ಬೆಂಗಳೂರು: ತಪ್ಪು ಮಾಡಿದಾಗ ಶಿಕ್ಷಿಸಿ, ತಿದ್ದಿ ಬುದ್ಧಿ ಹೇಳಿದ ಗುರುಗಳನ್ನು ಗೌರವಿಸುವ ಶಿಕ್ಷಕರ ದಿನಾಚರಣೆ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಸಂಭ್ರಮದಿಂದ ನಡೆಯಿತು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ, ’ಶಿಕ್ಷಣ ಮತ್ತು ಸಂಸ್ಕಾರ ಜೀವನಕ್ಕೆ ಬಹಳ ಅಮೂಲ್ಯವಾದವು. ವಿದ್ಯಾರ್ಥಿಗಳಿ ಸಂಸ್ಕಾರ ನೀಡುತ್ತಿರುವ ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು’ ಎಂದು ಹೇಳಿದರು.
‘ನಾವು ಯಾವ ವಿದ್ಯಾರ್ಹತೆ ಪಡೆದಿದ್ದೇವೆ, ಎಷ್ಟು ಪದಕಗಳನ್ನು ಗಳಿಸಿದ್ದೇವೆ. ಯಾವ ಸ್ಥಾನದಲ್ಲಿದ್ದೇವೆ ಎಂಬುದು ಮುಖ್ಯವಲ್ಲ. ನಮ್ಮ ವೃತ್ತಿಯು ಎಷ್ಟು ಜನರ ಬದುಕಿನಲ್ಲಿ ಬೆಳಕು ತಂದಿದೆ, ಎಷ್ಟು ಜನರ ಮುಖದಲ್ಲಿ ನಗು ತಂದಿದೆ ಎನ್ನುವದೇ ಮುಖ್ಯ. ಶಿಕ್ಷಕ ವೃತ್ತಿಯನ್ನು ಎಲ್ಲ ವೃತ್ತಿಗಳ ತಾಯಿ ಎಂದು ಕರೆಯಲಾಗುತ್ತದೆ. ಆದ್ದರಿಂದ, ಶೈಕ್ಷಣಿಕ ವ್ಯವಸ್ಥೆ ಕುಸಿದರೇ ದೇಶವೇ ಕುಸಿದಂತೆ ಎನ್ನುತ್ತಾರೆ. ದೊಡ್ಡ–ದೊಡ್ಡ ಗ್ರಂಥಾಲಯ, ಕಾಲೇಜು ಕಟ್ಟಡ ನಿರ್ಮಿಸಿದರೆ ಉತ್ತಮ ಶಿಕ್ಷಣ ಕೊಟ್ಟಂತಲ್ಲ. ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಉತ್ತಮ ಸಂಬಂಧ ಇದ್ದರೆ ಮಾತ್ರ ಉತ್ತಮ ಶಿಕ್ಷಣ ನೀಡಲು ಸಾಧ್ಯ. ನಾವೆಲ್ಲರೂ ವೃತ್ತಿಯನ್ನು ಪ್ರೀತಿಸಬೇಕು, ಆನಂದಿಸಬೇಕು’ ಎಂದು ಕರೆ ನೀಡಿದರು.
ಕುಲಪತಿ ಜಯಕರ ಎಸ್.ಎಂ., ಕುಲಸಚಿವರಾದ ಶೇಕ್ ಲತೀಫ್, ಶ್ರೀನಿವಾಸ್ ಚೌಡಪ್ಪ, ಹಣಕಾಸು ಅಧಿಕಾರಿ ಅಜಿತ್ ಕುಮಾರ್ ಹೆಗ್ಡೆ, ಡೀನ್ಗಳಾದ ಅಶೋಕ್ ಹಂಜಗಿ, ಸಿ. ನಾಗಭೂಷಣ್, ನಾರಾಯಣಸ್ವಾಮಿ ಎಂ., ಸುರೇಶ್ ನಾಡಗೌಡರ್, ಆರ್. ಸರ್ವಮಂಗಳ ಇದ್ದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಕುಲಪತಿ ಲಿಂಗರಾಜ ಗಾಂಧಿ ಅವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಇಂದಿನ ತಾಂತ್ರಿಕ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಶಿಕ್ಷಕರ ಮುಂದೆ ಬಹುದೊಡ್ಡ ಸವಾಲಿದೆ. ಉಪನ್ಯಾಸಕರು ತಂತ್ರಜ್ಞಾನದೊಂದಿಗೆ ಅನುಸಂಧಾನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ’ ಎಂದು ಹೇಳಿದರು.
ಮೌಲ್ಯಮಾಪನ ಕುಲಸಚಿವ ವಿ. ಲೋಕೇಶ್, ಕುಲಸಚಿವ ಜವರೇಗೌಡ ಟಿ., ಜ್ಯೋತಿ ವೆಂಕಟೇಶ್, ವಿ. ಆರ್, ದೇವರಾಜ್ ಇದ್ದರು.
ಗುರುಗಳ ಕೋಪದ ಹಿಂದೆ ಕಾಳಜಿ ಇರುತ್ತದೆ
ಕೆಂಗೇರಿ: ‘ಗುರುಗಳ ಕೋಪದ ಹಿಂದೆ ಕಾಳಜಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವ ನಿಸ್ವಾರ್ಥ ಮನೋಭಾವ ಇರುತ್ತದೆ’ ಎಂದು ಜ್ಞಾನ ಬೋಧಿನಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಚಂದ್ರಶೇಖರಯ್ಯ ಹೇಳಿದರು. ಶಿಕ್ಷಕರ ದಿನಾಚರಣೆ ಅಂಗವಾಗಿ 1996-97 ಮತ್ತು 1997-98 ಸಾಲಿನ ಹಿರಿಯ ವಿದ್ಯಾರ್ಥಿಗಳು ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮುಖ್ಯ ಶಿಕ್ಷಕಿ ಜೆಸಿಂತಾ ಪಿರೇರಾ ‘ವಿದ್ಯೆಗೆ ಸಮಾಜ ಪರಿವರ್ತಿಸುವ ಶಕ್ತಿ ಇದೆ’ ಎಂದು ತಿಳಿಸಿದರು. ಹಳೆಯ ವಿದ್ಯಾರ್ಥಿಗಳಾದ ರಾಜೇಶ್ ಚಾವತ್ ಸತ್ಯ ಬಾನು ತೇಜಾ ಅಶ್ವಿನಿ ಅಕ್ಮಲ್ ರಾಜೇಶ್ ಸೈಯದ್ ದೀಪ್ತಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.