ದಕ್ಷಿಣೆ ಕೊಡುವುದು, ಉದಿನಕಡ್ಡಿ ಬೆಳಗುವುದು ಧರ್ಮವಲ್ಲ. ಧರ್ಮವೆಂದರೆ ಎತ್ತಿಹಿಡಿಯುವುದು. ಕೆಳಗೆ ಬಿದ್ದವರನ್ನು ಮೇಲೆತ್ತುವುದೇ ಧರ್ಮ. ದೀನರನ್ನು, ದುಃಖಿತರನ್ನು, ಅನಾಥರನ್ನು, ಪತೀತರನ್ನು ಪಾವನವಾಗಿಸುವುದೇ ಧರ್ಮ.
ಹೃದಯದ ತುಂಬಾ ಪ್ರೀತಿ ತುಂಬಿಕೊಂಡು ಸತ್ಕಾರ್ಯದಲ್ಲಿ ತೊಡಗುವುದೇ ನಿಜವಾದ ಧರ್ಮ. ‘ದಯವೇ ಧರ್ಮದ ಮೂಲವಯ್ಯ’ ಎಂದು ಬಸವಣ್ಣ ಹೇಳುತ್ತಾರೆ. ಒಬ್ಬರ ಮನ ನೋಯಿಸಿ, ಮತ್ತೊಬ್ಬರ ಮನೆಯ ಘಾತವ ಮಾಡಿ ಎಷ್ಟು ಸಲ ಗಂಗೆಯಲ್ಲಿ ಮುಳುಗಿದರೆ ಆಗುವುದೇನು? ಮನವ ನೋಯಿಸದವನೆ ಮನೆಯ ಘಾತವ ಮಾಡದವನೆ ಪರಮಪಾವನವಾಗುತ್ತಾನೆಂದು ಶಿವಯೋಗಿ ಸಿದ್ಧರಾಮೇಶ್ವರರು ಹೇಳುತ್ತಾರೆ.
ಧರ್ಮವೆಂಬುದು ಕನ್ನಡಿ ಇದ್ದಂತೆ. ಪಾಪಿಗಳಿಗೆ, ನೊಂದವರಿಗೆ, ಬೆಂದವರಿಗೆ, ಪರಿಶುದ್ಧರಾಗಲು ಧರ್ಮ ಬೇಕು. ಸದ್ಗುಣ ಸದಾಚಾರವಂತರಿಗೆ ಅದನ್ನು ನಿರಂತರವಾಗಿ ರಕ್ಷಣೆ ಮಾಡಲು ಧರ್ಮ ಬೇಕು. ನಾವೂ ಒಳ್ಳೆಯ ಕಾರ್ಯ ಮಾಡುತ್ತ ಇನ್ನೊಬ್ಬರ ಕಣ್ಣೀರು ಒರೆಸುತ್ತ ನಿಜವಾದ ಧರ್ಮ ಪಾಲನೆ ಮಾಡೋಣ.