ಬೀದರ್: ಇಲ್ಲಿಯ ಗುರುನಾನಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಖುಷಿ ಡಾ. ರವೀಂದ್ರಕುಮಾರ ಭೂರೆ ಒಂದು ದಿನದ ಮಟ್ಟಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿ ಕಾರ್ಯ ನಿರ್ವಹಿಸುವ ಮೂಲಕ ಗಮನ ಸೆಳೆದರು.
ಹೆಣ್ಣು ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಯೋಜನೆಯಡಿ ಈ ಅವಕಾಶ ಪಡೆದುಕೊಂಡ ಅವರು, ಜಿಲ್ಲಾ ಪಂಚಾಯಿತಿಯ ಹಾಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ಅವರ ಸಮ್ಮುಖದಲ್ಲಿ ಕುರ್ಚಿ ಮೇಲೆ ಕುಳಿತು ಅನೇಕರ ಅಹವಾಲುಗಳನ್ನು ಆಲಿಸಿದರು.
ಎಂಟು ಶಾಲೆಗಳ 27 ವಿದ್ಯಾರ್ಥಿನಿಯರ ಪೈಕಿ ಖುಷಿಗೆ ಒಂದು ದಿನದ ಸಿಇಒ ಆಗುವ ಸುಯೋಗ ದೊರಕಿತ್ತು. ಗುರುನಾನಕ ಸಂಸ್ಥೆಯಲ್ಲಿ ವಿದ್ಯಾರ್ಥಿನಿಗೆ ಸನ್ಮಾನ ಮಾಡಿದ ಶಾಲೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಅವರು ಖುಷಿಯನ್ನು ಜಿಲ್ಲಾ ಪಂಚಾಯಿತಿಯ ಕಾಯಂ ಸಿಇಒ ಆಗಿ ಕಾಣಲು ಬಯಸುತ್ತೇವೆ ಎಂದು ನುಡಿದರು.
ಶಿಕ್ಷಕರ ಉತ್ತಮ ಮಾರ್ಗದರ್ಶನದಿಂದಾಗಿಯೇ ಖುಷಿ ಒಂದು ದಿನದ ಸಿಇಒ ಆಗಲು ಸಾಧ್ಯವಾಗಿದೆ ಎಂದು ಹೇಳಿದರು.
ಶಾಲೆಯ ಪ್ರಾಚಾರ್ಯ ಎನ್. ರಾಜು, ಶಿಕ್ಷಕರಾದ ಮನೋಹರ ಮುಳೆ, ರಾಜು ಪ್ರಕಾಶ ಇದ್ದರು.