ಬೆಂಗಳೂರು: ಬಾಹ್ಯಾಕಾಶ ವಿಜ್ಞಾನಿ ಡಾ.ಯು.ಆರ್.ರಾವ್, ಪ್ರಸಿದ್ಧ ಕ್ರಿಕೆಟ್ ಆಟಗಾರ ಜಿ.ಆರ್.ವಿಶ್ವನಾಥ್, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೇರಿದಂತೆ ಏಳು ಮಂದಿ ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಬೆಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ.
`ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಹಿನ್ನೆಲೆ ಗಾಯಕಿ ಬಿ.ಕೆ. ಸುಮಿತ್ರಾ, ಲೇಖಕ ಕೆ.ಸತ್ಯನಾರಾಯಣ, ಸಂಸ್ಕೃತ ವಿದ್ವಾಂಸರಾದ ಡಾ.ವನಿತಾ ರಾಮಸ್ವಾಮಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಇದೇ 18ರಂದು ನಡೆಯಲಿರುವ 48ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು' ಎಂದು ಕುಲಪತಿ ಪ್ರೊ.ಬಿ ತಿಮ್ಮೇಗೌಡ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೂ ಗೌರವ ಡಾಕ್ಟರೇಟ್ ನೀಡಲು ಉದ್ದೇಶಿಸಲಾಗಿತ್ತು. ಅವರನ್ನು ಇತ್ತೀಚೆಗೆ ಭೇಟಿಯಾಗಿ ಗೌರವ ಸ್ವೀಕರಿಸುವಂತೆ ವಿನಂತಿ ಮಾಡಲಾಗಿತ್ತು. ಅವರು ಸ್ಪಷ್ಟವಾಗಿ ನಿರಾಕರಿಸಿದರು. ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು ನಿರಾಕರಿಸಿದ್ದರು' ಎಂದು ಅವರು ಹೇಳಿದರು.
`ಯು.ಆರ್. ರಾವ್ ಅವರಿಗೆ ವಿವಿಧ ವಿವಿಗಳಿಂದ 20ಕ್ಕೂ ಅಧಿಕ ಗೌರವ ಡಾಕ್ಟರೇಟ್ಗಳು ದೊರಕಿವೆ. ಆದರೆ, ಬೆಂಗಳೂರು ವಿವಿಯಿಂದ ಸಿಕ್ಕಿರಲಿಲ್ಲ. ಒಂದು ವಾರದ ಹಿಂದೆ ಈ ವಿಷಯ ಗೊತ್ತಾಯಿತು. ಬಳಿಕ ಅವರ ಹೆಸರು ಸೇರಿಸಲಾಯಿತು. ಶಿವಕುಮಾರ ಸ್ವಾಮೀಜಿ ಅವರಿಗೆ ಮಠಕ್ಕೆ ತೆರಳಿ ಪದವಿ ಪ್ರದಾನ ಮಾಡಲಾಗುವುದು' ಎಂದು ಅವರು ತಿಳಿಸಿದರು.
`ನಾಲ್ಕು ಅಥವಾ ಐದು ಮಂದಿ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲು ಯೋಚಿಸಲಾಗಿತ್ತು. ಕಳೆದ ವರ್ಷ ಯಾರಿಗೂ ಈ ಗೌರವ ನೀಡಿರಲಿಲ್ಲ. ಹೀಗಾಗಿ ಈ ಸಲ ಏಳು ಮಂದಿಗೆ ನೀಡಲಾಗುತ್ತಿದೆ. ಮುಂದಿನ ವರ್ಷ ನಾಲ್ಕು ಅಥವಾ ಐದು ಮಂದಿಗೆ ಮಾತ್ರ ನೀಡಲಾಗುವುದು' ಎಂದು ಅವರು ಸ್ಪಷ್ಟಪಡಿಸಿದರು.