<p><strong>ಭಾಲ್ಕಿ</strong>: ‘ವಚನ ಸಾಹಿತ್ಯದಲ್ಲಿ ಅದ್ಭುತ ಶಕ್ತಿ ಅಡಗಿದೆ. ದೇವರಿಗೆ ಕನ್ನಡ ಭಾಷೆ ಕಲಿಸಿದ ಹಿರಿಮೆ 12ನೇ ಶತಮಾನದ ವಚನಕಾರರಿಗೆ ಸಲ್ಲುತ್ತದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.</p>.<p>ತಾಲ್ಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಅಮೃತ ಮಹೋತ್ಸವ ಸ್ವಾಗತ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ‘ಬಸವಲಿಂಗ ಪಟ್ಟದ್ದೇವರು ನಡೆದು ಬಂದ ದಾರಿ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಗಡಿಭಾಗದಲ್ಲಿ ವಚನ ಸಾಹಿತ್ಯ ಮತ್ತು ಕನ್ನಡ ಭಾಷೆಯ ಸಂರಕ್ಷಣೆಯಲ್ಲಿ ಹಿರೇಮಠ ಸಂಸ್ಥಾನದ ಕೊಡುಗೆ ಅನನ್ಯವಾಗಿದೆ. ಇಂದಿನ 21ನೇ ಶತಮಾನಕ್ಕೆ ವಚನ ಸಾಹಿತ್ಯ ಮಾರ್ಗದರ್ಶನವಾಗಬೇಕಿದೆ. ರಾಜ್ಯದಲ್ಲಿ ಅನ್ಯ ಭಾಷೆಗಳ ಹಾವಳಿ ಹೆಚ್ಚಿದೆ. ಕನ್ನಡ ಭಾಷೆ ದಯನೀಯ ಸ್ಥಿತಿಗೆ ತಲುಪಿದೆ. ಇದು ಹೀಗೆ ಮುಂದುವರಿದರೆ ಮುಂದಿನ ಎರಡ್ಮೂರು ದಶಕಗಳಲ್ಲಿ ಕನ್ನಡ ಕೇವಲ ಮಾತನಾಡುವ ಭಾಷೆಯಾಗಿ ಉಳಿಯಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ನಿಜಾಮನ ಆಳ್ವಿಕೆಯಲ್ಲಿ ಚನ್ನಬಸವ ಪಟ್ಟದ್ದೇವರು ಹೊರಗಡೆ ಉರ್ದು ಬೋರ್ಡ್ ಅಳವಡಿಸಿ ಒಳಗಡೆ ಕನ್ನಡ ಕಲಿಸಿ ಭಾಷೆಯ ಅಭಿಮಾನ ಮೆರೆದು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಸ್ವತಂತ್ರ ಪೂರ್ವ ಮತ್ತು ನಂತರದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಈ ಭಾಗವನ್ನು ಬೆಳಗಿಸುವ ಕೆಲಸ ಮಾಡಿದ್ದಾರೆ. ಬಸವಲಿಂಗ ಪಟ್ಟದ್ದೇವರು ಕೂಡ ತಮ್ಮ ಹಿರಿಯ ಪೂಜ್ಯರ ದಾರಿಯಲ್ಲಿ ನಡೆದು ಬಡವರು, ದುರ್ಬಲ ವರ್ಗದವರಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ಆದರ್ಶಪ್ರಾಯವಾಗಿದ್ದಾರೆ’ ಎಂದರು.</p>.<p>‘ಕನ್ನಡ ಭಾಷೆ ಉಳಿಯಬೇಕಾದರೆ ಸರ್ಕಾರ ರಾಜ್ಯ ಶಿಕ್ಷಣ ನೀತಿ ತರುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪೂಜ್ಯರು ಕೂಡ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲು ಧ್ವನಿಯೆತ್ತಬೇಕು’ ಎಂದು ಮನವಿ ಮಾಡಿದರು.</p>.<p>ನವದೆಹಲಿಯ ಸೂರ್ಯ ಫೌಂಡೇಶನ್ ಅಧ್ಯಕ್ಷ ಅನಂತ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಕಲ್ಯಾಣರಾವ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು.</p>.<p>ಮಾಣಿಕನಗರ ಮಾಣಿಕಪ್ರಭು ಸಂಸ್ಥಾನದ ಆನಂದ ಮಹಾರಾಜರು, ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಗೀತಾ ಈಶ್ವರ ಖಂಡ್ರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರೇಷ್ಮಾ ಕೌರ್, ಹಿರಿಯ ಸಾಹಿತಿ ಜಗನ್ನಾಥ ಹೆಬ್ಬಾಳೆ ಸೇರಿದಂತೆ ಹಲವರು ಇದ್ದರು.</p>.<p>ಆಕಾಶವಾಣಿ, ದೂರದರ್ಶನ ಕಲಾವಿದ ನವಲಿಂಗ ಪಾಟೀಲ ನಿರೂಪಿಸಿದರು. ರಾಜು ಜುಬರೆ ವಂದಿಸಿದರು.</p>.<p><strong>ಬಸವ ರತ್ನ ಪ್ರಶಸ್ತಿ ಪ್ರದಾನ:</strong> ಸೂರ್ಯ ಫೌಂಡೇಶನ್ ಮತ್ತು ಇಂಟರ್ನ್ಯಾಷನಲ್ ನ್ಯಾಚುರೋಪತಿ ಆರ್ಗನೈಜೇಶನ್ ದೆಹಲಿ ವತಿಯಿಂದ ಬಸವಲಿಂಗ ಪಟ್ಟದ್ದೇವರಿಗೆ ಬಸವ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p><strong>‘ಬಸವಲಿಂಗ ಪಟ್ಟದ್ದೇವರು ಶರಣ ತತ್ವದ ಕುಸುಮ’</strong></p>.<p>‘ಗಡಿಭಾಗದಲ್ಲಿ ಸರ್ವ ಸಮಾನತೆಯನ್ನು ಸ್ಥಾಪಿಸಲು ದಿಟ್ಟ ಹೆಜ್ಜೆಯನ್ನಿಟ್ಟ ಮಠ ಭಾಲ್ಕಿಯ ಹಿರೇಮಠ. ಇದರ ಹಿರಿಯ ಸ್ವಾಮೀಜಿ ಆಗಿರುವ ಬಸವಲಿಂಗ ಪಟ್ಟದ್ದೇವರು ಶರಣ ತತ್ವದ ಕುಸುಮ ಆಗಿದ್ದಾರೆ’ ಎಂದು ಸಾಹಿತಿ ಸೋಮನಾಥ ಯಾಳವಾರ ಹೇಳಿದರು.</p>.<p>ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನಡೆದ ಶ್ರೀಗಳ ಜೀವನ ಸಾಧನೆ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಮಾಗಿದ್ದು ಬಾಗುತ್ತದೆ ಎಂಬ ಮಾತಿಗೆ ಪರಿಪೂರ್ಣ ಹೋಲಿಕೆ ಆಗುವವರು ಪಟ್ಟದ್ದೇವರು. ಓದಿದವರು ದಣಿಯುವಷ್ಟು, ತಣಿಯುವಷ್ಟು ಸಾಧನೆಯನ್ನು ಬಸವಲಿಂಗ ಪಟ್ಟದ್ದೇವರು ಮಾಡಿದ್ದಾರೆ’ ಎಂದು ತಿಳಿಸಿದರು.</p>.<p>‘ಶಿವರಾಜ ಎಂಬ ಹುಡುಗ ಬಸವಲಿಂಗ ಪಟ್ಟದ್ದೇವರು ಆಗಿ ಬೆಳೆದದ್ದು ತುಂಬಾ ರೋಚಕ. ವ್ಯಕ್ತಿಯ ಸಾಧನೆಯ ಮೂಲಬೇರು ಕುಟುಂಬದ ಸಂಸ್ಕಾರ, ತಾಳ್ಮೆ, ಸದುವಿನಯ. ಬಸವಣ್ಣ, ವಚನ ಸಾಹಿತ್ಯ ಬಸವಲಿಂಗ ಪಟ್ಟದ್ದೇವರ ಉಸಿರು ಆಗಿವೆ’ ಎಂದರು.</p>.<p>ಕಲಬುರಗಿಯ ಪ್ರಗತಿಪತ ಚಿಂತಕ ಆರ್.ಕೆ.ಹುಡಗಿ ಮಾತನಾಡಿ, ‘ಮಾತೃಭಾಷೆಯ ಬಗ್ಗೆ ನಮಗೆ ಅಪಾರ ಗೌರವ, ಪ್ರೀತಿ ಇರಬೇಕು. ಕನ್ನಡ ಭಾಷೆ ನಮ್ಮ ತಾಯಿ ಆಗಿರಬೇಕು. ಇಂಗ್ಲಿಷ್ ನಮ್ಮ ಗೆಳತಿ ಆಗಿರಬೇಕು’ ಎಂದು ತಿಳಿಸಿದರು.</p>.<p>‘ಪರಿಸರ ನಿರ್ಮಾಣ ಮಾಡದೆ ಹೊಸ ವ್ಯಕ್ತಿತ್ವ ನಿರ್ಮಿಸಲು ಸಾಧ್ಯವಿಲ್ಲ. ನಮ್ಮ ದೃಷ್ಟಿಕೋನ ಬದಲಿಸಿಕೊಳ್ಳುವ ಮೂಲಕ ನಮ್ಮ ಬದುಕನ್ನು ಬದಲಿಸಿಕೊಳ್ಳಬಹುದು. ಬಸವಾದಿ ಶರಣರ ಎಲ್ಲ ಸಂಗತಿಗಳನ್ನು ಅಂತರ್ಗತ ಮಾಡಿಕೊಂಡಿದ್ದ ಚನ್ನಬಸವ ಪಟ್ಟದ್ದೇವರು ಬಸವಲಿಂಗ ಪಟ್ಟದ್ದೇವರಂತಹ ಮಹಾನ್ ಗುರುಗಳನ್ನು ನಮಗೆ ಕೊಟ್ಟಿದ್ದಾರೆ’ ಎಂದು ಹೇಳಿದರು.</p>.<p>‘ಸಾಧನೆಗೈಯಲು ಬೇಕಾಗಿರುವುದು ಹಠ. ಈ ಗುಣ ಬಸವಲಿಂಗ ಪಟ್ಟದ್ದೇವರಲ್ಲಿ ಇದೆ. ಹಾಗಾಗಿಯೇ ಅದ್ಭುತವಾದದ್ದನ್ನು ಸಾಧಿಸಿದ್ದಾರೆ. ಇವರು ನಿರ್ಮಿಸಿದ ಪರಿಸರದಲ್ಲಿ ಬದುಕಿ, ಬಾಳುತ್ತಿರುವ ನಾವೇ ಪುಣ್ಯವಂತರು’ ಎಂದು ಹೇಳಿದರು.</p>.<p>ಪತ್ರಕರ್ತ ಸಿದ್ದಪ್ಪ ಮೂಲಗೆ ಮಾತನಾಡಿ, ‘ಜನಮುಖಿಯಾಗಿ ಬಾಳುತ್ತಿರುವ ಕೆಲವೇ ಕೆಲವು ಮಠಾಧೀಶರಲ್ಲಿ ಬಸವಲಿಂಗ ಪಟ್ಟದ್ದೇವರು ಒಬ್ಬರು. ಬಸವಲಿಂಗ ಪಟ್ಟದ್ದೇವರು ಮಠದ ಆಸ್ತಿಯನ್ನು ಕರಗಿಸದೆ, ಕಪ್ಪುಚುಕ್ಕೆ ಇಲ್ಲದೆ ಬದುಕಿರುವ ರೀತಿ ಅವರ್ಣನೀಯ. ಇವರು ಸಾಕಷ್ಟು ನೋವು, ಅಪಮಾನ, ಬಡತನವನ್ನು ಅನುಭವಿಸಿ ಮಠವನ್ನು ಬೆಳೆಸಿರುವ ರೀತಿ ಮಾದರಿ ಆಗಿದೆ’ ಎಂದು ತಿಳಿಸಿದರು.</p>.<p>ಹಿರೇಮಠದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ, ದಾಸ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಾಲಾಜಿ ಅಮರವಾಡಿ ಇದ್ದರು.</p>.<p><strong>‘ಬಸವತತ್ವ ಎಲ್ಲೆಡೆ ಪಸರಿಲು ಪಟ್ಟದ್ದೇವರು ಮಾಡುತ್ತಿರುವ ಕಾರ್ಯ ಪ್ರಶಂಸನೀಯ’</strong></p>.<p><strong>ಭಾಲ್ಕಿ</strong>: ‘ಕನ್ನಡ ಬಾರದ ತೆಲುಗು ನಿವಾಸಿಗಳಿಗಾಗಿ ಬಸವಲಿಂಗ ಪಟ್ಟದ್ದೇವರು ಬಸವಣ್ಣನವರ ವಚನಗಳನ್ನು ಅನುವಾದಿಸುವ ಮೂಲಕ, ತಾವು ಬರೆದ ಮತ್ತು ಇತರರ ಅನೇಕ ಮೌಲಿಕ ಕೃತಿಗಳನ್ನು ತೆಲುಗು ಭಾಷೆಗೆ ಅನುವಾದಿಸುವ ಮುಖಾಂತರ ಬಸವತತ್ವವನ್ನು ಎಲ್ಲೆಡೆ ಪಸರಿಸುವ ಕಾರ್ಯ ಮಾಡುತ್ತಿದ್ದಾರೆ’ ಎಂದು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಲಿಂಗಣ್ಣ ಗೊನಾಳ ಹೇಳಿದರು.</p>.<p>ರಾಷ್ಟ್ರೀಯ ವಿಚಾರ ಸಂಕಿರಣದ ಬಸವತತ್ವ ಸಾರ್ವಕಾಲಿಕತೆಗೊಳಿಸುವಲ್ಲಿ ಬಸವಲಿಂಗ ಪಟ್ಟದ್ದೇವರ ಕೊಡುಗೆಯ 2ನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಶರಣರ ಚಿಂತನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ನಿಟ್ಟಿನಲ್ಲಿ ಪ್ರವಚನ, ನಾಟಕ, ಬಸವ ಸಂದೇಶ ಯಾತ್ರೆಯ ಮೂಲಕ ಅವಿರತ ಪ್ರಯತ್ನ ಮಾಡುತ್ತಿರುವ ರೀತಿ ಅದ್ಭುತ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಧಾರವಾಡದ ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ ಮಾತನಾಡಿ, ‘ಬಸವಣ್ಣ ಜಾತಿ ವ್ಯವಸ್ಥೆಯನ್ನು ತೊಲಗಿಸಿ ಸಮಸಮಾಜವನ್ನು ನಿರ್ಮಿಸಲು ಶ್ರಮಿಸಿದ್ದ ಮಹಾನ್ ದಾರ್ಶನಿಕ. ವೈದಿಕ ಚಿಂತನೆ, ಆಚರಣೆಗಳಿಗೆ ಪರ್ಯಾಯ ಧರ್ಮವೇ ಶರಣ ಧರ್ಮ. ಲಿಂಗಾಯತ ಧರ್ಮ ಹುಟ್ಟಲೇ ಇಲ್ಲ ಎಂದು ಬಿಂಬಿಸುವ ಹುನ್ನಾರ ನಡಿಯುತ್ತಿದೆ’ ಎಂದು ಹೇಳಿದರು.</p>.<p>‘ಶರಣ, ಲಿಂಗಾಯತ ಧರ್ಮದ ಚಿಂತನೆಗಳು ಜಾಗತಿಕ ಚಿಂತನೆಗಳಾಗಬೇಕು. ಬಸವಣ್ಣನವರ ಚಿಂತನೆಗಳಲ್ಲಿ ರಾಜಕೀಯ, ಸಮಾಜಶಾಸ್ತ್ರೀಯ ಸೇರಿದಂತೆ ಎಲ್ಲ ನಮೂನೆಯ ಚಿಂತನೆಗಳು ಅಡಗಿವೆ. ಬಸವಣ್ಣನವರ ವಚನಗಳು ಕೇವಲ ಕನ್ನಡ ಪಠ್ಯ ಪುಸ್ತಕಗಳಲ್ಲಿ ಅಳವಡಿಸದೆ ಎಲ್ಲ ಭಾಷೆಗಳ ಪುಸ್ತಕಗಳಲ್ಲಿ ಸೇರಿಸಬೇಕು’ ಎಂದು ತಿಳಿಸಿದರು.</p>.<p>ಲಾತೂರ್ನ ಪ್ರಗತಿಪರ ಚಿಂತಕ ರಾಜಶೇಖರ ಸೋಲಾಪೂರೆ ಉಪನ್ಯಾಸ ಮಾಡಿದರು.</p>.<p>ಹಿರೇಮಠದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಬೀದರ್ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಂ.ಜನವಾಡಕರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧಕ್ಷ ಶಂಭುಲಿಂಗ ಕಾಮಣ್ಣ, ಆದಿವಾಸಿ ಸಾಹಿತ್ಯ ಪರಿಷತ್ ಜಿಲ್ಲಾಧಕ್ಷ ವಿಜಯಕುಮಾರ ಡುಮ್ಮೆ, ಸಾಂಗ್ಲಿಯ ಸುಭಾಷ ಪಾಟೀಲ, ಉಮರ್ಗಾದ ಬಸವತತ್ವ ಪ್ರಸಾರಕ ಜವಾಹರ ಚನಶೆಟ್ಟಿ ಇದ್ದರು.</p>.<p>ಲಕ್ಷ್ಮಣ ಮೇತ್ರೆ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ</strong>: ‘ವಚನ ಸಾಹಿತ್ಯದಲ್ಲಿ ಅದ್ಭುತ ಶಕ್ತಿ ಅಡಗಿದೆ. ದೇವರಿಗೆ ಕನ್ನಡ ಭಾಷೆ ಕಲಿಸಿದ ಹಿರಿಮೆ 12ನೇ ಶತಮಾನದ ವಚನಕಾರರಿಗೆ ಸಲ್ಲುತ್ತದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.</p>.<p>ತಾಲ್ಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಅಮೃತ ಮಹೋತ್ಸವ ಸ್ವಾಗತ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ‘ಬಸವಲಿಂಗ ಪಟ್ಟದ್ದೇವರು ನಡೆದು ಬಂದ ದಾರಿ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಗಡಿಭಾಗದಲ್ಲಿ ವಚನ ಸಾಹಿತ್ಯ ಮತ್ತು ಕನ್ನಡ ಭಾಷೆಯ ಸಂರಕ್ಷಣೆಯಲ್ಲಿ ಹಿರೇಮಠ ಸಂಸ್ಥಾನದ ಕೊಡುಗೆ ಅನನ್ಯವಾಗಿದೆ. ಇಂದಿನ 21ನೇ ಶತಮಾನಕ್ಕೆ ವಚನ ಸಾಹಿತ್ಯ ಮಾರ್ಗದರ್ಶನವಾಗಬೇಕಿದೆ. ರಾಜ್ಯದಲ್ಲಿ ಅನ್ಯ ಭಾಷೆಗಳ ಹಾವಳಿ ಹೆಚ್ಚಿದೆ. ಕನ್ನಡ ಭಾಷೆ ದಯನೀಯ ಸ್ಥಿತಿಗೆ ತಲುಪಿದೆ. ಇದು ಹೀಗೆ ಮುಂದುವರಿದರೆ ಮುಂದಿನ ಎರಡ್ಮೂರು ದಶಕಗಳಲ್ಲಿ ಕನ್ನಡ ಕೇವಲ ಮಾತನಾಡುವ ಭಾಷೆಯಾಗಿ ಉಳಿಯಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ನಿಜಾಮನ ಆಳ್ವಿಕೆಯಲ್ಲಿ ಚನ್ನಬಸವ ಪಟ್ಟದ್ದೇವರು ಹೊರಗಡೆ ಉರ್ದು ಬೋರ್ಡ್ ಅಳವಡಿಸಿ ಒಳಗಡೆ ಕನ್ನಡ ಕಲಿಸಿ ಭಾಷೆಯ ಅಭಿಮಾನ ಮೆರೆದು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಸ್ವತಂತ್ರ ಪೂರ್ವ ಮತ್ತು ನಂತರದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಈ ಭಾಗವನ್ನು ಬೆಳಗಿಸುವ ಕೆಲಸ ಮಾಡಿದ್ದಾರೆ. ಬಸವಲಿಂಗ ಪಟ್ಟದ್ದೇವರು ಕೂಡ ತಮ್ಮ ಹಿರಿಯ ಪೂಜ್ಯರ ದಾರಿಯಲ್ಲಿ ನಡೆದು ಬಡವರು, ದುರ್ಬಲ ವರ್ಗದವರಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ಆದರ್ಶಪ್ರಾಯವಾಗಿದ್ದಾರೆ’ ಎಂದರು.</p>.<p>‘ಕನ್ನಡ ಭಾಷೆ ಉಳಿಯಬೇಕಾದರೆ ಸರ್ಕಾರ ರಾಜ್ಯ ಶಿಕ್ಷಣ ನೀತಿ ತರುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪೂಜ್ಯರು ಕೂಡ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲು ಧ್ವನಿಯೆತ್ತಬೇಕು’ ಎಂದು ಮನವಿ ಮಾಡಿದರು.</p>.<p>ನವದೆಹಲಿಯ ಸೂರ್ಯ ಫೌಂಡೇಶನ್ ಅಧ್ಯಕ್ಷ ಅನಂತ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಕಲ್ಯಾಣರಾವ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು.</p>.<p>ಮಾಣಿಕನಗರ ಮಾಣಿಕಪ್ರಭು ಸಂಸ್ಥಾನದ ಆನಂದ ಮಹಾರಾಜರು, ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಗೀತಾ ಈಶ್ವರ ಖಂಡ್ರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರೇಷ್ಮಾ ಕೌರ್, ಹಿರಿಯ ಸಾಹಿತಿ ಜಗನ್ನಾಥ ಹೆಬ್ಬಾಳೆ ಸೇರಿದಂತೆ ಹಲವರು ಇದ್ದರು.</p>.<p>ಆಕಾಶವಾಣಿ, ದೂರದರ್ಶನ ಕಲಾವಿದ ನವಲಿಂಗ ಪಾಟೀಲ ನಿರೂಪಿಸಿದರು. ರಾಜು ಜುಬರೆ ವಂದಿಸಿದರು.</p>.<p><strong>ಬಸವ ರತ್ನ ಪ್ರಶಸ್ತಿ ಪ್ರದಾನ:</strong> ಸೂರ್ಯ ಫೌಂಡೇಶನ್ ಮತ್ತು ಇಂಟರ್ನ್ಯಾಷನಲ್ ನ್ಯಾಚುರೋಪತಿ ಆರ್ಗನೈಜೇಶನ್ ದೆಹಲಿ ವತಿಯಿಂದ ಬಸವಲಿಂಗ ಪಟ್ಟದ್ದೇವರಿಗೆ ಬಸವ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p><strong>‘ಬಸವಲಿಂಗ ಪಟ್ಟದ್ದೇವರು ಶರಣ ತತ್ವದ ಕುಸುಮ’</strong></p>.<p>‘ಗಡಿಭಾಗದಲ್ಲಿ ಸರ್ವ ಸಮಾನತೆಯನ್ನು ಸ್ಥಾಪಿಸಲು ದಿಟ್ಟ ಹೆಜ್ಜೆಯನ್ನಿಟ್ಟ ಮಠ ಭಾಲ್ಕಿಯ ಹಿರೇಮಠ. ಇದರ ಹಿರಿಯ ಸ್ವಾಮೀಜಿ ಆಗಿರುವ ಬಸವಲಿಂಗ ಪಟ್ಟದ್ದೇವರು ಶರಣ ತತ್ವದ ಕುಸುಮ ಆಗಿದ್ದಾರೆ’ ಎಂದು ಸಾಹಿತಿ ಸೋಮನಾಥ ಯಾಳವಾರ ಹೇಳಿದರು.</p>.<p>ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನಡೆದ ಶ್ರೀಗಳ ಜೀವನ ಸಾಧನೆ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಮಾಗಿದ್ದು ಬಾಗುತ್ತದೆ ಎಂಬ ಮಾತಿಗೆ ಪರಿಪೂರ್ಣ ಹೋಲಿಕೆ ಆಗುವವರು ಪಟ್ಟದ್ದೇವರು. ಓದಿದವರು ದಣಿಯುವಷ್ಟು, ತಣಿಯುವಷ್ಟು ಸಾಧನೆಯನ್ನು ಬಸವಲಿಂಗ ಪಟ್ಟದ್ದೇವರು ಮಾಡಿದ್ದಾರೆ’ ಎಂದು ತಿಳಿಸಿದರು.</p>.<p>‘ಶಿವರಾಜ ಎಂಬ ಹುಡುಗ ಬಸವಲಿಂಗ ಪಟ್ಟದ್ದೇವರು ಆಗಿ ಬೆಳೆದದ್ದು ತುಂಬಾ ರೋಚಕ. ವ್ಯಕ್ತಿಯ ಸಾಧನೆಯ ಮೂಲಬೇರು ಕುಟುಂಬದ ಸಂಸ್ಕಾರ, ತಾಳ್ಮೆ, ಸದುವಿನಯ. ಬಸವಣ್ಣ, ವಚನ ಸಾಹಿತ್ಯ ಬಸವಲಿಂಗ ಪಟ್ಟದ್ದೇವರ ಉಸಿರು ಆಗಿವೆ’ ಎಂದರು.</p>.<p>ಕಲಬುರಗಿಯ ಪ್ರಗತಿಪತ ಚಿಂತಕ ಆರ್.ಕೆ.ಹುಡಗಿ ಮಾತನಾಡಿ, ‘ಮಾತೃಭಾಷೆಯ ಬಗ್ಗೆ ನಮಗೆ ಅಪಾರ ಗೌರವ, ಪ್ರೀತಿ ಇರಬೇಕು. ಕನ್ನಡ ಭಾಷೆ ನಮ್ಮ ತಾಯಿ ಆಗಿರಬೇಕು. ಇಂಗ್ಲಿಷ್ ನಮ್ಮ ಗೆಳತಿ ಆಗಿರಬೇಕು’ ಎಂದು ತಿಳಿಸಿದರು.</p>.<p>‘ಪರಿಸರ ನಿರ್ಮಾಣ ಮಾಡದೆ ಹೊಸ ವ್ಯಕ್ತಿತ್ವ ನಿರ್ಮಿಸಲು ಸಾಧ್ಯವಿಲ್ಲ. ನಮ್ಮ ದೃಷ್ಟಿಕೋನ ಬದಲಿಸಿಕೊಳ್ಳುವ ಮೂಲಕ ನಮ್ಮ ಬದುಕನ್ನು ಬದಲಿಸಿಕೊಳ್ಳಬಹುದು. ಬಸವಾದಿ ಶರಣರ ಎಲ್ಲ ಸಂಗತಿಗಳನ್ನು ಅಂತರ್ಗತ ಮಾಡಿಕೊಂಡಿದ್ದ ಚನ್ನಬಸವ ಪಟ್ಟದ್ದೇವರು ಬಸವಲಿಂಗ ಪಟ್ಟದ್ದೇವರಂತಹ ಮಹಾನ್ ಗುರುಗಳನ್ನು ನಮಗೆ ಕೊಟ್ಟಿದ್ದಾರೆ’ ಎಂದು ಹೇಳಿದರು.</p>.<p>‘ಸಾಧನೆಗೈಯಲು ಬೇಕಾಗಿರುವುದು ಹಠ. ಈ ಗುಣ ಬಸವಲಿಂಗ ಪಟ್ಟದ್ದೇವರಲ್ಲಿ ಇದೆ. ಹಾಗಾಗಿಯೇ ಅದ್ಭುತವಾದದ್ದನ್ನು ಸಾಧಿಸಿದ್ದಾರೆ. ಇವರು ನಿರ್ಮಿಸಿದ ಪರಿಸರದಲ್ಲಿ ಬದುಕಿ, ಬಾಳುತ್ತಿರುವ ನಾವೇ ಪುಣ್ಯವಂತರು’ ಎಂದು ಹೇಳಿದರು.</p>.<p>ಪತ್ರಕರ್ತ ಸಿದ್ದಪ್ಪ ಮೂಲಗೆ ಮಾತನಾಡಿ, ‘ಜನಮುಖಿಯಾಗಿ ಬಾಳುತ್ತಿರುವ ಕೆಲವೇ ಕೆಲವು ಮಠಾಧೀಶರಲ್ಲಿ ಬಸವಲಿಂಗ ಪಟ್ಟದ್ದೇವರು ಒಬ್ಬರು. ಬಸವಲಿಂಗ ಪಟ್ಟದ್ದೇವರು ಮಠದ ಆಸ್ತಿಯನ್ನು ಕರಗಿಸದೆ, ಕಪ್ಪುಚುಕ್ಕೆ ಇಲ್ಲದೆ ಬದುಕಿರುವ ರೀತಿ ಅವರ್ಣನೀಯ. ಇವರು ಸಾಕಷ್ಟು ನೋವು, ಅಪಮಾನ, ಬಡತನವನ್ನು ಅನುಭವಿಸಿ ಮಠವನ್ನು ಬೆಳೆಸಿರುವ ರೀತಿ ಮಾದರಿ ಆಗಿದೆ’ ಎಂದು ತಿಳಿಸಿದರು.</p>.<p>ಹಿರೇಮಠದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ, ದಾಸ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಾಲಾಜಿ ಅಮರವಾಡಿ ಇದ್ದರು.</p>.<p><strong>‘ಬಸವತತ್ವ ಎಲ್ಲೆಡೆ ಪಸರಿಲು ಪಟ್ಟದ್ದೇವರು ಮಾಡುತ್ತಿರುವ ಕಾರ್ಯ ಪ್ರಶಂಸನೀಯ’</strong></p>.<p><strong>ಭಾಲ್ಕಿ</strong>: ‘ಕನ್ನಡ ಬಾರದ ತೆಲುಗು ನಿವಾಸಿಗಳಿಗಾಗಿ ಬಸವಲಿಂಗ ಪಟ್ಟದ್ದೇವರು ಬಸವಣ್ಣನವರ ವಚನಗಳನ್ನು ಅನುವಾದಿಸುವ ಮೂಲಕ, ತಾವು ಬರೆದ ಮತ್ತು ಇತರರ ಅನೇಕ ಮೌಲಿಕ ಕೃತಿಗಳನ್ನು ತೆಲುಗು ಭಾಷೆಗೆ ಅನುವಾದಿಸುವ ಮುಖಾಂತರ ಬಸವತತ್ವವನ್ನು ಎಲ್ಲೆಡೆ ಪಸರಿಸುವ ಕಾರ್ಯ ಮಾಡುತ್ತಿದ್ದಾರೆ’ ಎಂದು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಲಿಂಗಣ್ಣ ಗೊನಾಳ ಹೇಳಿದರು.</p>.<p>ರಾಷ್ಟ್ರೀಯ ವಿಚಾರ ಸಂಕಿರಣದ ಬಸವತತ್ವ ಸಾರ್ವಕಾಲಿಕತೆಗೊಳಿಸುವಲ್ಲಿ ಬಸವಲಿಂಗ ಪಟ್ಟದ್ದೇವರ ಕೊಡುಗೆಯ 2ನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಶರಣರ ಚಿಂತನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ನಿಟ್ಟಿನಲ್ಲಿ ಪ್ರವಚನ, ನಾಟಕ, ಬಸವ ಸಂದೇಶ ಯಾತ್ರೆಯ ಮೂಲಕ ಅವಿರತ ಪ್ರಯತ್ನ ಮಾಡುತ್ತಿರುವ ರೀತಿ ಅದ್ಭುತ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಧಾರವಾಡದ ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ ಮಾತನಾಡಿ, ‘ಬಸವಣ್ಣ ಜಾತಿ ವ್ಯವಸ್ಥೆಯನ್ನು ತೊಲಗಿಸಿ ಸಮಸಮಾಜವನ್ನು ನಿರ್ಮಿಸಲು ಶ್ರಮಿಸಿದ್ದ ಮಹಾನ್ ದಾರ್ಶನಿಕ. ವೈದಿಕ ಚಿಂತನೆ, ಆಚರಣೆಗಳಿಗೆ ಪರ್ಯಾಯ ಧರ್ಮವೇ ಶರಣ ಧರ್ಮ. ಲಿಂಗಾಯತ ಧರ್ಮ ಹುಟ್ಟಲೇ ಇಲ್ಲ ಎಂದು ಬಿಂಬಿಸುವ ಹುನ್ನಾರ ನಡಿಯುತ್ತಿದೆ’ ಎಂದು ಹೇಳಿದರು.</p>.<p>‘ಶರಣ, ಲಿಂಗಾಯತ ಧರ್ಮದ ಚಿಂತನೆಗಳು ಜಾಗತಿಕ ಚಿಂತನೆಗಳಾಗಬೇಕು. ಬಸವಣ್ಣನವರ ಚಿಂತನೆಗಳಲ್ಲಿ ರಾಜಕೀಯ, ಸಮಾಜಶಾಸ್ತ್ರೀಯ ಸೇರಿದಂತೆ ಎಲ್ಲ ನಮೂನೆಯ ಚಿಂತನೆಗಳು ಅಡಗಿವೆ. ಬಸವಣ್ಣನವರ ವಚನಗಳು ಕೇವಲ ಕನ್ನಡ ಪಠ್ಯ ಪುಸ್ತಕಗಳಲ್ಲಿ ಅಳವಡಿಸದೆ ಎಲ್ಲ ಭಾಷೆಗಳ ಪುಸ್ತಕಗಳಲ್ಲಿ ಸೇರಿಸಬೇಕು’ ಎಂದು ತಿಳಿಸಿದರು.</p>.<p>ಲಾತೂರ್ನ ಪ್ರಗತಿಪರ ಚಿಂತಕ ರಾಜಶೇಖರ ಸೋಲಾಪೂರೆ ಉಪನ್ಯಾಸ ಮಾಡಿದರು.</p>.<p>ಹಿರೇಮಠದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಬೀದರ್ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಂ.ಜನವಾಡಕರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧಕ್ಷ ಶಂಭುಲಿಂಗ ಕಾಮಣ್ಣ, ಆದಿವಾಸಿ ಸಾಹಿತ್ಯ ಪರಿಷತ್ ಜಿಲ್ಲಾಧಕ್ಷ ವಿಜಯಕುಮಾರ ಡುಮ್ಮೆ, ಸಾಂಗ್ಲಿಯ ಸುಭಾಷ ಪಾಟೀಲ, ಉಮರ್ಗಾದ ಬಸವತತ್ವ ಪ್ರಸಾರಕ ಜವಾಹರ ಚನಶೆಟ್ಟಿ ಇದ್ದರು.</p>.<p>ಲಕ್ಷ್ಮಣ ಮೇತ್ರೆ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>