ಬೆಂಗಳೂರು: ಐ.ಟಿ ಕಾರಿಡಾರ್ ಎಂದೇ ಕರೆಯಲಾಗುತ್ತಿರುವ ವೈಟ್ಫೀಲ್ಡ್ ಮೆಟ್ರೊ ರೈಲು ಕಾರ್ಯಾಚರಣೆ ಆರಂಭವಾಗಿದ್ದು, ಸೋಮವಾರ 18 ಸಾವಿರ ಜನ ಪ್ರಯಾಣ ಮಾಡಿದ್ದಾರೆ.
ಭಾನುವಾರ ಬೆಳಿಗ್ಗೆ 7ರಿಂದ ವಾಣಿಜ್ಯ ಸಂಚಾರ ಆರಂಭವಾಗಿದ್ದು, ಭಾನುವಾರ ರಾತ್ರಿ 11ರವರೆಗೆ 16,319 ಜನ ಪ್ರಯಾಣ ಮಾಡಿದ್ದರು. ಎರಡನೇ ದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದೆ. ಬೆಳಿಗ್ಗೆ 5ರಿಂದ ರಾತ್ರಿ 9 ಗಂಟೆ ತನಕ 18 ಸಾವಿರ ಮಂದಿ ಪ್ರಯಾಣ ಮಾಡಿದ್ದಾರೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರತಿನಿತ್ಯ 1 ಲಕ್ಷಕ್ಕೂ ಹೆಚ್ಚು ಜನ ಈ ಮಾರ್ಗದಲ್ಲಿ ಪ್ರಯಾಣ ಮಾಡಲಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದರು. ಆದರೆ, ಮೊದಲ ಎರಡನೇ ದಿನ ಕಡಿಮೆ ಜನ ಪ್ರಯಾಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಳಕೆ ಮಾಡಲಿದ್ದಾರೆ ಎಂದು ತಿಳಿಸಿದರು.
ಸದ್ಯ ಪ್ರತಿ 12 ನಿಮಿಷಗಳ ಅಂತರದಲ್ಲಿ ರೈಲು ಸೇವೆ ಒದಗಿಸಲಾಗುತ್ತಿದ್ದು, ಪ್ರಯಾಣಿಕರ ದಟ್ಟಣೆ ಆಧರಿಸಿ ಅಂತರ ಕಡಿಮೆ ಮಾಡಲಾಗುವುದು ಎಂದರು.
ಪೂರ್ಣಗೊಳ್ಳದ ಮಾರ್ಗ: ಆಟೊ ಪ್ರಯಾಣ ದುಬಾರಿ
ವೈಟ್ಫೀಲ್ಡ್ ಮಾರ್ಗ ಪೂರ್ಣ ಪ್ರಮಾಣದಲ್ಲಿ ಆರಂಭವಾಗದೆ ಇರುವುದು ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದೆ.
ಬೈಯಪ್ಪನಹಳ್ಳಿ ಮತ್ತು ಕೆ.ಆರ್.ಪುರ ನಡುವಿನ ಎರಡು ಕಿಲೋ ಮೀಟರ್ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದ್ದು, ಅಧಿಕಾರಿಗಳ ಪ್ರಕಾರ ಜೂನ್ ಅಂತ್ಯದ ತನಕ ಕಾಯಬೇಕಿದೆ. ವೈಟ್ಫೀಲ್ಡ್ ಕಡೆಗೆ ಸಾಗಬೇಕಾದವರು ಬೈಯಪ್ಪನಹಳ್ಳಿಯಲ್ಲಿ ಇಳಿದು ಬಸ್, ಆಟೊ ಅಥವಾ ಟ್ಯಾಕ್ಸಿಯಲ್ಲಿ ಕೆ.ಆರ್.ಪುರ ತನಕ ಪ್ರಯಾಣ ಮಾಡಬೇಕಿದೆ.
ಇದು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಅಲ್ಲದೇ ದುಬಾರಿ ಪ್ರಯಾಣದ ಬಿಸಿ ಅನುಭವಿಸಬೇಕಿದೆ.
‘ಎರಡು ಕಿಲೋ ಮೀಟರ್ ದೂರಕ್ಕೆ ಆಟೊ ಚಾಲಕರು ಮನ ಬಂದಂತೆ ದರ ಕೇಳುತ್ತಿದ್ದಾರೆ. ₹100–₹120 ತನಕ ದರ ಪಡೆಯುತ್ತಿದ್ದಾರೆ. ತುರ್ತಾಗಿ ಹೋಗಬೇಕಿರುವ ಪ್ರಯಾಣಿಕರು ಬೇರೆ ದಾರಿ ಇಲ್ಲದೆ ದುಬಾರಿ ಪಾವತಿಸಿ ತೆರಳುವಂತಾಗಿದೆ’ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.