ಬೀದರ್: ‘ಬಿಜೆಪಿ ಹೈಕಮಾಂಡ್ ಗ್ರೌಂಡ್ ರಿಯಾಲಿಟಿ ಸರ್ವೇ ಮಾಡಬೇಕು. ಅನಂತರ ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಕೊಡಬೇಕು ಎಂಬುದನ್ನು ನಿರ್ಧರಿಸಬೇಕು’ ಎಂದು ಬಿಜೆಪಿ ಹಿರಿಯ ಮುಖಂಡರೂ ಆದ ಮಾಜಿ ಶಾಸಕ ಸುಭಾಷ ಕಲ್ಲೂರ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಇಡೀ ಭಾರತದಲ್ಲಿ ಬಿಜೆಪಿಯ 150 ಹಾಲಿ ಸಂಸದರ ಟಿಕೆಟ್ಗಳು ಕಟ್ ಆಗುತ್ತವೆ. ಅಂತಿಮವಾಗಿ ಹೈಕಮಾಂಡ್ ಏನು ಹೇಳುತ್ತದೆ ಅದನ್ನು ಪಾಲಿಸುತ್ತೇವೆ’ ಎಂದರು.
ಕೆಲವರು ‘ಆಸ್ಮಾನ್’ ಮುಟ್ಟಿದ್ದವರಂತೆ ಮಾತನಾಡುತ್ತಿದ್ದಾರೆ. ಅವರಿಗೆ ಬುದ್ಧಿ ಬರಲೆಂದು ಈ ಪತ್ರಿಕಾಗೋಷ್ಠಿ ಕರೆಯಲಾಗಿದೆ. ಚುನಾವಣೆ ಬಂದಾಗ ಕಾರ್ಯಕರ್ತರನ್ನು ಬಳಸಿಕೊಳ್ಳುವುದು, ನಂತರ ಅವರನ್ನು ಕಡೆಗಣಿಸುವುದು ಸರಿಯಲ್ಲ ಎಂದರು.
2014, 2019ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಲ್ಲಿ ಭಗವಂತ ಖೂಬಾ ಅವರು ಬೀದರ್ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಈಗ ಅವರು ಕೇಂದ್ರದಲ್ಲಿ ಸಚಿವರೂ ಹೌದು. ಅವರು ಅವರ ಪಾಲಿನ ಕೆಲಸ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲೂ ಮೋದಿಯವರ ನಾಯಕತ್ವದಲ್ಲಿ ಪಕ್ಷ ಗೆದ್ದು ಪುನಃ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ನಂತರ ಯುವಕರಲ್ಲಿ ಭರವಸೆ ಮೂಡಿದೆ. ಬಿ.ಎಸ್. ಯಡಿಯೂರಪ್ಪನವರ ಎಲ್ಲಾ ಗುಣಗಳು ವಿಜಯೇಂದ್ರ ಅವರಲ್ಲಿವೆ. ಸಾಮರ್ಥ್ಯ, ಯೋಗ್ಯತೆ ಎರಡೂ ವಿಜಯೇಂದ್ರ ಅವರಿಗಿದೆ. ಇನ್ನೊಂದೆಡೆ 7 ಬಾರಿ ಶಾಸಕರಾಗಿರುವ ಆರ್.ಅಶೋಕ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಜೆಡಿಎಸ್ ಮೈತ್ರಿಯಿಂದ ಐದಾರೂ ಜಿಲ್ಲೆಗಳಲ್ಲಿ ಪಕ್ಷಕ್ಕೆ ಶಕ್ತಿ ಬಂದಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ಜೋಡೆತ್ತಿನ ಜೋಡಿಯಿಂದ ಗೆಲ್ಲುತ್ತೇವೆ ಎಂದು ಹೇಳಿದರು.
ಭಿನ್ನಾಭಿಪ್ರಾಯಗಳು ಸಹಜ. ಶಾಸಕರ ಅಭಿಪ್ರಾಯ ಕೂಡ ಬಹಳ ಮುಖ್ಯ. ಹೈಕಮಾಂಡ್ ಶಾಸಕರ ಅಭಿಪ್ರಾಯ ಪರಿಗಣಿಸಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.