ಶಿವಮೊಗ್ಗ: ದೇಶದ ಹಿತಾಸಕ್ತಿ ದೃಷ್ಟಿಯಿಂದ ಕೇಂದ್ರ ಸರ್ಕಾರ ವಿಐಎಸ್ಎಲ್ ಸೇರಿದಂತೆ ನಷ್ಟದಲ್ಲಿರುವ ಹಲವು ಕೈಗಾರಿಕೆಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರ ತೆಗೆದುಕೊಂಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ರೋಗಗ್ರಸ್ತ 19 ಘಟಕಗಳನ್ನು ಶಾಶ್ವತವಾಗಿ ಮುಚ್ಚಲಾಗುತ್ತಿದೆ. ವಿಐಎಸ್ಎಲ್ ಸೇರಿ 28 ಕಾರ್ಖಾನೆಗಳ ಪುನಃಶ್ಚೇತನಕ್ಕೆ ಬಂಡವಾಳ ಹೂಡಲು ಖಾಸಗಿ ಕಂಪನಿಗಳಿಗೆ ನೀಡಲಾಗುತ್ತಿದೆ. ಜಾಗತಿಕ ಟೆಂಡರ್ ಕರೆದಿದ್ದರೂ, ಕಾರ್ಮಿಕರ ಹಿತಾಸಕ್ತಿಗೆ ಶ್ರಮಿಸಲಾಗುವುದು ಎಂದು ಶನಿವಾರ ಪತ್ರಿಕಾಗೊಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಖಾನೆ ಉಳಿಸಿಕೊಳ್ಳಲು ಹಲವು ವರ್ಷಗಳಿಂದ ಸತತ ಪ್ರಯತ್ನ ಮಾಡಿದ್ದೆವು. ಕೇಂದ್ರ ಸಚಿವ ತೋಮರ್ ಅವರೇ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದರು. ಬಿ.ಎಸ್.ಯಡಿಯೂರಪ್ಪ ಅವರು ಒತ್ತಡ ಹಾಕಿದ್ದರು. ಲೋಕಸಭೆಯಲ್ಲೂ ಧ್ವನಿ ಎತ್ತಿದ್ದೆವು. ಎಲ್ಲ ಪ್ರಯತ್ನಗಳ ಮಧ್ಯೆಯೂ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದರು.
ಉತ್ತಮ ಬಜೆಟ್:
ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಉತ್ತಮ ಬಜೆಟ್ ಮಂಡಿಸಿದ್ದಾರೆ. ಗ್ರಾಮೀಣ ಜನರು, ಮಹಿಳೆಯರು, ಯುವ ಜನರು ಸೇರಿದಂತೆ ಎಲ್ಲ ವರ್ಗದ ಜನರ ಜೀವನಮಟ್ಟ ಸುಧಾರಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ರಸ್ತೆ, ರೈಲ್ವೆ, ಸಾರಿಗೆ, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಎಲ್ಲ ರಂಗಗಳಿಗೂ ಆದ್ಯತೆ ನೀಡಿದ್ದಾರೆ. ಜನರ ಜೀವನಮಟ್ಟ ಸುಧಾರಿಸಲು ಒತ್ತು ನೀಡಲಾಗಿದೆ. ದೇಶದ ಸಮಗ್ರ ಹಿತಾಸಕ್ತಿ ದೃಷ್ಟಿಯಲ್ಲಿ ಇಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ ಎಂದರು.
ಕೃಷಿಕರ ಆದಾಯ ದ್ವಿಗುಣ:
ಬಜೆಟ್ನಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಪೂರಕ ವಾತಾವರಣ ಕಲ್ಪಿಸುವ ಭರವಸೆ ದೊರೆತಿದೆ. 2022ರ ವೇಳೆಗೆ ಈ ಗುರಿ ತಲುಪುವ ನಿರೀಕ್ಷೆ ಇದೆ.ಆದಾಯ ತೆರಿಗೆ ವಿನಾಯಿತಿ, 1.95 ಕೋಟಿ ಮನೆಗಳ ನಿರ್ಮಾಣ, ವಿಮಾನ ನಿಲ್ದಾಣಗಳ ಅಭಿವೃದ್ಧಿ ಯೋಜನೆಗಳಿಗೆ ಒತ್ತು ಕೊಡಲಾಗಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಮುಖಂಡರಾದ ಎಸ್.ದತ್ತಾತ್ರಿ, ಡಿ.ಎಸ್.ಅರುಣ್, ಶಂಕರ್, ಬಿಳಕಿ ಕೃಷ್ಣಮೂರ್ತಿ, ಎಸ್.ಜ್ಞಾನೇಶ್ವರ್, ವಿ.ರಾಜು, ಮಧುಸೂದನ್, ಹಿರಣ್ಣಯ್ಯ, ಅರುಣ್ಕುಮಾರ್, ರತ್ನಾಕರ ಶೆಣೈ ಉಪಸ್ಥಿತರಿದ್ದರು.