‘ಸಿದ್ದರಾಮಯ್ಯ–ಶಿವಕುಮಾರ ರಾಮ ಲಕ್ಷ್ಮಣನಂತೆ’
(ಚಿತ್ರ ಇದೆ–ಸಲೀಂ ಅಹಮ್ಮದ್) ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ರಾಮ–ಲಕ್ಷ್ಮಣನಂತಿದ್ದಾರೆ. ಅವರು ಬ್ರೇಕ್ ಫಾಸ್ಟ್ ಲಂಚ್ ಡಿನ್ನರ್ ಏನು ಬೇಕಾದರೂ ಮಾಡಲಿ. ಬಿಜೆಪಿಯವರಿಗೆ ಅವರ ಉಸಾಬರಿ ಏಕೆ. ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಅದನ್ನು ಸರಿ ಮಾಡಲು ಪಕ್ಷದ ಹೈಕಮಾಂಡ್ ಇದೆ. ಬಿಜೆಪಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು’ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಸಿದ್ದು–ಡಿಕೆಶಿ ಬ್ರೇಕ್ಫಾಸ್ಟ್ ಮೀಟ್ ಜೆಡಿಎಸ್ ಹಾಗೂ ಬಿಜೆಪಿಗೆ ಕಪಾಳಮೋಕ್ಷವಾಗಿದೆ. ಪಕ್ಷ ಒಡೆದು ಹೋಗುತ್ತದೆ ಎಂದು ಸುದ್ದಿ ಹಬ್ಬಿಸಿದ್ದರು. ಈಗೇನಾಯಿತು? ನಮ್ಮ ಪಕ್ಷದಲ್ಲಿ ನರೇಂದ್ರ ಮೋದಿ ರೀತಿ ಒಬ್ಬರೇ ಹೇಳಿದಂತೆ ನಡೆಯುವುದಿಲ್ಲ. ಹೈಕಮಾಂಡ್ ಇದೆ. ಟಿಕೆಟ್ ಸಚಿವ ಸ್ಥಾನ ಸೇರಿದಂತೆ ಎಲ್ಲವೂ ಅದೇ ನಿರ್ಧರಿಸುತ್ತದೆ. ಎಲ್ಲಾ ವರ್ಗಗಳ ಹಿತ ಕಾಪಾಡುವುದು ಕಾಂಗ್ರೆಸ್ ಪಕ್ಷದ ಧ್ಯೇಯ. ಸಮಯ ಸಂದರ್ಭ ನೋಡಿ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ಈಗ ನಮ್ಮ ಮುಂದಿರುವುದು ಬೆಳಗಾವಿ ವಿಧಾನ ಮಂಡಲದ ಅಧಿವೇಶನ. ಅಲ್ಲಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಲಾಗುವುದು ಎಂದರು.