‘ಪ್ರಾಣಿ ಪಕ್ಷಿಗಳಿಗೆ ಇರುವಂತಹ ತಾಣಗಳನ್ನು ಹಂತಹಂತವಾಗಿ ಕಸಿದುಕೊಂಡು ಬರುತ್ತಿರುವುದರಿಂದ ಅವುಗಳ ಸಂತತಿಯೂ ಕ್ಷೀಣಿಸುತ್ತಿದೆ. ಇಂದೇ ಎಚ್ಚೆತ್ತುಕೊಳ್ಳದಿದ್ದರೆ ತೀರಾ ಅಪಾಯವಿದೆ’ ಎಂದು ರಾಮೋಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ವಿ.ವೇಣುಗೋಪಾಲ್ ಹೇಳುತ್ತಾರೆ.
‘ಕೆರೆಯಲ್ಲಿ ನೀರು ಶೇಖರಣೆಯಾಗಿ ಅಂತರ್ಜಲ ಉಳಿಯಬೇಕು. ಮುಂದಿನ ಪೀಳಿಗೆಗೆ ಕೆರೆ ಉಳಿಸಬೇಕು. ಬಿಡಿಎ ವತಿಯಿಂದ ಕೆರೆ ಅಭಿವೃದ್ಧಿಗಾಗಿ ನೀಲನಕ್ಷೆ ತಯಾರಿಸಲಾಗಿದೆ’ ಎಂದು ವೇಣುಗೋಪಾಲ್ ವಿವರಿಸಿದರು. ‘ಹತ್ತು ವರ್ಷಗಳ ಹಿಂದೆ ಕೆರೆಯಲ್ಲಿ ನೀರು ಶೇಖರಣೆಗೊಂಡು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಕೆರೆಯ ದಂಡೆಯ ಬದಿಯಲ್ಲಿ ಕಾಡು ಪ್ರಾಣಿ ಪಕ್ಷಿಗಳ ಆಟಗಳನ್ನು ನೋಡುವುದರಿಂದ ಮನಸ್ಸು ತುಂಬಿಹೋಗುತ್ತಿತ್ತು. ಆ ಭಾಗ್ಯ ನಮ್ಮ ಮಕ್ಕಳಿಗೆ ಸಿಗುತ್ತಿಲ್ಲ’ ಎನ್ನುತ್ತಾರೆ ಆರ್.ಪಿ.ಪ್ರಕಾಶ್.
‘ನಗರೀಕರಣ ಪ್ರಭಾವದಿಂದ ಬಡಾವಣೆ ನಿರ್ಮಾಣವಾಗುತ್ತಿರುವುದರಿಂದ ಕೆರೆಯ ಅಭಿವೃದ್ಧಿ, ಸಂರಕ್ಷಣೆ ಮರೀಚಿಕೆಯಾಗಿದೆ. ಕೆರೆಯ ಅಭಿವೃದ್ಧಿ ಬಗ್ಗೆ ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯಿತಿ ಮುಂದಾಗಿಲ್ಲ. ಬಡಾವಣೆ ನಿರ್ಮಾಣದಿಂದಾಗಿ ನೀರುಗಾಲುವೆ ಮಾಯವಾಗಿದೆ. ಮಳೆ ನೀರು ಕೆರೆಗೆ ಹರಿದು ಬರದೆ ಕೆರೆಯಲ್ಲಿ ನೀರಿಲ್ಲದಂತಾಗಿದೆ’ ಎಂದು ನೊಂದು ನುಡಿದರು.
ಇಷ್ಟೆಲ್ಲದರ ನಡುವೆ ಸ್ವಯಂ ಪ್ರೇರಿತರಾದ ಪರಿಸರ ಪ್ರೇಮಿ ಸಂಜಯ್ಕುಮಾರ್ ಕೆರೆಗೆ ಸೇರುತ್ತಿದ್ದ ಚರಂಡಿ ನೀರಿನ ಮಾರ್ಗ ಬದಲಾವಣೆಗಾಗಿ ಒಂದು ಕಿಲೋಮೀಟರ್ ದೂರದವರೆಗೆ ಮೋರಿ ನಿರ್ಮಿಸಿ ಹಳ್ಳಕ್ಕೆ ಕಲುಷಿತ ನೀರು ಸೇರುವಂತೆ ವ್ಯವಸ್ಥೆ ಕಲ್ಪಿಸಿ
ದ್ದಾರೆ. ‘ಕೆರೆಯನ್ನೇ ನಂಬಿರುವ ಜಲಚರಗಳು ಉಳಿಯಬೇಕು. ಪರಿಸರ ಸಮತೋಲನ ಕಾಯ್ದುಕೊಳ್ಳಬೇಕು ಎಂಬ ಉದ್ದೇಶದಿಂದ ಚರಂಡಿ ನಿರ್ಮಿಸಿದ್ದೇವೆ’ ಎನ್ನುತ್ತಾರೆ ಸಂಜಯ್ಕುಮಾರ್.