ಬೆಂಗಳೂರು: ಟ್ಯಾಂಕರ್ ವಾಹನ ಚಾಲಕರಿಂದ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿದ್ದು, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಟ್ಯಾಂಕರ್ ಮಾಲೀಕರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಎಚ್ಎಸ್ಆರ್ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯ ಸರ್ಜಾಪುರ ರಸ್ತೆಯಲ್ಲಿ ಇತ್ತೀಚೆಗೆ ಟ್ಯಾಂಕರ್ ವಾಹನ ಮೈ ಮೇಲೆ ಹರಿದು ಬಾಲಕ ಮೃತಪಟ್ಟಿದ್ದ. ಇದರಿಂದ ಎಚ್ಚೆತ್ತಿದ್ದ ಪೊಲೀಸರು, ಟ್ಯಾಂಕರ್ಗಳ ವಿರುದ್ಧ ಶುಕ್ರವಾರ ವಿಶೇಷ ಕಾರ್ಯಾಚರಣೆ ನಡೆಸಿ 258 ಪ್ರಕರಣ ದಾಖಲಿಸಿಕೊಂಡಿದ್ದರು.
ನಗರದ ಬೆಳ್ಳಂದೂರಿನಲ್ಲಿ ಶುಕ್ರವಾರ ಟ್ಯಾಂಕರ್ ಮಾಲೀಕರ ಸಭೆ ನಡೆಸಿದ ಪೊಲೀಸರು, ಸಂಚಾರ ನಿಯಮಗಳ ಬಗ್ಗೆ ತಿಳಿವಳಿಕೆ ಮೂಡಿಸಿದರು.
‘ಚಾಲನಾ ಪರವಾನಗಿ ಚಾಲ್ತಿಯಲ್ಲಿರುವ ಚಾಲಕರು ಮಾತ್ರ ಟ್ಯಾಂಕರ್ ಚಲಾಯಿಸಬೇಕು. ಸಮವಸ್ತ್ರ ಧರಿಸಿರಬೇಕು. ಸಂಚಾರ ನಿಯಮಗಳನ್ನೆಲ್ಲ ಪಾಲಿಸಬೇಕು. ಅಡ್ಡಾದಿಡ್ಡಿಯಾಗಿ ಟ್ಯಾಂಕರ್ ಚಲಾಯಿಸಿ, ಅಪಘಾತವನ್ನುಂಟು ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದೂ ಪೊಲೀಸರು ಎಚ್ಚರಿಸಿದರು.