ಚಿಟಗುಪ್ಪ: ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ನಿರ್ಮಿಸಿರುವ ಮಾದರಿ ಅಂಗನವಾಡಿ ಕಟ್ಟಡ ನಿರ್ಮಾಣಗೊಂಡು ವರ್ಷ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಬಂದಿಲ್ಲ.
ಶಿಶು ವಿಹಾರದ ಮಕ್ಕಳಿಗಾಗಿ ಹೈಟೆಕ್ ಸೌಲಭ್ಯಗಳನ್ನೊಳಗೊಂಡ ಅಂಗನವಾಡಿ ಕೇಂದ್ರ ಹಿಂದಿನ ಶಾಸಕ ಬಂಡೆಪ್ಪ ಕಾಶಂಪೂರ್ ಅವರ ಪರಿಶ್ರಮದಿಂದ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2020-24ನೇ ಸಾಲಿನಲ್ಲಿ ₹50 ಲಕ್ಷ ಅನುದಾನದಲ್ಲಿ ನಿರ್ಮಿತಿ ಕೇಂದ್ರದ ಮೂಲಕ ನಿರ್ಮಿಸಲಾಗಿದೆ. ಆದರೆ ಇರುವರೆಗೂ ಕೇಂದ್ರಕ್ಕೆ ಉದ್ಘಾಟನಾ ಭಾಗ್ಯ ಬಾರದಿರುವುದಕ್ಕೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಟ್ಟಡದ ಮುಖ್ಯ ದ್ವಾರ ಸುತ್ತು ಗೋಡೆಗಳಲ್ಲಿ ಅಂದ ಚಂದದ ಬರವಣಿಗೆಯಲ್ಲಿ ವಿವಿಧ ಬಗೆಯ ಪ್ರಾಣಿ, ಪಕ್ಷಿಗಳ ಸುಂದರ ಕಲಾಕೃತಿಗಳು ರಚಿಸಿದ್ದು ಒಳಗಡೆ ಮಕ್ಕಳ ಆಟಿಕೆ ಸಾಮಗ್ರಿಗಳು, ಅಡುಗೆ ಸಾಮಗ್ರಿಗಳು ಇಡಲಾಗಿದೆ ಆದರೂ ಕಟ್ಟಡದ ಸದ್ಬಳಕೆಯಾಗದಕ್ಕೆ ಎಲ್ಲವೂ ಹಾಳಾಗುತ್ತಿವೆ.
ಸೂಕ್ತ ನಿರ್ವಹಣೆ ಇಲ್ಲದ ಕಾರಣ ಕಟ್ಟಡದ ಒಳ ಪ್ರದೇಶ, ಪ್ರವೇಶ ದ್ವಾರದ ಸುತ್ತ ಕಸ ಹರಡಿಕೊಂಡಿದೆ.ಹುಲ್ಲು ಕಂಟಿಗಳು ಬೆಳೆಯಲಾರಂಭಿಸಿವೆ ಯಾವ ಕಾರಣಕ್ಕೆ ಕಟ್ಟಡ ಉದ್ಘಾಟನೆ ಆಗುತ್ತಿಲ್ಲ ಎಂಬ ವಿಷಯ ಯಾರಿಗೂ ತಿಳಿದಿಲ್ಲ.ಅಧಿಕಾರಿಗಳು, ಜನ ಪ್ರತಿನಿಧಿಯವರು ಉದ್ಘಾಟನೆಗೇ ಬೇಜವಾಬ್ದಾರಿ ತೋರುತ್ತಿರುವುದು ಸರಿಯಲ್ಲ ಎಂದು ಗ್ರಾಮದ ನಿವಾಸಿ ರಾಜಕುಮಾರ್ ಬೇಸರ ವ್ಯಕ್ತಪಡಿಸುತ್ತಾರೆ.