ಬೆಂಗಳೂರು: ‘ಕನ್ನಡ ವಿಮರ್ಶಾ ಕ್ಷೇತ್ರ ಕ್ಷಾಮವನ್ನು ಎದುರಿಸುತ್ತಿದ್ದು, ಈ ಹೊತ್ತು ವಿಮರ್ಶೆಯು ಪರಸ್ಪರ ಹೊಗಳಿಕೆಯ ಸಹಕಾರ ಸಂಘವಾಗಿದೆ’ ಎಂದು ಸಾಹಿತಿ ದೊಡ್ಡರಂಗೇಗೌಡ ಬೇಸರ ವ್ಯಕ್ತಪಡಿಸಿದರು.
ಪ್ರೊ.ಎಲ್.ಎಸ್. ಶೇಷಗಿರಿರಾವ್ ಅವರ ನೆನಪಿನಲ್ಲಿ ಸಪ್ನ ಬುಕ್ ಹೌಸ್, ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಜಂಟಿಯಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಸಂಚಯ’ ಹಾಗೂ ಶಿವಕುಮಾರ್ ಡಿ.ಬಿ. ಅವರ ‘ಎಲ್.ಎಸ್. ಶೇಷಗಿರಿ ರಾವ್ ಅವರ ಜೀವನ ಮತ್ತು ಸಾಹಿತ್ಯ’ ಕೃತಿ ಬಿಡುಗಡೆಯಾಯಿತು.
‘ಸಾಹಿತ್ಯ ಕ್ಷೇತ್ರದಲ್ಲಿ ಗುಂಪುಗಾರಿಕೆ, ಜಾತೀಯತೆ ಬೆಳೆದಿದೆ. ನವ್ಯ, ಬಂಡಾಯವೆಂದು ಸಾಹಿತ್ಯ ಕ್ಷೇತ್ರ ವಿಭಾಗವಾಗಿ, ನಿಜವಾದ ವಿಮರ್ಶೆ ನಾಪತ್ತೆಯಾಗಿದೆ. ವಿಮರ್ಶಕರು ವಸ್ತುನಿಷ್ಠವಾಗಿರುವ ಬದಲು, ವ್ಯಕ್ತಿ ನಿಷ್ಠರಾಗಿ ಬರೆಯುತ್ತಿದ್ದಾರೆ. ಪಾಶ್ಚಾತ್ಯ ಹಳದಿ ಕನ್ನಡಕವನ್ನು ಹಾಕಿಕೊಂಡು, ವಿಮರ್ಶೆ ಮಾಡಲಾಗುತ್ತಿದೆ. ಈ ವೇಳೆ ಭಾರತೀಯ ಪರಂಪರೆ ಅರಿತ, ಕನ್ನಡ ಸಂಸ್ಕೃತಿಯನ್ನು ಅರಗಿಸಿಕೊಂಡ ವಿಮರ್ಶಕರ ಅಗತ್ಯ ಇದೆ’ ಎಂದು ದೊಡ್ಡರಂಗೇಗೌಡ ಹೇಳಿದರು.
ಪತ್ರಕರ್ತ ಬಾಬು ಕೃಷ್ಣಮೂರ್ತಿ, ‘ಶೇಷಗಿರಿ ರಾವ್ ಅವರು ಮನಸ್ಸಿಗೆ ಲಗ್ನ ಮಾಡಿಕೊಂಡು, ವಿಮರ್ಶೆ ಮಾಡುತ್ತಿದ್ದರು. ನನ್ನ ‘ಮಹಾಸಾಧಕ’ ಕಾದಂಬರಿಗೆ ಅವರು ಮುನ್ನುಡಿ ಬರೆದಿದ್ದರು. ಇದು ಅವರು ಬರೆದ ಕೊನೆಯ ಮುನ್ನುಡಿಯೂ ಆಗಿದೆ’ ಎಂದು ತಿಳಿಸಿದರು.
ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ, ‘ಶೇಷಗಿರಿ ರಾವ್ ಅವರ ಶತಮಾನೋತ್ಸವ ಸಮೀಪಿಸುತ್ತಿದೆ. ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಮಿತಿ ರಚಿಸಬೇಕು’ ಎಂದು ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.