ಹುಲಸೂರ: ಮದ್ಯದಂಗಡಿ ಮುಚ್ಚಿಸಲು ಡಿ.ಸಿಗೆ ಮನವಿ

ಹುಲಸೂರ: ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಲು ಮಂಗಳವಾರ ಹುಲಸೂರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುತ್ತಲ್ಲಿನ ಗ್ರಾಮದ ಜನರು ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಜಿ೯ ಬರೆದು ಸಾಲು ನಿಂತಿರುವ ದೃಶ್ಯ ಕಂಡುಬಂತು.
ಜಿಲ್ಲಾಧಿಕಾರಿ ಅವರನ್ನು ಆದರದಿಂದ ಬರಮಾಡಿಕೊಂಡ ತಹಶೀಲ್ದಾರ್ ಶಿವಾನಂದ ಮೆತ್ರೆ ಅವರು ಸಂವಿಧಾನದ ಪುಸ್ತಕ ನೀಡಿ ಸನ್ಮಾನಿಸಿದರು.
ಪಿಯುಸಿ ದ್ವಿತೀಯ ವಿಜ್ಞಾನ ವಿಭಾಗದಲ್ಲಿ 584 ಅಂಕ ಪಡೆದು ಜಿಲ್ಲೆಗೆ ದ್ವೀತಿಯ ಸ್ಥಾನ ಪಡೆದ ಬೇಲೂರನ ವಿದ್ಯಾರ್ಥಿನಿ ಅಪೂರ್ವ ಶಿವರಾಜ ಅಂತಪನ್ನವರ್ ಅವರನ್ನು ಜಿಲ್ಲಾಧಿಕಾರಿ ಸನ್ಮಾನಿಸಿದರು.
ಸಂಧ್ಯಾಸುರಕ್ಷಾ, ಬಸ್ ನಿಲ್ದಾಣ, ಸಾರ್ವಜನಿಕರ ಸ್ಮಶಾನ ಭೂಮಿ, ತಾಲ್ಲೂಕು ಕೇಂದ್ರದಿಂದ ಮುಚಳಂಬ ರಸ್ತೆ ಡಾಂಬರೀಕರಣ, ರೈತರ ಜಮೀನು ಒತ್ತುವರಿ, ಪಟ್ಟಾದಾರಿಕೆ ಬದಲಾಣೆ, ಡಿಡಿಎಲ್ಆರ್, ಗ್ರಾಮಗಳ ರಸ್ತೆ ನಿರ್ಮಾಣ, ಆಂಬುಲೆನ್ಸ್ ಹಾಗೂ ಮಹಿಳಾ ವೈದ್ಯಾಧಿಕಾರಿ ನೇಮಕ, ಸೇತುವೆ ನಿರ್ಮಾಣ ಕುರಿತು ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಸಂಬಂಧ ಪಟ್ಟ ಇಲಾಖೆಗೆ ಅರ್ಜಿ ರವಾನೆ ಮಾಡಿ ಪರಿಹಾರ ನೀಡುವಂತೆ ಆದೇಶ ಮಾಡಿದರು. ಸೋಲದಾಬಕಾ ಗ್ರಾಮದ ಮಹಿಳೆಯರು ಜಿಲ್ಲಾ ಅಧಿಕಾರಿಯವರನ್ನು ಭೇಟಿ ಯಾಗಿ ಗ್ರಾಮದ ಕಿರಾಣಿ ಅಂಗಡಿಯಲ್ಲಿ ಸಾರಾಯಿ ಮಾರಾಟ ಮಾಡುತ್ತಿರುವುದರಿಂದ ತಮಗಾಗುತ್ತಿರುವ ತೊಂದರೆಗಳನ್ನು ವಿವರಿಸಿದರು. ಗಂಡಸರು ಮನೆಯಲ್ಲಿನ ಆಭರಣ, ಪಾತ್ರೆಗಳನ್ನು ಅಡವು ಇಟ್ಟು ಸಾರಾಯಿ ಕುಡಿಯುತ್ತಾರೆ. ಕುಡಿದ ನಶೆಯಲ್ಲಿ ಪ್ರತಿದಿನವೂ ಮನೆಯಲ್ಲಿ ಜಗಳ ಆಡುತ್ತಾರೆ. ತಮ್ಮ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ಗೋಳು ತೋಡಿಕೊಂಡರು.
ಉಪವಿಭಾಗಾಧಿಕಾರಿ ರಮೇಶ ಕೋಲಾರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಬಾಬಳಗಿ, ಸಹಾಯಕ ನಿರ್ದೇಶಕ ಮಹಾದೇವ ಜಮ್ಮು, ರೈತ ಸಂಪರ್ಕ ಅಧಿಕಾರಿ ಮನೀಶಾ ಬಿರಾದಾರ, ಡಾ.ಅರಿಫೋದಿನ್, ಡಾ. ಸುಧಾಕರ, ಉಪತಹಶೀಲ್ದಾರ್ ಸಂಜು ಭೈರೆ, ಕಂದಾಯ ನಿರೀಕ್ಷಕ ಮೌನೇಶ್ವರಸ್ವಾಮಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.