ಭಾಲ್ಕಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಅಂಗಡಿಗಳಲ್ಲಿ ಈಚೆಗೆ ನಡೆದ ತೊಗರಿ ಕಳ್ಳತನದ ಪ್ರಕರಣವನ್ನು ಭೇದಿಸಿದ ನಗರ ಪೊಲೀಸ್ ಠಾಣೆಯ ಸಿಬ್ಬಂದಿ 5 ಜನ ಆರೋಪಿಗಳನ್ನು ಬಂಧಿಸಿ, ಎರಡು ಕ್ರೂಸರ್ ವಾಹನ, 66 ಚೀಲ ತೊಗರಿ ಜಪ್ತಿ ಮಾಡಿಕೊಂಡಿದ್ದು, ಇವುಗಳ ಅಂದಾಜು ಮೌಲ್ಯ ₹8.20 ಲಕ್ಷವಾಗಿದೆ.
ಶಿವಶಂಕರ ಟ್ರೇಡಿಂಗ್ ಅಡತ್ ಅಂಗಡಿಯಲ್ಲಿ 25 ತೊಗರಿ ಚೀಲ, ಸುರೇಶ ಮಾಣಿಕಪ್ಪಾ ಭುರೆ ಟ್ರೇಡಿಂಗ್ನಲ್ಲಿ 13, ಜಗದೀಶ ಮನ್ಮಥಪ್ಪ ಮಲ್ಲಾಸೂರೆ ಟ್ರೇಡಿಂಗ್ನಲ್ಲಿ 20 , ಶಂಕರ ಪ್ರಭುರಾವ್ ಕೊಟಗ್ಯಾಳೆ ಟ್ರೇಡಿಂಗ್ನಲ್ಲಿ 8 ತೊಗರಿ ಚೀಲ ಕಳುವಾದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.
ನಗರ ಠಾಣೆ ಸಿಪಿಐ ಟಿ.ಅರ್.ರಾಘವೇಂದ್ರ, ಪಿಎಸ್ಐ ಶೇಕಷಾ ಪಟೇಲ್ ಅಪರಾಧ ವಿಭಾಗದ ಸಿಬ್ಬಂದಿ ಉಮಾಕಾಂತ ದಾನಾ, ನಾಗಪ್ಪಾ ಖೇಡೆ, ರಮೇಶ ಮೇತ್ರೆ, ಹಾವಣ್ಣ ಪೂಜಾರಿ, ಶಿವಣ್ಣ, ವಿಕ್ರಮ, ಶ್ಯಾಮರಾಯ ಅವರನ್ನು ಒಳಗೊಂಡ ತಂಡ ಕಳ್ಳತನದ ಪ್ರಕರಣವನ್ನು ಭೇದಿಸಲು ಯಶಸ್ವಿಯಾಗಿದೆ.