ಬೆಂಗಳೂರು: ಕ್ಷಯರೋಗ ಹಾಗೂ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ವಿಚಾರಣಾಧೀನ ಕೈದಿಯೊಬ್ಬರು ಜೈಲಿನಲ್ಲೇ ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ, ರಾಜ್ಯ ಮಾನವ ಹಕ್ಕುಗಳ ಆಯೋಗ ಮೃತನ ಪಾಲಕರಿಗೆ ₹10ಲಕ್ಷಮಧ್ಯಂತರ ಪರಿಹಾರ ಪಾವತಿಸುವಂತೆ ಸರ್ಕಾರಕ್ಕೆಶಿಫಾರಸುಮಾಡಿದೆ.
ಈ ಕುರಿತಂತೆ ಆಯೋಗದ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಡಿ.ಎಚ್.ವಘೇಲಾ, ಸದಸ್ಯರಾದ ಕೆ.ಬಿ.ಚೆಂಗಪ್ಪ ಹಾಗೂ ಆರ್.ಕೆ.ದತ್ತಾ ಅವರಿದ್ದ ಪೀಠ, ‘ಸಜಾ ಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳ ಆರೋಗ್ಯ ರಕ್ಷಣೆಗಾಗಿ ಕೆಲವು ಶಿಫಾರಸುಗಳನ್ನು ಮಾಡಿದ್ದು ಅವುಗಳನ್ನು ತಕ್ಷಣವೇ ಜಾರಿಗೆ ತರುವಂತೆ ಸೂಚಿಸಿದೆ.
ಶಿಫಾರಸುಗಳು:
lಎಲ್ಲ ಕಾರಾಗೃಹ ಅಧಿಕಾರಿಗಳು ಕೈದಿಗಳಿಗೆಸ್ಥಳೀಯ ಆರೋಗ್ಯಾಧಿ ಕಾರಿಗಳಿಂದ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಬೇಕು
lಆರೋಗ್ಯ ಕಾರ್ಡ್ ಸಿದ್ಧಪಡಿಸಬೇಕು.
lಮನೋವೈದ್ಯರಿಂದ ಆಪ್ತ ಸಮಾಲೋಚನೆ ನಡೆಸಬೇಕು. ಮನರಂಜನಾ ಚಟುವಟಿಕೆ ಹಮ್ಮಿಕೊಳ್ಳಬೇಕು. ಜೈಲಿನ ಬ್ಯಾರಕ್ ಮತ್ತು ಹೊರಭಾಗಗಳಲ್ಲಿ ಕ್ರೀಡೆಗಳನ್ನು ಆಯೋಜಿಸಬೇಕು.
l ಓದುವ ಹಾಗೂ ಬರೆಯುವ ಹವ್ಯಾಸ ಉಳ್ಳವರಿಗೆ ಅಗತ್ಯ ಸಾಮಗ್ರಿ ಒದಗಿಸಬೇಕು. ಯೋಗ ಮತ್ತು ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು.
ಪ್ರಕರಣವೇನು?:ಬಾಲಕಿಯನ್ನು ಪ್ರೀತಿಸುತ್ತಿದ್ದ ಆರೋಪದಡಿ ಅರವಿಂದ್ ಕುಮಾರ್ (21) ಎಂಬುವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು 2018 ರ ಜನವರಿಯಲ್ಲಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. 2021ರ ಜನವರಿ 5 ರಂದು ಅರವಿಂದ್ ಕುಮಾರ್ಗೆ ಕ್ಷಯರೋಗ ಮತ್ತು ಮೂತ್ರಪಿಂಡದ ಸಮಸ್ಯೆ ಇರುವುದು ದೃಢಪಟ್ಟಿತ್ತು. ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ 2021ರ ಫೆಬ್ರುವರಿ 4 ರಂದು ಮೃತಪಟ್ಟಿದ್ದರು.