ಬೀದರ್: ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹಿಂದಿ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದು ಸೋಲಾಪುರದ ಹರಿಭಾಯಿ ದೇವಕರಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಧನ್ಯಕುಮಾರ ಬಿರಾದಾರ ಹೇಳಿದರು.
ಇಲ್ಲಿಯ ಕರ್ನಾಟಕ ಕಾಲೇಜಿನಲ್ಲಿ ದೇಶ ಭಕ್ತಿ ಗೀತೆ ಗಾಯನ, ಪೋಸ್ಟರ್ ಪ್ರದರ್ಶನ ಹಾಗೂ ಭಾರತದ ಸ್ವಾತಂತ್ರ್ಯಕ್ಕೆ ಹಿಂದಿ ಸಾಹಿತ್ಯದ ಕೊಡುಗೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರೇಮಚಂದ್, ಸುಭದ್ರಾಕುಮಾರಿ ಚೌಹಾಣ್, ಮಹಾದೇವಿ ಮರ್ಮಾ ಸೇರಿ ಅನೇಕ ಕವಿಗಳು ಅನೇಕ ದೇಶ ಭಕ್ತಿ ಗೀತೆಗಳನ್ನು ರಚಿಸಿ, ದೇಶ ಪ್ರೇಮಿಗಳಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವಂತೆ ಪ್ರೇರೇಪಿಸಿದ್ದರು ಎಂದು ತಿಳಿಸಿದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ದೇಶಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಸಿದ್ಧರಾಜ ಪಾಟೀಲ, ಪರಮೇಶ್ವರ ನಾಗೂರೆ, ಉಪನ್ಯಾಸಕ ಜನವಾಡಕರ್ ಇದ್ದರು. ಗೀತಾ ಪೋಸ್ತೆ ಸ್ವಾಗತಿಸಿದರು. ಪ್ರಭಾ ಎಕಲಾರಕರ್ ವಂದಿಸಿದರು.