ಬೆಂಗಳೂರು:ತೈಲ ದರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಸಂಘಟನೆಯ ಸದಸ್ಯರು ಮಲ್ಲೇಶ್ವರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಎಸ್ಯುಸಿಐ ಬೆಂಗಳೂರು ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಎನ್.ಶ್ರೀರಾಮ್,‘ಕೋವಿಡ್ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿರುವ ಜನರಿಗೆ ಅಗತ್ಯ ವಸ್ತುಗಳ ಬೆಲೆ ಏರಿಸಿ, ಗಾಯದ ಮೇಲೆ ಬರೆ ಎಳೆಯಲಾಗುತ್ತಿದೆ. ಜನರ ಸಮಸ್ಯೆಗಳಿಗೆ ಸರ್ಕಾರಗಳ ನಿರ್ಲಕ್ಷ್ಯ ಖಂಡನೀಯ’ ಎಂದರು.
‘ಬೆಲೆ ಏರಿಕೆ ನಿಯಂತ್ರಣದ ಮೂಲಕ ಜನರಿಗೆ ನೆರವಾಗಬೇಕಿದ್ದ ಸರ್ಕಾರಗಳು, ಬೆಲೆ ಏರಿಕೆ ಪ್ರಹಾರ ನಡೆಸುತ್ತಿವೆ. ಪೆಟ್ರೋಲ್ ದರ ಶತಕ ದಾಟಿದೆ. ಗ್ಯಾಸ್ ಸಿಲಿಂಡರ್ ದರ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಇದರಿಂದ ಜನಸಾಮಾನ್ಯರ ಮೇಲೆ ಖರ್ಚಿನ ಹೊರೆಯೂ ಏರಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸರ್ಕಾರಗಳು ಕೋವಿಡ್ ಪರಿಸ್ಥಿತಿ ಇರುವುದರಿಂದ ಜನ ಬೀದಿಗಿಳಿದು ಪ್ರತಿಭಟನೆ ಮಾಡಲಾಗದ ಸ್ಥಿತಿಯನ್ನೇ ಅವಕಾಶ ಮಾಡಿಕೊಂಡು ಬೆಲೆಗಳನ್ನು ಏರಿಸುವ ಮೂಲಕ ಜನವಿರೋಧಿ ನಡೆ ಪ್ರದರ್ಶಿಸಿವೆ. ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಪರ್ಯಾಯ ವಿಧಾನಗಳ ಮೂಲಕ ಪ್ರತಿಭಟನೆ ಮುಂದುವರಿಸಬೇಕು’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.