ಬೆಂಗಳೂರು: ಬಿಜೆಪಿ ಶಾಸಕರಾದ ಅರಬೈಲ್ ಶಿವರಾಂ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸೋಮವಾರ ಭೇಟಿಮಾಡಿ ಚರ್ಚಿಸಿದರು.
ರಾಜ್ಯಸಭಾ ಚುನಾವಣೆ ದಿನದಿಂದಲೂ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಇಬ್ಬರೂ ಶಾಸಕರು, ಕಾಂಗ್ರೆಸ್ ನಾಯಕರ ಜತೆ ನಿಕಟವಾಗಿದ್ದಾರೆ. ಶಿವರಾಂ ಹೆಬ್ಬಾರ್ ಅವರ ಮಗ ವಿವೇಕ್ ಹೆಬ್ಬಾರ್ ಲೋಕಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ಸೇರಿದ್ದರು. ಸೋಮವಾರದ ಭೇಟಿ ವೇಳೆ ವಿವೇಕ್ ಹೆಬ್ಬಾರ್ ಕೂಡ ಜತೆಗಿದ್ದರು.
ಲೋಕಸಭಾ ಚುನಾವಣೆಯಲ್ಲಿ ಶಿವರಾಂ ಹೆಬ್ಬಾರ್ ಮತ್ತು ಸೋಮಶೇಖರ್ ಅವರು ಬಿಜೆಪಿ ಅಭ್ಯರ್ಥಿಗಳ ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ. ಪಕ್ಷದ ಯಾವುದೇ ಚಟುವಟಿಕೆಗಳಲ್ಲೂ ಭಾಗವಹಿಸಿರಲಿಲ್ಲ.
ಭೇಟಿ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸೋಮಶೇಖರ್, ‘ಹಲವು ದಿನಗಳಿಂದ ಶಿವಕುಮಾರ್ ಅವರನ್ನು ಭೇಟಿಮಾಡಿರಲಿಲ್ಲ. ಲೋಕಸಭಾ ಚುನಾವಣೆ ಮುಗಿದಿರುವುದರಿಂದ ಭೇಟಿ ಮಾಡಿದೆವು. ರಾಜಕೀಯ ಕುರಿತು ಯಾವುದೇ ಚರ್ಚೆ ನಡೆಸಿಲ್ಲ’ ಎಂದರು.