ಚಿಟಗುಪ್ಪ: ‘ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಗೌರವ ತೋರಿದ್ದಾರೆ’ ಎಂದು ಆರೋಪಿಸಿ ಗ್ರಾಮದ ರಡ್ಡಿ ಸಮಾಜ ಪದಾಧಿಕಾರಿಗಳು ಪ್ರತಿಭಟಿಸಿದರು.
ಮುಖಂಡ ಜಗನ್ನಾಥ ರಡ್ಡಿ ಎಖ್ಖೇಳಿ ಮಾತನಾಡಿ, ‘ಕಚೇರಿಯಲ್ಲಿ ಮಲ್ಲಮ್ಮಳ ಭಾವಚಿತ್ರವೂ ಸರಿ ಇರಲಿಲ್ಲ ಯಾವುದೋ ದಿನದರ್ಶಿಕೆಯಲ್ಲಿಯ ಭಾವಚಿತ್ರ ಇಟ್ಟು ಪೂಜೆ ಮಾಡಿದ್ದಾರೆ, ಮಲ್ಲಮ್ಮಳ ದೇಗುಲದ ಎದುರುಗಡೆ ಹಾಕಲಾದ ಹೈಮಾಸ್ಟ ದೀಪ ಹಾಳಾಗಿದ್ದು ಜಯಂತಿ ದಿನ ದುರಸ್ಥಿ ಕೈಗೊಂಡು ಸಂಭ್ರಮದಿಂದ ಜಯಂತಿ ಆಚರಿಸಲು ಸೌಲಭ್ಯ ಒದಗಿಸಿಕೊಡಬೇಕು ಎಂದು ಅಭಿವೃದ್ಧಿ ಅಧಿಕಾರಿಗೆ ಒಂದು ವಾರ ಮುಂಚೆ ತಿಳಿಸಿದ್ದೇವೆ ಆದರೂ ಇತ್ತ ಗಮನ ಹರಿಸದೇ ನಿರ್ಲಕ್ಷ ವಹಿಸಿದ್ದು ರಡ್ಡಿ ಸಮಾಜಕ್ಕೆ ಅವಮಾನ ಮಾಡಿದಂತಾಗಿದೆ’ ಎಂದು ಆರೋಪಿಸಿದರು.
ವಿಠಲರೆಡ್ಡಿ ಲಚ್ಚನಗಾರ್, ಯಾಮಾರಡ್ಡಿ ಹಾಸರಡ್ಡಿ ಮಾತನಾಡಿ, ‘ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುತ್ತದೆ’ ಎಂದರು.