ಬೀದರ್: ತೈಲ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಜಿಲ್ಲಾ ಘಟಕವು ‘100 ನಾಟೌಟ್’ ಘೋಷವಾಕ್ಯದಡಿ ನಗರದಲ್ಲಿ ಶುಕ್ರವಾರ(ಜೂ.11) ಪ್ರತಿಭಟನೆ ನಡೆಸಲಿದೆ.
ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರ ನೇತೃತ್ವದಲ್ಲಿ ನಗರದ ಪೆಟ್ರೋಲ್ ಬಂಕ್ಗಳ ಎದುರು ಘೋಷಣಾ ಫಲಕಗಳೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ತಿಳಿಸಿದ್ದಾರೆ.
ಕೋವಿಡ್ ಮಹಾಮಾರಿಯ ಹಿಡಿತಕ್ಕೆ ಸಿಕ್ಕು ಜನಸಾಮಾನ್ಯರು ಹೈರಾಣಾಗಿದ್ದಾರೆ. ಈ ನಡುವೆಯೇ ಸಂವೇದನಾರಹಿತ ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ದಿನೇ ದಿನೇ ಏರಿಕೆಯಾಗುತ್ತಿದೆ. ಬಹಳ ಕಡೆ ಲೀಟರ್ ಒಂದರ ಬೆಲೆ ನೂರು ರೂಪಾಯಿ ಗಡಿ ದಾಟಿದ್ದು, ಇನ್ನುಳಿದ ಕಡೆ ನೂರರ ಹೊಸ್ತಿಲಲ್ಲಿದೆ ಎಂದು ಹೇಳಿದ್ದಾರೆ.
ತೈಲ ಬೆಲೆ ಏರಿಕೆಯಿಂದಾಗಿ ದೈನಂದಿನ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. 13 ತಿಂಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಕ್ರಮವಾಗಿ ಲೀಟರ್ಗೆ ತಲಾ ₹ 25.72 ಹಾಗೂ ₹ 23.93 ರಷ್ಟು ಏರಿಕೆಯಾಗಿವೆ. ಐದು ತಿಂಗಳಲ್ಲಿ 43 ಬಾರಿ ಬೆಲೆಗಳನ್ನು ಏರಿಕೆ ಮಾಡಲಾಗಿದೆ. ಇದು ಕೇಂದ್ರ ಸರ್ಕಾರದ ಕೃಪಾಪೋಷಿತ ಭಾರಿ ಸಾರ್ವಜನಿಕ ಲೂಟಿಗೆ ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ.
ರಾಷ್ಟ್ರವ್ಯಾಪಿ ಪ್ರತಿಭಟನೆ ಪ್ರಯುಕ್ತ ಜೂನ್ 12 ರಂದು ಜಿಲ್ಲೆಯ ತಾಲ್ಲೂಕು ಕೇಂದ್ರ, 13 ರಂದು ಹೋಬಳಿ ಕೇಂದ್ರ, 14 ರಂದು ಗ್ರಾಮ ಪಂಚಾಯಿತಿ ಕೇಂದ್ರ, 15 ರಂದು ಉಳಿದ ಎಲ್ಲ ಪೆಟ್ರೋಲ್ ಬಂಕ್ಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮುಖಂಡರು, ಜಿಲ್ಲಾ ಘಟಕ, ಮುಂಚೂಣಿ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.