿಯಾಗಿರುವ ಮದುವೆಗಳನ್ನು ಷರತ್ತಿಗೆ ಒಳಪಟ್ಟು ನಡೆಸಲು ಅವಕಾಶ ನೀಡಲಾಗಿದೆ.
ಲಾಕ್ ಡೌನ್ 1.0 ಮತ್ತು ಲಾಕ್ಡೌನ್ 2.0ದಲ್ಲಿ ಇದ್ದಂತೆಯೇ ನಿರ್ಬಂಧಗಳು ಜಾರಿಯಲ್ಲಿ ಇರಲಿವೆ. ರಾಜ್ಯದಾದ್ಯಂತ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಲಿದೆ. ಮನೆಯಿಂದ ಯಾರೂ ಹೊರಬರದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ವಾಹನ ಸಂಚಾರ ತಡೆಯಲು ಎಲ್ಲ ರಸ್ತೆಗಳಲ್ಲಿ ಬಾರಿಕೇಡ್ ಅಳವಡಿಸಲು ನಿರ್ಧರಿಸಲಾಗಿದೆ.
ಏನೇನು ಇರಲಿವೆ?
* ಹಣ್ಣು, ತರಕಾರಿ, ದಿನಸಿ, ಮೊಟ್ಟೆ, ಮಾಂಸ
* ಆಸ್ಪತ್ರೆ, ಔಷಧ ಅಂಗಡಿ
* ವೈದ್ಯರು, ದಾದಿಯರು, ಆಂಬ್ಯುಲೆನ್ಸ್ ಓಡಾಟ
* ರೋಗಿಗಳು ತಪಾಸಣೆಗೆ ಆಸ್ಪತ್ರೆಗೆ ಹೋಗಲು ಅವಕಾಶ
* ಮೊದಲೇ ನಿಗದಿಯಾಗಿದ್ದರೆ, ಷರತ್ತಿಗೆ ಒಳಪಟ್ಟು ಮದುವೆಗೆ ಅವಕಾಶ
* ವಿಮಾನನಿಲ್ದಾಣಕ್ಕೆ ತೆರಳುವ ವಾಹನಗಳಿಗೆ ವಿನಾಯಿತಿ
ಏನೇನು ಇರುವುದಿಲ್ಲ?
* ಸಾರ್ವಜನಿಕ ಸಂಚಾರ ನಿರ್ಬಂಧ (ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯವ್ಯ ಈಶಾನ್ಯ ನಿಗಮದ ಬಸ್ಗಳು)
* ವಾಣಿಜ್ಯ ಮಳಿಗೆಗೆಳು, ಬಸ್, ಪ್ರಮುಖ ರಸ್ತೆಗಳೂ ಬಂದ್
* ಮದ್ಯದಂಗಡಿ, ಸಲೂನ್, ಉದ್ಯಾನ
* ತುರ್ತು ಅಗತ್ಯಗಳಿಗೆ ಹೊರತುಪಡಿಸಿ ಖಾಸಗಿ ವಾಹನ ಬಳಸುವಂತಿಲ್ಲ