ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡ್ಲುಪೇಟೆ: ಹುಲಿ ದಾಳಿಗೆ ಜಿಂಕೆ ಸಾವು

Published 30 ಮೇ 2024, 15:47 IST
Last Updated 30 ಮೇ 2024, 15:47 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ‘ಹುಲಿ ದಾಳಿ ನಡೆಸಿ ಜಿಂಕೆ ಕೊಂದು ಹಾಕಿರುವ ಘಟನೆ ತಾಲ್ಲೂಕಿನ ಪಡಗೂರು-ಕಲ್ಲಹಳ್ಳಿ ಮಾರ್ಗ ಮಧ್ಯದ ಜಮೀನೊಂದರಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಪಡಗೂರು ಅಡವಿ ಮಠದ ಶ್ರೀಗಳಿಗೆ ಸೇರಿದ ಜಮೀನಿನ ಪಕ್ಕದ ಬಯಲಲ್ಲಿ ಗುರುವಾರ ಬೆಳಿಗ್ಗೆ   ಮೇಯುತ್ತಿದ್ದ ಜಿಂಕೆ ಮೇಲರಗಿ ಹುಲಿ ಏಕಾಏಕಿ ದಾಳಿ ನಡೆಸಿ ಕುತ್ತಿಗೆ ಭಾಗಕ್ಕೆ ಬಲವಾಗಿ ಕಚ್ಚಿದೆ. ಈ ವೇಳೆ ರೈತರು ಕೂಗಿಕೊಂಡ ಪರಿಣಾಮ ಜಿಂಕೆ ಬಿಟ್ಟು ಓಡಿದೆ. ನಂತರ ಜಿಂಕೆಗೆ ಸೂಕ್ತ ಚಿಕಿತ್ಸೆ ಸಿಗದ ಪರಿಣಾಮ ಕೆಲಕಾಲ ಒದ್ದಾಡಿ ಸಾವನ್ನಪ್ಪಿದೆ ಎಂದು ಸ್ಥಳೀಯ ರೈತರು ಮಾಹಿತಿ ನೀಡಿದರು.

ಮಾಹಿತಿ ನೀಡಿದರೂ ಆಗಮಿಸದ ಅರಣ್ಯಾಧಿಕಾರಿಗಳು: ಹುಲಿ ದಾಳಿ ವಿಷಯವನ್ನು ಗುಂಡ್ಲುಪೇಟೆ ಬಫರ್ ಜೋನ್ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಿದ್ದರೂ ಸರಿಯಾದ ಸಮಯಕ್ಕೆ ಆಗಮಿಸದೆ ನಿರ್ಲಕ್ಷ್ಯ ತೋರಿದರು. ನಿಗಧಿತ ವೇಳೆಗೆ ಬಂದಿದ್ದರೆ ಜಿಂಕೆಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸಬಹುದಿತ್ತು. ಇದೀಗ ಅರಣ್ಯಾಧಿಕಾರಿಗಳ ಬೇಜವಾಬ್ದಾರಿತನದಿಂದ ಜಿಂಕೆ ಸಾವನ್ನಪ್ಪಿದೆ. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೇ ನೇರಹೊಣೆ ಎಂದು ಪಡಗೂರು ಗ್ರಾಮದ ರೈತ ಶಿವಕುಮಾರ್ ದೂರಿದರು.

ಹೆಚ್ಚಿದ ಹುಲಿ-ಚಿರತೆ ಹಾವಳಿ:

ಪಡಗೂರು, ಪರಮಾಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಹುಲಿ ಹಾಗೂ ಚಿರತೆ ಹಾವಳಿ ಹೆಚ್ಚಿದ್ದು, ಪ್ರತಿನಿತ್ಯ ಜಾನುವಾರು ಮೇಲೆ ದಾಳಿ ಮಾಡುತ್ತಿವೆ. ಇದರಿಂದ ರಾತ್ರಿ ವೇಳೆ ಜಮೀನುಗಳಿಗೆ ಹೋಗಲು ಭಯ ಪಡುವಂತಾಗಿದೆ. ಆದ್ದರಿಂದ ಸಂಬಂಧ ಪಟ್ಟ ಅರಣ್ಯ ಇಲಾಖೆ ಮೇಲಾಧಿಕಾರಿಗಳು ಹಾಗೂ ಶಾಸಕ ಎಚ್.ಎಂ.ಗಣೇಶಪ್ರಸಾದ್ ಇತ್ತ ಗಮನ ಹರಿಸಿ ಹುಲಿ ಮತ್ತು ಚಿರತೆ ಸೆರೆಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಇಲ್ಲದಿದ್ದರೆ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತರ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT