ಕೆ.ಆರ್.ಪುರ: ಕಾಡುಗೋಡಿಯ ಸಿದ್ದಾರ್ಥ ಬಡಾವಣೆಗೆ ಬಿಬಿಎಂಪಿ ಮಹದೇವಪುರ ವಲಯ ಕಾರ್ಯಪಾಲಕ ಎಂಜಿನಿಯರ್, ಬೆಂಗಳೂರು ಜಲ ಮಂಡಳಿ ಹಾಗೂ ರಸ್ತೆ ಮೂಲಸೌಕರ್ಯ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಕ್ರಿಯಾ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಹೋರಾಟ ನಡೆಸಿದ್ದರು. ಇದಕ್ಕೆ ಸ್ಪಂದಿಸಿರುವ ಅಧಿಕಾರಿಗಳು ಪರಿಶೀಲನೆಗೆ ತೆರಳಿದರು.
ದಲಿತ ಕ್ರಿಯಾ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಕಾಡುಗೋಡಿ ಸೊಣ್ಣಪ್ಪ ಮಾತನಾಡಿ, ‘ಸಿದ್ದಾರ್ಥ ಬಡಾವಣೆಯಲ್ಲಿ ಸುಮಾರು ವರ್ಷಗಳಿಂದ ರಸ್ತೆ ಸಂಪರ್ಕವಿಲ್ಲ. ಜನರು ಪ್ರಾಣ ಲೆಕ್ಕಿಸದೆ ರೈಲ್ವೆ ಹಳಿ ಮೇಲೆ ರಸ್ತೆ ದಾಟಲು ಪರದಾಡುತ್ತಿದ್ದು ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ’ ಎಂದರು.
ಸಾರ್ವಜನಿಕರ ಅಹವಾಲು ಆಲಿಸಿದ ಅಧಿಕಾರಿಗಳು, ‘ರಸ್ತೆ ಸಂಪರ್ಕಕ್ಕೆ ರೈಲ್ವೆಯಿಂದ ಅನುಮತಿ ಪಡೆಯಬೇಕಿದೆ. ರೈಲ್ವೆಗೆ ಮನವಿ ಪತ್ರ ಸಲ್ಲಿಸಿ ಅವರ ಸೂಚನೆ ಮೇರೆಗೆ ರಸ್ತೆ ಸಂಪರ್ಕ ಕಾಮಗಾರಿ ಮಾಡಿಸಲಾಗುವುದು’ ಎಂದು ತಿಳಿಸಿದರು.
ಇಇ ರವಿಕುಮಾರ್, ಎಇಇ ವೆಂಕಟೇಶ್, ಜಲ ಮಂಡಳಿ ಎಂಜಿನಿಯರ್ ರವಿಕುಮಾರ್, ರಸ್ತೆ ಮೂಲಸೌಕರ್ಯ ವಿಭಾಗದ ಎಂಜಿನಿಯರ್ ರಮೇಶ್, ಮುಖಂಡರಾದ ಎಚ್. ಶಂಬಪ್ಪ, ಕ್ರಿಸ್ತುರಾಜ್, ಡಿಚ್ಚಿ ರಾಜು, ಆರ್.ಆರ್.ಲೋಕೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.