ಬೀದರ್: ಕೃಷಿ ಕ್ಷೇತ್ರದ ಖಾಸಗೀಕರಣವನ್ನು ತಡೆಯಬೇಕು ಎಂದು ಬಹುಜನ ಸಮಾಜ ಪಕ್ಷ ಆಗ್ರಹಿಸಿದೆ. ಪಕ್ಷದ ಪದಾಧಿಕಾರಿಗಳು ನಿಯೋಗದಲ್ಲಿ ನಗರದಲ್ಲಿ ಮಂಗಳವಾರ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಗಂಗಾದೇವಿ ಅವರಿಗೆ ಸಲ್ಲಿಸಿದರು.
ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು. ಕೃಷಿ ಭೂಮಿ ಖಾಸಗಿಕರಣ ನಿಲ್ಲಿಸಬೇಕು. ಉಳ್ಳುವವನಿಗೆ ಕೃಷಿ ಭೂಮಿ ಖಾತರಿಪಡಿಸಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು. ಉದ್ಯೋಗಾವಕಾಶ ಹೆಚ್ಚಿಸಬೇಕು. ಶಿಕ್ಷಣ, ಆರೋಗ್ಯ, ಸಾರಿಗೆ, ಮೂಲಸೌಲಭ್ಯ ಕ್ಷೇತ್ರಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಸಂಯೋಜಕರಾದ ಪ್ರಕಾಶ ಕೋಟೆ, ಸುಭಾಷ ಸಿಕಿಂದ್ರಾಪುರ, ಬೀದರ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸತ್ಯದೀಪ ಹಾವನೂರ, ಪ್ರಮುಖರಾದ ತಿಪ್ಪಣ್ಣ ಎಸ್. ವಾಲಿ, ಅಶೋಕ ಮಾಳಗೆ, ಯೋಹನ್ ಡಿಸೋಜಾ, ಜಾಫರ್ ಖುರೇಶಿ, ಫಹೀಮ್ ಪಟೇಲ್, ವಿನಯಕುಮಾರ ಭಾವಿಕಟ್ಟಿ ಇದ್ದರು.