ಬೆಂಗಳೂರು: ಉತ್ತರಹಳ್ಳಿ ಮುಖ್ಯರಸ್ತೆ ಬಳಿ ಶನಿವಾರ ಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಕ್ಯಾಂಟರ್ ಚಕ್ರ ತಲೆ ಮೇಲೆ ಹರಿದು ಮಂಜಮ್ಮ (40) ಅವರು ಮೃತಪಟ್ಟಿದ್ದಾರೆ.
‘ಎಚ್. ಗೊಲ್ಲಹಳ್ಳಿ ನಿವಾಸಿ ಮಂಜಮ್ಮ, ಟೈಲರ್ ಆಗಿದ್ದರು. ಕೆಲಸ ನಿಮಿತ್ತ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಕೆಂಗೇರಿ ಸಂಚಾರ ಠಾಣೆ ಪೊಲೀಸರು ಹೇಳಿದರು.
‘ಮಂಜಮ್ಮ ಅವರು ಉತ್ತರಹಳ್ಳಿ ಕಡೆಯಿಂದ ಕೆಂಗೇರಿ ಕಡೆಗೆ ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ಕ್ಯಾಂಟರ್ (ಕೆಎ 41 ಡಿ 0639) ಹೊರಟಿತ್ತು. ಚಾಲಕ, ನಿರ್ಲಕ್ಷ್ಯ ಹಾಗೂ ಅತೀ ವೇಗದಲ್ಲಿ ಕ್ಯಾಂಟರ್ ಚಲಾಯಿಸಿದ್ದ. ಇದರಿಂದಾಗಿ ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದಿತ್ತು.’
‘ದ್ವಿಚಕ್ರ ವಾಹನ ಸಮೇತ ಉರುಳಿಬಿದ್ದಿದ್ದ ಮಂಜಮ್ಮ ಅವರ ತಲೆ ಮೇಲೆಯೇ ಕ್ಯಾಂಟರ್ ಚಕ್ರ ಹರಿದಿತ್ತು. ತೀವ್ರ ಗಾಯಗೊಂಡು ಮಂಜಮ್ಮ ಮೃತಪಟ್ಟಿದ್ದಾರೆ. ಸಾವಿಗೆ ಕಾರಣವಾದ ಆರೋಪದಡಿ ಕ್ಯಾಂಟರ್ ಚಾಲಕನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.