ಬೆಂಗಳೂರು: ಆಟೊದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ₹ 2.57 ಲಕ್ಷ ಹಣವನ್ನು ಚಾಲಕ ಡಿ. ಮೋಹನ್ ಎಂಬುವರು ಪೊಲೀಸರ ಮೂಲಕ ವಾಪಸ್ ನೀಡಿದ್ದು, ಅವರನ್ನು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಸನ್ಮಾನಿಸಿದ್ದಾರೆ.
‘ಆನಂದಪುರದ ನಿವಾಸಿ ಮೋಹನ್, ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡು ಸಿರ್ಸಿ ವೃತ್ತದಲ್ಲಿ ಇಳಿಸಿದ್ದರು. ಅದೇ ವೇಳೆಯೇ ಪ್ರಯಾಣಿಕ, ಹಣವಿದ್ದ ಬ್ಯಾಗ್ನ್ನು ಆಟೊದಲ್ಲಿ ಬಿಟ್ಟು ಹೋಗಿದ್ದರು. ಬ್ಯಾಗ್ ನೋಡಿದ್ದ ಚಾಲಕ ಮೋಹನ್, ಪ್ರಯಾಣಿಕನಿಗಾಗಿ ಹುಡುಕಾಡಿದ್ದರು’ ಎಂದು ಸಂಜೀವ್ ಪಾಟೀಲ ಹೇಳಿದರು.
‘ಬ್ಯಾಗ್ ಸಮೇತ ಚಾಮರಾಜಪೇಟೆ ಠಾಣೆಗೆ ಬಂದಿದ್ದ ಮೋಹನ್, ಪೊಲೀಸರ ಬಳಿ ಘಟನೆ ಬಗ್ಗೆ ವಿವರಿಸಿದ್ದರು. ಬ್ಯಾಗ್ ವಾಪಸ್ ನೀಡಿ ಮಾನವೀಯತೆ ಮೆರೆದ ಮೋಹನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇವರ ಕೆಲಸ ಇತರೆ ಚಾಲಕರಿಗೂ ಆದರ್ಶವಾಗಬೇಕು’ ಎಂದೂ ಅವರು ತಿಳಿಸಿದರು.