ಬೆಂಗಳೂರು: ಮತದಾನದ ಮೂಲಕ ಬಲಿಷ್ಠ ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಮೆರೆಯಬೇಕು ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ ಸೂರ್ಯಸೇನ್ ಹೇಳಿದರು.
ನಗರದ ಭಾರತೀಯ ವಿದ್ಯಾಭವನದಲ್ಲಿ ಚುನಾವಣಾ ಆಯೋಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬಿ-ಪ್ಯಾಕ್ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ನಾನು ಪ್ರಜಾಪ್ರಭುತ್ವದ ರಾಯಭಾರಿ, ನೀವು?’ ಎಂಬ ಮತದಾರರ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಯೋಧರಾಗಬೇಕು. ಬೂತ್ ಮಟ್ಟಗಳಲ್ಲಿ ಮತದಾನವನ್ನು ಪ್ರೋತ್ಸಾಹಿಸಲು ಹಾಗೂ ದಿವ್ಯಾಂಗರ ಸಹಾಯಕ್ಕಾಗಿ ಸ್ಥಳೀಯರ ಸಮಿತಿಗಳನ್ನು ಬಳಸಿಕೊಳ್ಳಲು ಚುನಾವಣಾ ಆಯೋಗ ನಿರ್ಧರಿಸಿದೆ. ಜನರಲ್ಲಿ ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಆಯೋಗದ ಮುಖ್ಯ ಉದ್ದೇಶಗಳಲ್ಲೊಂದು. ರಾಜ್ಯದಾದ್ಯಂತ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದರು.
ಬಿಬಿಎಂಪಿ ಚುನಾವಣೆ ಸಹಾಯಕ ಆಯುಕ್ತ ಡಾ.ಡಿ.ಬಿ.ನಟೇಶ್ ಅವರು ಚುನಾವಣೆಯ ರೀತಿ ಹಾಗೂ ಚುನಾವಣಾಧಿಕಾರಿಗಳ ಜವಾಬ್ದಾರಿಯನ್ನು ವಿವರಿಸಿದರು.
ಬಿ-ಪ್ಯಾಕ್ ಸಂಸ್ಥೆಯ ಪ್ರತಿನಿಧಿ ಆನಂದ್ ತೀರ್ಥ ಮಾತನಾಡಿದರು. ಬಳಿಕ ಸಂವಾದ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.