ನೆಲಮಂಗಲ: ಪಟ್ಟಣಕ್ಕೆ ಸಮೀಪದ ಸೊಂಡೆಕೊಪ್ಪ ರಸ್ತೆಯ ಪುರಾತನ ಬಯಲು ಉದ್ಭವ ವಿನಾಯಕ ಸ್ವಾಮಿ ಬ್ರಹ್ಮ ರಥೋತ್ಸವ (ಕಡಲೇಕಾಯಿ ಪರಿಷೆ) ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಮಧ್ಯಾಹ್ನ 12.30ರಿಂದ 1.30ರ ಅಭಿಜಿನ್ ಲಗ್ನದಲ್ಲಿ ನಡೆದ ರಥೋತ್ಸವದಲ್ಲಿ ವಿನಾಯಕನಿಗೆ ಭಕ್ತರು ಸೂರು ಬಾಳೆಹಣ್ಣು ಮತ್ತು ಕಡಲೆಕಾಯಿ ಎಸೆದು ಭಕ್ತಿ ಸಮರ್ಪಿಸಿದರು. ವಿವಿಧ ಜನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿದವು. ತಾಲ್ಲೂಕಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದ ಪರಿಷೆಗೆ ಪೂರ್ವ ಒಂದು ವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮಾಗಡಿ, ರಾಮನಗರ ಭಾಗಗಳಿಂದ ಸಾವಿರಾರು ಭಕ್ತರು ಬಂದಿದ್ದರು. ಬೆಳಗ್ಗಿನಿಂದ ರಾತ್ರಿವರೆಗೂ ಸೊಂಡೆಕೊಪ್ಪ ರಸ್ತೆಯಲ್ಲಿ ಭಕ್ತರ ಪ್ರವಾಹ ನೆರೆದಿತ್ತು. ತಾಲ್ಲೂಕಿನ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು ಅರವಟಿಕೆಗಳನ್ನು ಹಾಕಿಕೊಂಡು ಪಾನಕ, ಮಜ್ಜಿಗೆ, ಕೋಸಂಬರಿಗಳನ್ನು ವಿತರಿಸಿದರು. ದೇವಸ್ಥಾನ ಸಮಿತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು.