ಬೆಂಗಳೂರು:ರಾಸಾಯನಿಕ ತ್ಯಾಜ್ಯ ಸ್ಫೋಟಗೊಂಡ ಪರಿಣಾಮ ಜನರು ಆತಂಕಕ್ಕೀಡಾದ ಘಟನೆ ಆಡುಗೋಡಿಯ ಮೈಕೊ ಜಂಕ್ಷನ್ ಸಮೀಪ ಶನಿವಾರ ಮಧ್ಯಾಹ್ನ ನಡೆದಿದೆ.
ಮೈಕೊಲೇಔಟ್ನಲ್ಲಿರುವ ಮಾರ್ಬಲ್ಸ್ ವರ್ಲ್ಡ್ ಎಂಬ ಕಾರ್ಖಾನೆಯಲ್ಲಿ ಕೆಲಸ ಮಾಡುವ ಮೃತ್ಯುಂಜಯ ಆರಾಧ್ಯ, ಜಮೀಲ್ ಮತ್ತು ಮೆಹ್ತಬ್ ಎಂಬುವರು 3.30ರ ಸುಮಾರಿಗೆ ತ್ಯಾಜ್ಯ ಸುರಿಯುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ.
ಮೃತ್ಯುಂಜಯನನ್ನು ಹಿಡಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ.
ಸಣ್ಣ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿದ್ದರಿಂದ ಮೃತ್ಯುಜಯ ಅವರಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ್ಯುಂಜಯ ಮತ್ತು ಮಾರ್ಬಲ್ಸ್ ವರ್ಲ್ಡ್ನ ನೌಕರ ಮೊಯಿನ್ ಎಂಬುವರನ್ನು ಬಂಧಿಸಲಾಗಿದೆ ಎಂದ ಪೊಲೀಸರು ತಿಳಿಸಿದ್ದಾರೆ. ತ್ಯಾಜ್ಯವನ್ನು ಸುರಿಯುವಂತೆ ಮೊಯಿನ್ ಉಳಿದ ಮೂರು ಮಂದಿಗೆ ಹೇಳಿದ್ದ ಎಂದ ತನಿಖೆಯಲ್ಲಿ ಗೊತ್ತಾಗಿದೆ. ಕಾರ್ಖಾನೆ ಮಾಲೀಕರ ನಿರ್ಲಕ್ಷ್ಯ ಇದ್ದರೆ ಅವರ ವಿರುದ್ಧ ಸಹ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
`ಗ್ರಾನೈಟ್ ಹೊಳಪು ಬರುವಂತೆ ಮಾಡಲು ಪೆಟ್ರೋಫೈಡ್ ಎಂಬ ರಾಸಾಯನಿಕ ಬಳಸಲಾಗುತ್ತದೆ. ಇದರ ತ್ಯಾಜ್ಯವನ್ನು ಸುರಿಯುತ್ತಿದ್ದ ವೇಳೆ ಘಟನೆ ನಡೆದಿದೆ.
ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ~ ಎಂದು ಜಯನಗರ ಉಪ ವಿಭಾಗದ ಎಸಿಪಿ ಜಿ.ಬಿ. ಮಂಜುನಾಥ್ ತಿಳಿಸಿದ್ದಾರೆ.
ಗ್ರಾನೈಟ್ ಕಾರ್ಖಾನೆಗಳ ತ್ಯಾಜ್ಯವನ್ನು ಇಲ್ಲಿ ಸುರಿಯುತ್ತಿದ್ದಾರೆ. ಇದನ್ನು ತಡೆಯಲು ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನೇರುಘಟ್ಟ ರಸ್ತೆಯ ಪುಕ್ಕರಾಜ ಲೇಔಟ್ನಲ್ಲಿ ಮಂಗಳವಾರ ರಾತ್ರಿ ಇಂತಹುದೇ ಸ್ಫೋಟ ಸಂಭವಿಸಿ ವಿನ್ಸೆಂಟ್ ಎಂಬುವರುಗಾಯಗೊಂಡಿದ್ದರು.