ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌’ ಎಡ್ಯುವರ್ಸ್‌ನಲ್ಲಿ ವಿಶೇಷ ಉಪನ್ಯಾಸಗಳು

Published 27 ಮಾರ್ಚ್ 2024, 16:02 IST
Last Updated 27 ಮಾರ್ಚ್ 2024, 16:02 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಬಳಗ ಪ್ರಸ್ತುತಪಡಿಸುವ ಕರ್ನಾಟಕದ ಪ್ರತಿಷ್ಠಿತ ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’ ಏಪ್ರಿಲ್‌ 6 ಮತ್ತು 7ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಸಿಇಟಿ ಹಾಗೂ ಕಾಮೆಡ್‌–ಕೆ ಕುರಿತು ವಿಶೇಷ ಗೋಷ್ಠಿಗಳು ನಡೆಯಲಿವೆ. ಏಪ್ರಿಲ್‌ 13 ಮತ್ತು 14ರಂದು ಹುಬ್ಬಳ್ಳಿಯಲ್ಲಿಯೂ ಆಯೋಜಿಸಲಾಗಿದೆ.

ಹದಿಮೂರು ವರ್ಷಗಳಿಂದ ಈ ಶೈಕ್ಷಣಿಕ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಒಂದೇ ಸೂರಿನಡಿ ಹಲವಾರು ಪರಿಹಾರಗಳನ್ನು ಇಲ್ಲಿ ಪಡೆಯಬಹುದಾಗಿದೆ. ಎರಡು ದಿನಗಳ ಈ ಮೇಳದಲ್ಲಿ ಪರಿಣತರು, ತಜ್ಞರು ಪಾಲ್ಗೊಳ್ಳುತ್ತಿದ್ದಾರೆ. ಪರಿಣತರೊಂದಿಗೆ ಸಂವಾದ, ಉಪನ್ಯಾಸ ಮತ್ತು ಚರ್ಚೆಗಳನ್ನು ಆಯೋಜಿಸಲಾಗುತ್ತದೆ. ಪಾಲಕರ ಅನುಮಾನಗಳಿಗೆ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಜ್ಞರು ಉತ್ತರಿಸಲಿದ್ದಾರೆ.

50ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿವೆ. ಮಳಿಗೆ ಹಾಕುವುದಷ್ಟೇ ಅಲ್ಲ, ವಿದ್ಯಾರ್ಥಿಗಳಿಗೆ ಅವರ ಅಭಿರುಚಿಗೆ ತಕ್ಕುದಾದ ಆಯ್ಕೆ ಮಾಡಿಕೊಳ್ಳಲು ಸಮಾಲೋಚನೆ, ಸಲಹೆ ನೀಡಲು ತಜ್ಞರು ಇರಲಿದ್ದಾರೆ.

ಪಿಯುಸಿ ಅಥವಾ ತತ್ಸಮಾನ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ದೊರೆಯಲಿದೆ. ರಾಜ್ಯದಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಿಬ್ಬಂದಿ ತಮ್ಮಲ್ಲಿರುವ ವಿಶೇಷ ಕೋರ್ಸ್‌ಗಳ, ಪದವಿಗಳ ಮಾಹಿತಿ ನೀಡಲಿದ್ದಾರೆ.

ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಪಾಲಕರಿಗೂ ಸಹ ಮಾರ್ಗದರ್ಶಿಯಾಗಿರಲಿದೆ. ಯಾವ ಕೋರ್ಸು ಮಾಡಿದರೆ ಉದ್ಯೋಗಾವಕಾಶಗಳು ಹೇಗಿವೆ? ಉದ್ಯೋಗಾರ್ಹತೆ ಹೇಗೆ ಪಡೆಯಬಹುದು? ಯಾವ ಶೈಕ್ಷಣಿಕ ಸಂಸ್ಥೆಗಳು ಏನೆಲ್ಲ ಅನುಕೂಲಗಳನ್ನು ನೀಡುತ್ತಿವೆ ಎಂಬುದಲ್ಲದೆ, ಶಿಕ್ಷಣ ಸಾಲದ ಕುರಿತೂ ಮಾಹಿತಿ ಪಡೆಯಬಹುದಾಗಿದೆ.

ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ವಿಶೇಷ ಉಪನ್ಯಾಸಗಳು, ಅವರ ಅನುಮಾನಗಳನ್ನು ಪರಿಹರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಿಇಟಿ ಮತ್ತು ಕಾಮೆಡ್‌–ಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಸಮಗ್ರವಾಗಿ ನೀಡಲಾಗುತ್ತದೆ.

Ad6 Advertising ಬೆಂಬಲಿಸುತ್ತಿರುವ ಈ ಮೇಳಕ್ಕೆ ‘ನ್ಯೂಸ್‌ ಫಸ್ಟ್‌’ ಕನ್ನಡ ಟೆಲಿವಿಷನ್‌ ಸಹಭಾಗಿತ್ವವಿದೆ.

ಮಾಕ್‌ ಟೆಸ್ಟ್‌: ಸಿಇಟಿ ಮತ್ತು ಕಾಮೆಡ್‌–ಕೆಗೆ ಪರೀಕ್ಷಾರ್ಥಿಗಳಿಗೆ ಎರಡೂ ದಿನ ಮಾಕ್‌ ಟೆಸ್ಟ್‌ (ಅಣಕು ಪರೀಕ್ಷೆ) ಅನ್ನು ಹಮ್ಮಿಕೊಳ್ಳಲಾಗುವುದು. ಆಸಕ್ತ ವಿದ್ಯಾರ್ಥಿಗಳು www.deccanherald.com/eduverse ಜಾಲತಾಣಕ್ಕೆ ಲಾಗಿನ್‌ ಆಗಿ, ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ, ನಿಮ್ಮ ಸ್ಥಳವನ್ನು ಕಾಯ್ದಿರಿಸಿಕೊಳ್ಳಿ. ಈ–ಮಾಕ್‌ ಟೆಸ್ಟ್‌ನಲ್ಲಿ  ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶಗಳಿವೆ.

ಬೆಂಗಳೂರಿನಲ್ಲಿ ಗೇಟ್‌ 2/3 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಮೇಳಕ್ಕೆ ಮುಕ್ತ ಅವಕಾಶವಿದೆ.

ವಿಶೇಷ ಉಪನ್ಯಾಸಗಳು:

ಏಪ್ರಿಲ್‌ 6ರಂದು ಬೆಳಿಗ್ಗೆ 10ಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿವೃತ್ತ ಪಿಆರ್‌ಒ ಎ.ಎಸ್‌.ರವಿ ಅವರು ಸಿಇಟಿ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಿ.ಇ.ಟಿ ಕೌನ್ಸೆಲಿಂಗ್‌ಗೆ ಸಿದ್ಧತೆ ಹೇಗೆ? ಬೇಕಾಗುವ ದಾಖಲೆಗಳು ಯಾವು? ಎಂಜಿನಿಯರಿಂಗ್‌ ಕಾಲೇಜು ಆಯ್ಕೆ ಹೇಗೆ? ಎಂಬ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಈ ಗೋಷ್ಠಿಯಲ್ಲಿ ಉತ್ತರ ಸಿಗಲಿದೆ.

ಏಪ್ರಿಲ್‌ 7ರಂದು ಕಾಮೆಡ್‌–ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್‌.ಕುಮಾರ್ ಅವರು ಕಾಮೆಡ್‌ –ಕೆ ಕುರಿತು ಮಾಹಿತಿ ನೀಡಲಿದ್ದಾರೆ. ಈ ಗೋಷ್ಠಿಯಲ್ಲಿ ಕೋರ್ಸ್‌ಗಳ ಆಯ್ಕೆ, ಉದ್ಯೋಗಾವಕಾಶ, ಕಾಲೇಜಿನಲ್ಲಿರುವ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಇದರೊಂದಿಗೆ ‘ರೆಡಿಯೊ ಸಿಟಿ’ ಎಫ್‌ಎಂನ ಆರ್‌ಜೆ ರಜಸ್‌ ಅವರು ರೆಡಿಯೊ ಹಾಗೂ ವಾಯ್ಸ್‌ ಇಂಡಸ್ಟ್ರಿಯಲ್ಲಿರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಪೊಲೊ ನ್ಯಾಷನಲ್‌ ಸ್ಕೂಲ್‌ನ ಉಪಾಧ್ಯಕ್ಷೆ ಐಶ್ವರ್ಯಾ ಡಿ.ಕೆ.ಎಸ್ ಹೆಗ್ಡೆ ಅವರು ‘ಕಲಿಕೆ ಹಾಗೂ ಬೆಳವಣಿಗೆ’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ನೋಂದಣಿಗಾಗಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ
ನೋಂದಣಿಗಾಗಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT