ಬೆಂಗಳೂರು: ‘ಕಬ್ಬನ್ ಉದ್ಯಾನ ಪ್ರದೇಶದಲ್ಲಿ ವಾಯುಮಾಲಿನ್ಯ ಕಡಿಮೆ ಗೊಳಿಸಲು ವಾಹನ ಸಂಚಾರಕ್ಕೆ ಕಡಿವಾಣ ಹಾಕಬೇಕಿದೆ. ಈ ಸಲುವಾಗಿ ಬೆಳಿಗ್ಗೆ 10 ಗಂಟೆಗೂ ಮುನ್ನ ಉದ್ಯಾನದ ಪ್ರವೇಶ ದ್ವಾರಗಳನ್ನು ತೆರೆಯಬಾರದು’ ಎಂದು ತೋಟಗಾರಿಕೆ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಬ್ಬನ್ ಉದ್ಯಾನಕ್ಕೆ ಬುಧವಾರ ಮುಂಜಾನೆ ಭೇಟಿ ನೀಡಿ ಪರಿಶೀಲಿಸಿದ ಅವರುಉದ್ಯಾನದ ಸ್ಥಿತಿಗತಿ ಹಾಗೂ ಆಗಬೇಕಾದ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸಿದರು. ವಾಯುವಿಹಾರಕ್ಕೆ ಬಂದವರನ್ನು ಭೇಟಿಯಾಗಿ, ಅಗತ್ಯ ಸೌಲಭ್ಯಗಳ ಕುರಿತು ಅಭಿಪ್ರಾಯ ಪಡೆದರು. ‘ಉದ್ಯಾನದ ವಾತಾವರಣ ಮುಂಜಾನೆಯೇ ಇಷ್ಟು ಮಲಿನಗೊಂಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಕಬ್ಬನ್ ಉದ್ಯಾನವನ್ನು ಮಾಲಿನ್ಯ ಮುಕ್ತಗೊಳಿಸುವುದು ಅಧಿಕಾರಿಗಳ ಕರ್ತವ್ಯ. ಈ ಬಗ್ಗೆ ಕಾಳಜಿ ವಹಿಸಬೇಕು’ ಎಂದರು.
ನಡಿಗೆ ಪಥಗಳು ಸುಸ್ಥಿತಿಯಲ್ಲಿಲ್ಲದ ಬಗ್ಗೆ ಹಾಗೂ ಉದ್ಯಾನದಲ್ಲಿ ಅನೈತಿಕ ಚಟುವಟಿಕೆ ಹೆಚ್ಚಾಗಿರುವ ಬಗ್ಗೆಯೂ ಅಧಿಕಾರಿ
ಗಳನ್ನು ತರಾಟೆ ತೆಗೆದುಕೊಂಡರು.
ಅಧಿಕಾರಿಗೆ ಸೂಚನೆ: ‘ಉದ್ಯಾನಕ್ಕೆ ಬೆಳಿಗ್ಗೆ ಹಾಗೂ ಸಂಜೆ ವೇಳೆ ಸಾವಿರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು ಬರುತ್ತಾರೆ. ಅವರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿ, ಭದ್ರತೆ ನೀಡ ಬೇಕು. ನಡಿಗೆಪಥಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
‘ಉದ್ಯಾನದ ಅಂದ ಹೊಂದುವ ಬೇಲಿ (ಗ್ರಿಲ್) ಹಾಗೂ ಕಸದ ಬುಟ್ಟಿಗಳನ್ನು ಅಳವಡಿಸಬೇಕು. ಗೋಪಾಲಗೌಡ ವೃತ್ತದ ಬಳಿಯ ಜಾಗವನ್ನು ಹಿರಿಯ ನಾಗರಿಕರಿಗೆ ನಗೆ ಚಿಕಿತ್ಸೆ ಅನುಕೂಲವಾಗುವಂತೆ ವಿನ್ಯಾಸ ಮಾಡಬೇಕು.ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಿರುವ ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದರು.
ಹಳೆಯದಾಗಿರುವ ಒಳಚರಂಡಿ ಕೊಳವೆಗಳನ್ನು ಬದಲಿಸುವ ಬಗ್ಗೆ ಜಲ ಮಂಡಳಿ ಅಧಿಕಾರಿಗಳೊಡನೆ ಚರ್ಚಿಸುವಂತೆ ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆ ನಿರ್ದೇಶಕ ಬಿ.ವೆಂಕಟೇಶ್, ಜಂಟಿ ನಿರ್ದೇಶಕ ಎಂ.ಜಗದೀಶ್ ಭಾಗವಹಿಸಿದ್ದರು.
‘ಅಕ್ರಮ ಚಟುವಟಿಕೆ ಕಣ್ಣಾರೆ ಕಂಡಿದ್ದೇನೆ’
‘ಉದ್ಯಾನದಲ್ಲಿ ರಾತ್ರಿ 11 ಗಂಟೆಯಲ್ಲಿ ಒಬ್ಬನೇ ಸುತ್ತಾಡಿದ್ದೇನೆ. ಈ ವೇಳೆ ಕೆಲವು ಅಕ್ರಮ ಚಟುವಟಿಕೆ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ’ ಎಂದು ಸಚಿವ ಸೋಮಣ್ಣಸುದ್ದಿಗಾರರಿಗೆ ತಿಳಿಸಿದರು.
‘ಉದ್ಯಾನದಲ್ಲಿ ಯಾವುದೇ ಅಕ್ರಮ ಚಟುವಟಿಕೆ, ದರೋಡೆ, ಸುಲಿಗೆ ನಡೆಯದಂತೆ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.
26ಕ್ಕೆ ಕರಾಳ ದಿನ
‘ಉದ್ಯಾನದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಂಘದ ಸದಸ್ಯರಿಂದ ಸಚಿವರು ಮಾಹಿತಿ ಪಡೆಯಬಹುದಿತ್ತು. ಆದರೆ, ಅಧಿಕಾರಿಗಳು ಇದನ್ನು ತಪ್ಪಿಸಿ ದ್ದಾರೆ. ಈ ನಡೆಯನ್ನು ಖಂಡಿಸಿ ಇದೇ 26ರಂದು ಗಣರಾಜ್ಯ ದಿನಾಚರಣೆ ಸಂದರ್ಭದಲ್ಲಿ ಕಪ್ಪುಪಟ್ಟಿ ಪ್ರದರ್ಶಿಸುತ್ತೇವೆ’ ಎಂದು ಸಂಘದ ಅಧ್ಯಕ್ಷ ಉಮೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.