ಬೀದರ್: ‘ಮಹಿಳೆಯರಿಗೆ ಸಂವಿಧಾನ ಬದ್ಧವಾಗಿ ಎಲ್ಲ ಹಕ್ಕುಗಳೂ ದೊರಕಿವೆ. ಮಹಿಳೆಯರು ಆತ್ಮವಿಶ್ವಾಸದ ಮೂಲಕ ಗುರಿ ಸಾಧಿಸಬೇಕು’ ಎಂದು ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್ ಸಲಹೆ ನೀಡಿದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಯುವ ಸ್ಪಂದನ ಕೇಂದ್ರದ ಆಶ್ರಯದಲ್ಲಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರಸ್ತುತ ಮಹಿಳಾ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇದೆ. ಮಹಿಳೆಯರು ಯೋಚನಾ ಶಕ್ತಿಯನ್ನು ಬದಲಿಸಿಕೊಂಡು ಪ್ರಗತಿಯತ್ತ ಮುನ್ನುಗ್ಗಬೇಕಿದೆ. ನಾನು ಸಹಿತ ಒಂದು ಸಣ್ಣ ಸಮುದಾಯದಿಂದ ಬಂದಿದ್ದೇನೆ. ನಮ್ಮ ಸಮುದಾಯದಲ್ಲಿ ಒಬ್ಬರೂ ಮಹಿಳಾ ಅಧಿಕಾರಿಯಾಗಿಲ್ಲ. ಆದರೆ, ಛಲದೊಂದಿಗೆ ಸಾಧನೆ ಮಾಡಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ’ ಎಂದರು.
‘ನಮ್ಮ ಆಸಕ್ತಿ ಹಾಗೂ ಆತ್ಮವಿಶ್ವಾಸ ಪಾಲಕರಲ್ಲೂ ಆತ್ಮವಿಶ್ವಾಸ ಮೂಡುವಂತೆ ಮಾಡುತ್ತದೆ. ಅವರಿಗೆ ಮನವರಿಕೆಯಾದರೆ ಮಕ್ಕಳ ಬೆನ್ನು ತಟ್ಟಲು ಹಿಂದೆ ಸರಿಯಲಾರರು’ ಎಂದು ಅಭಿಪ್ರಾಯಪಟ್ಟರು.
ಅತಿಥಿಗಳಾಗಿ ಬಿಎಸ್ಎನ್ಎಲ್ ಟಿಡಿಎಂ ಅನಿತಾ ಪಾಟೀಲ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ.ನಾಡಿಗೇರ ಪಾಲ್ಗೊಂಡಿದ್ದರು. ಪ್ರಾಚಾರ್ಯ ಪ್ರೊ.ರಾಜಪ್ಪ ಬಬಚೇಡಿ ಅಧ್ಯಕ್ಷತೆ ವಹಿಸಿದ್ದರು.
ಯುವ ಸಮಾಲೋಚಕಿ ಸುಜಾತಾ ಗುಪ್ತಾ, ಯುವ ಪರಿವರ್ತಕರಾದ ಜೈಶ್ರೀ ಮೇತ್ರೆ, ಕವಿತಾ, ಸಂತೋಷ, ಅಂಬರೀಷ, ದಿಗಂಬರ್ ಇದ್ದರು.