ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಬೀದರ್‌ ಲೋಕಸಭೆ ಕ್ಷೇತ್ರ: ಮತದಾನಕ್ಕೆ ಉರಿ ಬಿಸಿಲೇ ಸವಾಲು

Published : 7 ಮೇ 2024, 4:42 IST
Last Updated : 7 ಮೇ 2024, 4:42 IST
ಫಾಲೋ ಮಾಡಿ
Comments
ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಅವರು ಬೀದರ್‌ನ ಮಸ್ಟರಿಂಗ್‌ ಕೇಂದ್ರದಲ್ಲಿ ಮತದಾನ ಕೇಂದ್ರದ ಸಿಬ್ಬಂದಿಗೆ ಇವಿಎಂಗಳನ್ನು ಪರಿಶೀಲಿಸಿ ಹಸ್ತಾಂತರಿಸಿದರು
ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಅವರು ಬೀದರ್‌ನ ಮಸ್ಟರಿಂಗ್‌ ಕೇಂದ್ರದಲ್ಲಿ ಮತದಾನ ಕೇಂದ್ರದ ಸಿಬ್ಬಂದಿಗೆ ಇವಿಎಂಗಳನ್ನು ಪರಿಶೀಲಿಸಿ ಹಸ್ತಾಂತರಿಸಿದರು
ಬೀದರ್‌ ಜಿಲ್ಲೆಯಲ್ಲಿ ಮಂಗಳವಾರ (ಮೇ 7) ಕೂಡ ಉಷ್ಣ ಅಲೆಗಳು ಬೀಸಲಿದ್ದು ಇದರ ನಡುವೆ ಚುನಾವಣೆ ನಡೆಸಬೇಕಾದ ಸವಾಲಿದೆ
– ಗೋವಿಂದ ರೆಡ್ಡಿ ಜಿಲ್ಲಾ ಚುನಾವಣಾಧಿಕಾರಿ
ಬಿಸಿಲು ಸಾಕಷ್ಟು ಹೆಚ್ಚಿದೆ. ಚುನಾವಣಾ ಸಿಬ್ಬಂದಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಲಾಗಿದೆ
– ಚನ್ನಬಸವಣ್ಣ ಎಸ್‌.ಎಲ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
30 ‘ಸಖಿ’ ಮತಗಟ್ಟೆಗಳು
ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 2024 ಮತಗಟ್ಟೆಗಳ ಪೈಕಿ 30 ‘ಸಖಿ’ ಮತಗಟ್ಟೆ ಸ್ಥಾಪಿಸಲಾಗಿದೆ. ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಲಾ ಐದು ‘ಸಖಿ’ ಮತಗಟ್ಟೆಗಳಿವೆ. ಅಲ್ಲಿ ಎಲ್ಲರೂ ಮಹಿಳಾ ಸಿಬ್ಬಂದಿಯೇ ಕೆಲಸ ನಿರ್ವಹಿಸುತ್ತಾರೆ. ಮಹಿಳಾ ಮತದಾರರನ್ನು ಆಕರ್ಷಿಸಲು ‘ಸಖಿ’ ಮತಗಟ್ಟೆ ಸ್ಥಾಪಿಸಲಾಗಿದೆ. ಅದೇ ರೀತಿ 30 ಅಂಗವಿಕಲರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಅಂಗವಿಕಲರೇ ಅವುಗಳನ್ನು ನಿರ್ವಹಿಸುವರು.
ಆರು ವಿಶೇಷ ಮತದಾನ ಕೇಂದ್ರಗಳು
ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ವಿಶೇಷ ಮತದಾನ ಕೇಂದ್ರಗಳನ್ನು ಈ ಸಲ ಸ್ಥಾಪಿಸಲಾಗಿದೆ. ಬೀದರ್‌ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಮೀಪದ 104ನೇ ಮತಗಟ್ಟೆಗೆ ಬಿದ್ರಿ ಕಲೆಯ ಸ್ಪರ್ಶ ನೀಡಲಾಗಿದೆ. ಬಸವಕಲ್ಯಾಣದ ನಾರಾಯಣಪುರದ 64ನೇ ಮತಗಟ್ಟೆಗೆ ಅನುಭವ ಮಂಟಪ ಹುಮನಾಬಾದಿನ ಹುಡಗಿಯ 135ನೇ ಮತಗಟ್ಟೆಗೆ ಜಲಸಂಗ್ವಿ ಸ್ಮಾರಕ ಬೀದರ್‌ ದಕ್ಷಿಣದ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 137ನೇ ಮತಗಟ್ಟೆಗೆ ಬೀದರ್‌ ಕೋಟೆ ಭಾಲ್ಕಿಯ ಟಿಎಂಸಿ ಕಚೇರಿಯ 106ನೇ ಮತಗಟ್ಟೆಗೆ ಕಾರಂಜಾ ಜಲಾಶಯ ಹಾಗೂ ಔರಾದಿನ ಸಂತಪುರಿನ 171ನೇ ಮತಗಟ್ಟೆಗೆ ಅರಣ್ಯದ ಸ್ಪರ್ಧ ನೀಡಲಾಗಿದೆ. ಮತದಾರರನ್ನು ಆಕರ್ಷಿಸಲು ಆಯ್ದ ಮತಗಟ್ಟೆಗಳಿಗೆ ಹೊಸ ರೂಪ ಕೊಡಲಾಗಿದೆ.
ಮತ ಹಾಕುವ ಚಿತ್ರ ತೆಗೆದರೆ ಕ್ರಿಮಿನಲ್‌ ಕೇಸ್‌
‘ಮತದಾನ ಕೇಂದ್ರದೊಳಗೆ ಮತದಾರರು ಯಾವುದೇ ಕಾರಣಕ್ಕೂ ಮೊಬೈಲ್‌ ತೆಗೆದುಕೊಂಡು ಹೋಗುವಂತಿಲ್ಲ. ಕೇಂದ್ರದ ಭದ್ರತಾ ಸಿಬ್ಬಂದಿ ಪರಿಶೀಲಿಸಿಯೇ ಒಳಗೆ ಬಿಡುವರು. ಒಂದುವೇಳೆ ಯಾರಾದರೂ ಕೇಂದ್ರದೊಳಗೆ ಮೊಬೈಲ್‌ ಕೊಂಡೊಯ್ದು ಮತದಾನ ಮಾಡಿರುವ ಛಾಯಾಚಿತ್ರ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟರೆ ಅಂತಹವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಕೆಲವರು ಈ ರೀತಿ ಮಾಡಿದ್ದಾರೆ. ಅಂತಹವರನ್ನು ಈಗಾಗಲೇ ಗುರುತಿಸಿ ಶಿಕ್ಷೆಗೆ ಗುರಿಪಡಿಸಲಾಗಿದೆ. ಯಾರಾದರೂ ಮತಗಟ್ಟೆಯೊಳಗೆ ಛಾಯಾಚಿತ್ರ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದರೆ ಅವರನ್ನು ಗುರುತಿಸಲು ಕಷ್ಟವಾಗದು. ಹಾಗಾಗಿ ಯಾರು ಆ ರೀತಿಯ ಕೃತ್ಯಕ್ಕೆ ಕೈ ಹಾಕಬಾರದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಚುನಾವಣೆ ಕೆಲಸಕ್ಕೆ 243 ಬಸ್‌ಗಳು
ಮತಗಟ್ಟೆಗಳಿಗೆ ತೆರಳಲು ಚುನಾವಣಾ ಸಿಬ್ಬಂದಿಗೆ 243 ಕೆಎಸ್‌ಆರ್‌ಟಿಸಿ ಬಸ್‌ 250 ಕ್ರೂಸರ್‌ಗಳನ್ನು ಬಾಡಿಗೆ ಮೇಲೆ ತೆಗೆದುಕೊಳ್ಳಲಾಗಿದೆ. ಈ ಪೈಕಿ ಕೆಲವು ವಾಹನಗಳನ್ನು ಚುನಾವಣಾ ಅಧಿಕಾರಿಗಳು ಗಸ್ತಿನಲ್ಲಿ ತಿರುಗಾಡಲು ಮತ್ತು ಸಿಬ್ಬಂದಿಯನ್ನು ಕೊಂಡೊಯ್ಯಲು ಬಳಸಲಾಗುತ್ತದೆ. ಈ ವಾಹನಗಳಲ್ಲಿಯೇ ಮತದಾನ ಪೂರ್ಣಗೊಂಡ ನಂತರ ಚುನಾವಣಾ ಸಿಬ್ಬಂದಿ ಇವಿಎಂಗಳನ್ನು ತೆಗೆದುಕೊಂಡು ಬೀದರ್‌ನ ಬಿ.ವಿ.ಬಿ ಕಾಲೇಜಿನ ಮತದಾನ ಕೇಂದ್ರಕ್ಕೆ ತೆಗೆದುಕೊಂಡು ಬರುವರು. ಪಿಆರ್‌ಒ ಎಪಿಆರ್‌ ಮತಗಟ್ಟೆ ಅಧಿಕಾರಿ ಸೇರಿದಂತೆ ಒಟ್ಟು 6896 ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಅದೇ ರೀತಿ 2349 ಜನ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. 5046 ಬ್ಯಾಲೆಟ್‌ ಯೂನಿಟ್‌ 2743 ಕಂಟ್ರೋಲ್‌ ಯೂನಿಟ್‌ ಹಾಗೂ 2908 ವಿವಿಪ್ಯಾಟ್‌ಗಳನ್ನು ಬಳಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT