ಚಿಟಗುಪ್ಪ: ಮನುಷ್ಯನಿಗೆ ಜೀವನದಲ್ಲಿ ಅಧಿಕಾರ-ಐಶ್ವರ್ಯಕ್ಕಿಂತ ಸಂಸ್ಕೃತಿ- ಸಂಸ್ಕಾರ ಮುಖ್ಯ ಎಂದು ರಾಜಸ್ತಾನದ ಅಜ್ಮೀರ್ನ ಶ್ರದ್ಧಾನಂದ ಶಾಸ್ತ್ರಿ ಹೇಳಿದರು.
ತಾಲ್ಲೂಕಿನ ನಿರ್ಣಾದ ಆರ್ಯಸಮಾಜ ಮಂದಿರದಲ್ಲಿ ಶ್ರಾವಣ ಮಾಸ ನಿಮಿತ್ತ ನಡೆಯುತ್ತಿರುವ ಐದು ದಿನಗಳ ಐದು ಕುಂಡಗಳ ಮಹಾಯಜ್ಞ ಪೂಜಾ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.
‘ಇಂದಿನ ಜನಾಂಗ ದೇಶದ ಸಂಸ್ಕೃತಿ, ಧಾರ್ಮಿಕತೆ ಬಗ್ಗೆ ನಿರಾಸಕ್ತಿ ತೋರುತ್ತಿರುವುದರಿಂದ ಮಾನವನಲ್ಲಿ ಮಾನವೀಯ ಮೌಲ್ಯಗಳು ಕ್ಷೀಣವಾಗುತ್ತಿವೆ. ಪ್ರತಿಯೊಬ್ಬರೂ ಹೆತ್ತ ತಂದೆ-ತಾಯಿ, ಕಲಿಸಿದ ಗುರು, ಧಾರ್ಮಿಕ ಗುರುಗಳ ಮಾರ್ಗದರ್ಶನಲ್ಲಿ ಸಾಗಬೇಕು’ ಎಂದರು.
ಮಥುರಾದ ಧರ್ಮವೀರ ಶಾಸ್ತ್ರಿ ಮಾತನಾಡಿ, ‘ಶ್ರಾವಣ ಮಾಸದಲ್ಲಿ ಧಾರ್ಮಿಕ ಆಚರಣೆಗಳಲ್ಲಿ ವ್ಯಕ್ತಿ ತನ್ನನ್ನು ತಾನು ತೊಡಗಿಸಿಕೊಂಡು ಅಧ್ಯಾತ್ಮ ಚಿಂತನೆಗಳು ಮಾಡುವ ಮೂಲಕ ಬದುಕು ಹಸನಗೊಳಿಸಿಕೊಳ್ಳಬೇಕು’ ಎಂದರು.