ಬೆಂಗಳೂರು: ಕಾಸರಗೋಡಿನ ಯುವತಿ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂದು ಆಗ್ರಹಿಸಿ ಸಂಸದೆ ಶೋಭ ಕರಂದ್ಲಾಜೆ ಡಿಜಿಪಿ ನೀಲಮಣಿರಾಜು ಅವರಿಗೆ ಸೋಮವಾರ ದೂರು ನೀಡಿದರು.
ಬಳಿಕ ಮಾತನಾಡಿದ ಅವರು, ಆರೋಪಿಗಳು ಯುವತಿ ಮೇಲೆ ಬೆಂಗಳೂರು, ಮಂಗಳೂರು, ಕಾಸರಗೋಡಿನಲ್ಲಿ ದೌರ್ಜನ್ಯ ಎಸಗಿದ್ದಾರೆ. ಬೆಂಗಳೂರು ಮೀರಿ ಹೊರ ವ್ಯಾಪ್ತಿಯಲ್ಲಿ ಕೃತ್ಯ ನಡೆದಿರುವುದರಿಂದ ಪ್ರಕರಣವನ್ನು ಬೆಂಗಳೂರು ಪೊಲೀಸರಿಂದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದರು.
ಆರೋಪಿಗಳು ಯುವತಿ ಕುಟುಂಬವನ್ನು ಮತಾಂತರಕ್ಕೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಶಂಕಿತ ಉಗ್ರರ ಬಂಧನವಾಗಿದೆ. ಆದ್ದರಿಂದ ಈ ಕೃತ್ಯ ಹಾಗೂ ಮತಾಂತರದ ಹಿಂದೆ ದೊಡ್ಡ ಸಂಚಿರುವ ಅನುಮಾನವಿದೆ ಎಂದರು
ಮತಾಂತರ ಯತ್ನ ಮತ್ತು ದೌರ್ಜನ್ಯ ಬಗ್ಗೆ ವಿಸೃತ ತನಿಖೆ ಆಗಬೇಕು. ಈ ಕಾರಣಕ್ಕೆ ಸಿಐಡಿ ಡಿಜಿ ಪ್ರವೀಣ್ ಸೂದ್ ಮತ್ತು ಡಿಜಿಪಿ ನೀಲಮಣಿ ರಾಜು ಅವರಿಗೆ ದೂರು ನೀಡಲಾಗಿದೆ ಎಂದರು.