ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾವಳಿ: ಬಿಬಿಎಂಪಿಗೆ ಹೈಕೋರ್ಟ್ ಮಂಗಳಾರತಿ!

ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾವಳಿ l ಪಾಲಿಕೆಯ ನಿರ್ಲಕ್ಷ್ಯ ಧೋರಣೆಗೆ ಕಿಡಿ
Last Updated 20 ಮಾರ್ಚ್ 2023, 20:40 IST
ಅಕ್ಷರ ಗಾತ್ರ

ಬೆಂಗಳೂರು: ‘ತಮ್ಮನ್ನು ತಾವೇ ವೈಭವೀ ಕರಿಸಿಕೊಳ್ಳಲು ಅಥವಾ ಬೇರೊಬ್ಬ ರನ್ನು ಓಲೈಸಲು ಎಲ್ಲೆಂದರಲ್ಲಿ ಅನಧಿ ಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್‌ ಗಳನ್ನು ಹಾಕಿ ನಗರದ ಸೌಂದರ್ಯ ಹಾಳು ಮಾಡುವವರ ವಿರುದ್ಧ ಕಾನೂನು ‌ಕ್ರಮ ಜರುಗಿಸುವುದನ್ನು ಮರೆತಿ ರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪಾಲಿಕೆಯ ನಿರ್ಲಕ್ಷ್ಯ ಧೋರಣೆ ಆಘಾತಕಾರಿ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಬಿಬಿಎಂಪಿ ಯಾಕಿಷ್ಟು ಹಿಂಜರಿಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಹೈಕೋರ್ಟ್‌ ಆಶ್ಚರ್ಯ ವ್ಯಕ್ತಪಡಿಸಿದೆ.

ನಗರದಲ್ಲಿನ ಅನಧಿಕೃ ಫ್ಲೆಕ್ಸ್, ಬ್ಯಾನರ್ ಹಾಗೂ ಹೋರ್ಡಿಂಗ್ಸ್‌ ಹಾವಳಿಗೆ ಸಂಬಂಧಿಸಿದಂತೆ ಬೆಂಗ ಳೂರಿನ ಮಾಯ್ಗೆ ಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಧೋರಣೆಯನ್ನು ತೀವ್ರ ತರಾಟೆಗೆ ತೆಗೆದು ಕೊಂಡ ನ್ಯಾಯಪೀಠ, ‘ಹೈಕೋರ್ಟ್ ಆದೇಶ ಪಾಲಿಸಿರುವ ಬಗ್ಗೆ ಇದೇ 18ರಂದು ಸಲ್ಲಿಸಿರುವ ಅನುಪಾಲನಾ ವರದಿ ನಾಮ್‌ ಕೆ ವಾಸ್ತೆ ಎಂಬಂತಾಗಿದೆ‘ ಎಂದು ಛೀಮಾರಿ ಹಾಕಿತು. ‘ತಪ್ಪಿತಸ್ಥರ ವಿರುದ್ಧ ಕೈಗೊಳ್ಳಬೇಕಾಗಿರುವ ಕ್ರಮ ಗಳ ಸಮಗ್ರ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸಬೇಕು’ ಎಂದು ಬಿಬಿಎಂಪಿಗೆ ಖಡಕ್‌ ತಾಕೀತು ಮಾಡಿತು.

ನಿರುತ್ತರ: ‘ಅನಧಿಕೃತ ಬ್ಯಾನರ್, ಫ್ಲೆಕ್ಸ್ ತೆರವುಗೊಳಿಸಲು ಹೆಚ್ಚುವರಿ ಸಿಬ್ಬಂದಿ ಮತ್ತು ಯಂತ್ರಗಳು ಬೇಕಾಗುತ್ತವೆ. ಅದಕ್ಕಾಗಿ ಆರ್ಥಿಕ ವೆಚ್ಚವೂ ಇದೆ ಎಂದು ಬಿಬಿಎಂಪಿ ಹೇಳಿದೆ. ಆದರೆ, ತಪ್ಪಿತಸ್ಥರ ವಿರುದ್ಧ ದಂಡ ವಿಧಿಸಿರುವ ಬಗ್ಗೆ ಕೇಳಿದರೆ ಅದರ ಬಳಿ ಉತ್ತರವಿಲ್ಲ. ನಗರದ ಸೌಂದರ್ಯ ಹಾಳು ಮಾಡುವವರ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸಬೇಕು. ಅದು ಬಿಟ್ಟು ತೆರವು ಕಾರ್ಯಾಚರಣೆಗೆ ತಗಲುವ ವೆಚ್ಚವನ್ನು ಬಿಬಿಎಂಪಿಯೇ ಭರಿಸುವುದಾದರೆ ಅಂತಿಮವಾಗಿ ಅದು ತೆರಿಗೆ ಪಾವತಿಸುವ ಜನಸಾಮಾನ್ಯರ ಮೇಲೆ ಭಾರ ಹಾಕಿದಂತೆ ಆಗುತ್ತದೆ‘ ಎಂದು ನ್ಯಾಯಪೀಠ ಹೇಳಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿದರು. ಈ ಪ್ರಮಾಣ ಪತ್ರದಲ್ಲಿ, ‘2023ರ ಜನವರಿಯಿಂದ ಈವರೆಗೆ ಬಿಬಿಎಂಪಿಯ ಎಂಟು ವಲಯಗಳಲ್ಲಿ ಒಟ್ಟಾರೆ 9,750 ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಹಾಗೂ ಇತರೆ ಪ್ರದರ್ಶನ ಫಲಕಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ 9,040 ತೆರವುಗೊಳಿಸ ಲಾಗಿದ್ದು, 41 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ. 80 ದೂರುಗಳನ್ನು ದಾಖಲಿಸಿಕೊಂಡು ಆ ಪೈಕಿ 53 ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ವಿವರಿಸಲಾಗಿದೆ. ಪ್ರಮಾಣಪತ್ರದ ಅಂಕಿ- ಅಂಶಗಳನ್ನು ಗಮನಿಸಿದ ನ್ಯಾಯ ಪೀಠ, ತೀವ್ರ ಬೇಸರ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT