ಚಿಟಗುಪ್ಪ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಮಕ್ಕಳು ಪಾಠ–ಪ್ರವಚನಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ‘ವಿದ್ಯಾಗಮ’ ಯೋಜನೆ ಜಾರಿಗೆ ತಂದಿದ್ದು, ಇದರ ಯಶಸ್ಸಿಗೆ ಶಿಕ್ಷಕರು ಹರಸಾಹಸ ಪಡುತ್ತಿದ್ದಾರೆ.
ಸರ್ಕಾರಿ ಶಾಲೆಗಳ ಶಿಕ್ಷಕರು ಮನೆಗಳಿಗೆ ಭೇಟಿ ನೀಡಿ ಗುಡಿ ಹಾಗೂ ಕಲ್ಯಾಣ ಮಂಟಪಗಳಲ್ಲಿ ಮಕ್ಕಳನ್ನು ಸೇರಿಸಿ ಪಾಠ ಮಾಡುತ್ತಾರೆ.
‘ನಿಯಮಿತವಾಗಿ ಮಕ್ಕಳ ಮನೆಗೆ ಭೇಟಿ ನೀಡುತ್ತೇವೆ. ಅವರಿಂದಲೇ ಕತೆ ಓದಿಸಿ, ಒಗಟು ಬಿಡಿಸುತ್ತೇವೆ. ಬಳಿಕ ಕತೆಯ ನೀತಿಯ ಕುರಿತು ಬರೆಸುತ್ತೇವೆ. ಈ ಮೂಲಕ ಮಕ್ಕಳು ಬರೆಯುವ ಮತ್ತು ಓದುವ ಅಭ್ಯಾಸ ಮರೆಯದಂತೆ ನೋಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಕರಕನಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯಗುರು ವಿಠಲರೆಡ್ಡಿ ಅವರು.
‘ಸರ್ಕಾರಿ ಶಾಲೆಗಳಿಗಾಗಿ ವಿದ್ಯಾಗಮ ಯೋಜನೆ ರೂಪಿಸಿದಂತೆ ಖಾಸಗಿ, ಅನುದಾನ ರಹಿತ ಶಾಲೆಗಳ ಮಕ್ಕಳು, ಶಿಕ್ಷಕರ ಕುರಿತು ಸರ್ಕಾರ ವಿಶೇಷ ಕಾಳಜಿ ವಹಿಸಬೇಕು. ಸೂಕ್ತ ಯೋಜನೆಯನ್ನು ರೂಪಿಸಬೇಕು’ ಎಂದು ಖಾಸಗಿ ಶಾಲೆ ಶಿಕ್ಷಕ ರಮೇಶ ಬೆನಕಿಪಳ್ಳಿ ಆಗ್ರಹಿಸಿದರು.
‘ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಗೂಗಲ್ ಮೀಟ್ ಮೂಲಕ ದಿನಕ್ಕೊಂದು ಗಂಟೆ ಪಾಠ ಮಾಡುತ್ತೇವೆ. ಪ್ರತಿದಿನ ಶೇ 90 ರಷ್ಟು ಹಾಜರಾತಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಶಾಲೆಯ ವಿದ್ಯಾರ್ಥಿ-ಪೋಷಕರನ್ನು ಭೇಟಿಯಾಗಿ ಭೌತಿಕ ಪ್ರಗತಿ ಪರಿಶೀಲನೆ ನಡೆಸುತ್ತೇವೆ’ ಎಂದು ಬೆಳಕೇರಾ ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಬಾಬುರಾವ್ ಅಂಬಲೆ ನುಡಿಯುತ್ತಾರೆ.
ವಠಾರ ಶಾಲೆಯಲ್ಲಿ ಮಕ್ಕಳಿಗೆ ಮುಕ್ತ ವಿಷಯ ಗ್ರಹಿಸುವಿಕೆ ಸಾಧ್ಯವಾಗುವುದಿಲ್ಲ. ಸೋಂಕು ಹರಡುವುದಿಲ್ಲ ಎನ್ನುವ ಭರವಸೆಯೂ ಇಲ್ಲ. ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಂಡು ಶಾಲಾ ಆವರಣದಲ್ಲಿಯೇ ಪಾಠ ಮಾಡಬೇಕು. ಇದು ಪರಿಣಾಮಕಾರಿ ಆಗಿರಲಿದೆ ಎಂದು ಪಾಲಕರಾದ ರಾಜಪ್ಪ, ರಾಮಚಂದ್ರ ಹಾಗೂ ಕಾಶಿನಾಥ್ ತಿಳಿಸುತ್ತಾರೆ.