ಬೀದರ್: ಬೆದರಿಕೆ, ದ್ವೇಷದ ಮಾತುಗಳನ್ನಾಡಿರುವ ಆರೋಪದ ಮೇರೆಗೆ ಬಸವಕಲ್ಯಾಣದ ಶಾಸಕ ಶರಣು ಸಲಗರ ಸೇರಿದಂತೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಜು. 5ರಂದು ಶರಣು ಸಲಗರ ಹಾಗೂ ಇತರೆ ಎಂಟು ಜನರು ಹಿರೇಮಠ ಕಾಲೊನಿಯ ನಮ್ಮ ಮನೆಯಲ್ಲಿ 'ಕುರ್ಬಾನಿ' ಕೊಡುತ್ತಿದ್ದಾಗ ಬಂದು, ನಮ್ಮನ್ನು ತಡೆದು ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿದ್ದಾರೆ. ದ್ವೇಷದ ಮಾತುಗಳನ್ನು ಆಡಿದ್ದಾರೆ ಎಂದು ಮೆಹರಾಜ ಇನಾಮುಲ್ಲಾಖಾನ್ ನೀಡಿದ ದೂರಿನ ಮೇರೆಗೆ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.
ಗೋಹತ್ಯೆ ಮಾಡುವುದು ನಿಷೇಧವಿದ್ದರೂ ಹೋರಿ ಬಲಿ ಕೊಡುತ್ತಿರುವ ವಿಷಯ ತಿಳಿದು ಶಾಸಕ ಶರಣು ಸಲಗರ ಅವರು ಅವರ ಬೆಂಬಲಿಗರೊಂದಿಗೆ ಹಿರೇಮಠ ಕಾಲೊನಿಯ ಇನಾಮುಲ್ಲಾ ಖಾನ್ ಅವರ ಮನೆಗೆ ತೆರಳಿದ್ದರು. ಅಷ್ಟರಲ್ಲಾಗಲೇ ಹೋರಿ ಕಡಿಯಲಾಗಿತ್ತು. ಬಳಿಕ ವಾಗ್ವಾದ ನಡೆದಿತ್ತು.
ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ಪಶು ವೈದ್ಯಕೀಯ ಅಧಿಕಾರಿಗಳ ದೂರಿನ ಮೇರೆಗೆ ಇನಾಮುಲ್ಲಾ ಖಾನ್, ಮಜರ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು.