ರಾಜ್ಯದ ಮುಖ್ಯಮಂತ್ರಿ ಹಾಗೂ ವಿವಿಧ ಪಕ್ಷಗಳ ರಾಷ್ಟ್ರ, ರಾಜ್ಯಮಟ್ಟದ ಘಟಾನುಘಟಿ ನಾಯಕರು ಪ್ರಚಾರದಲ್ಲಿ ಪಾಲ್ಗೊಂಡಿದ್ದರಿಂದ ಬೇಸಿಗೆಯ ಬಿಸಿಲಿನ ಜತೆಗೆ ಉಪ ಚುನಾವಣೆಯ ಕಾವೂ ಹೆಚ್ಚಿತ್ತು. ಆದರೆ, ಇನ್ನು ಮುಂದೆ ಮೇ 2ರ ಮತ ಎಣಿಕೆಯ ದಿನದ ವರೆಗೆ ರಾಜಕೀಯ ಸ್ತಬ್ಧತೆ ಆವರಿಸಲಿದೆ.
ಮಧ್ಯಾಹ್ನದವರೆಗೆ ಮತಗಟ್ಟೆಗಳಲ್ಲಿ ನಿರುತ್ಸಾಹದ ವಾತಾವರಣ ಇತ್ತಾದರೂ ಆಯಾ ಪಕ್ಷಗಳ ಅಭ್ಯರ್ಥಿಗಳು ಮಾತ್ರ ಬೆಳಿಗ್ಗೆಯೇ ತಮ್ಮ ತಮ್ಮ ವಾರ್ಡ್ ಗಳಲ್ಲಿ ಕುಟುಂಬ ಹಾಗೂ ಬೆಂಬಲಿಗರೊಂದಿಗೆ ಬಂದು ಮತ ಚಲಾಯಿಸಿದರು.