ಚಾಮರಾಜನಗರ: ಬರದ ಹೊಡೆತಕ್ಕೆ ನಲುಗಿದ್ದ ಜಿಲ್ಲೆಯ ರೈತರ ಮುಖದಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಸಾಧಾರಣ ಮಳೆ ಮಂದಹಾಸ ಮೂಡಿಸಿದೆ.
ಕೃಷಿಕರು ನಿರಾಳರಾಗುವಷ್ಟು ಮಳೆ ಬಂದಿಲ್ಲ. ಆದರೆ, ಇನ್ನೂ ಕೆಲವು ದಿನಗಳ ಕಾಲ ಮಳೆಯಾಗಬಹುದು ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಬೆಳೆಗಾರರಲ್ಲಿ ನೆಮ್ಮದಿಯ ಭಾವ ಮೂಡಿಸಿದೆ.
ಮುಂಗಾರು ಪೂರ್ವ ಮಳೆ ಜಿಲ್ಲೆಗೆ ಕಾಲಿಡುತ್ತಿದ್ದಂತೆಯೇ ಕೆಲವು ಕೃಷಿಕರು ಭೂಮಿಯನ್ನು ಉಳುಮೆ ಮಾಡಲು ಮುಂದಡಿ ಇಟ್ಟಿದ್ದಾರೆ.
ಇತ್ತ ಕೃಷಿ ಇಲಾಖೆ ಕೂಡ ರೈತರಿಗೆ ಬಿತ್ತನೆ ವಿತರಿಸುವ ಕಾರ್ಯ ಆರಂಭಿಸಿದೆ. ಜಿಲ್ಲೆಯ ಎಲ್ಲ ರೈತ ಕೇಂದ್ರಗಳಲ್ಲಿ ವಿವಿಧ ಬಿತ್ತನೆ ಬೀಜಗಳು ಲಭ್ಯವಿವೆ. ಗುಂಡ್ಲುಪೇಟೆ, ಚಾಮರಾಜನಗರ, ಯಳಂದೂರು ತಾಲ್ಲೂಕುಗಳಲ್ಲಿ ರೈತರು ಬಿತ್ತನೆ ಬೀಜ ಖರೀದಿಸುತ್ತಿದ್ದಾರೆ.
ಸೂರ್ಯಕಾಂತಿ, ಉದ್ದು, ಹೆಸರು, ಅಲಸಂದೆ ಬಿತ್ತನೆ ಬೀಜಗಳನ್ನು ಪ್ರಮುಖವಾಗಿ ವಿತರಿಸಲಾಗುತ್ತಿದೆ. ಜಿಲ್ಲಾ ಕೃಷಿ ಇಲಾಖೆಗೆ 921.80 ಕ್ವಿಂಟಲ್ಗಳಷ್ಟು ಬಿತ್ತನೆ ಬೀಜ ಪೂರೈಕೆಯಾಗಿದ್ದು, 57.77 ಕ್ವಿಂಟಲ್ಗಳಷ್ಟು ವಿತರಣೆ ಮಾಡಿದೆ. 864.03 ಕ್ವಿಂಟಲ್ಗಳಷ್ಟು ದಾಸ್ತಾನು ಇದೆ.
‘ಮಳೆಗಾಲ ಆರಂಭವಾಗುವ ನಿರೀಕ್ಷೆ ಮೂಡಿಸಿದ್ದು ಭೂಮಿ ಸಿದ್ಧತೆ ನಡೆಸಲಾಗಿದೆ. ಉಳುಮೆ, ಕಳೆ, ಗಿಡಗಂಟಿ ನಿರ್ವಹಣೆ, ಕಾಲುವೆ ಸೋಸುವುದು, ನೀರಿನ ಮೂಲಗಳ ಸಂರಕ್ಷಣೆ ಹಾಗೂ ಅನುಪಯುಕ್ತ ತ್ಯಾಜ್ಯಗಳನ್ನು ಸುಟ್ಟು ಭೂಮಿ ಹಸನು ಮಾಡಲಾಗುತ್ತಿದೆ’ ಎಂದು ಯಳಂದೂರು ತಾಲ್ಲೂಕಿನ ಅಂಬಳೆ ರೈತ ಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಒಂದೆರಡು ದಿನಗಳಿಂದ ಸದ್ಯ ಟ್ರ್ಯಾಕ್ಟರ್ ಮತ್ತು ಟಿಲ್ಲರ್ ಕೆಲಸಗಳಿಗೆ ಬೇಡಿಕೆ ಬಂದಿದೆ. ಶ್ರಮಿಕರಿಗೂ ಬೇಡಿಕೆ ತಂದಿದೆ. ಕಾಫಿ ಮತ್ತು ಮೆಣಸು ತೋಟಗಳ ವಾಣಿಜ್ಯ ಕೃಷಿಕರು ಗೊಬ್ಬರ, ನೀರು ಮತ್ತು ಕೆಲಸಗಾರರನ್ನು ಹೊಂದಿಸುವತ್ತ ಚಿತ್ತ ಹರಿಸಿದ್ದು, ಮಳೆರಾಯನ ಕೃಪೆಗಾಗಿ ಕಾಯ್ದಿದ್ದಾರೆ.
ಬೇಸಿಗೆ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ನಡೆಯದಿರುವುದರಿಂದ ಇನ್ನೂ ಒಂದೆರಡು ಮಳೆ ಬಿದ್ದರೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆಯುವ ನಿರೀಕ್ಷೆ ಇದೆ.
ಬಿತ್ತನೆ ಗುರಿ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಹಂಗಾಮಿಗೆ ಒಟ್ಟು 1.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ.
ಗುಂಡ್ಲುಪೇಟೆಯಲ್ಲಿ ಅತಿ ಹೆಚ್ಚು 33,447 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಬಿತ್ತನೆಯಾಗುವ ನಿರೀಕ್ಷೆ ಇದೆ. ಹನೂರಿನಲ್ಲಿ 27,120 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
‘ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಅಂದರೆ, ಏಪ್ರಿಲ್ ಆರಂಭದಲ್ಲಿ ಹತ್ತಿ ಬಿತ್ತನೆಯಾಗುತ್ತದೆ. ಈ ಬಾರಿ ಮಳೆ ಬಾರದಿರುವುದರಿಂದ ಹತ್ತಿ ಬಿತ್ತನೆಯಾಗಿಲ್ಲ. ಹಾಗಾಗಿ, ರೈತರು ಅದರ ಬದಲಾಗಿ ಸೂರ್ಯಕಾಂತಿ, ಮುಸುಕಿನ ಜೋಳ ಬಿತ್ತನೆ ಮಾಡುವ ಸಾಧ್ಯತೆ ಇದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಆಬೀದ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮುಂಗಾರು ಪೂರ್ವ ಅವಧಿಯಲ್ಲಿ ಉದ್ದು, ಹೆಸರು, ಅಲಸಂದೆ ಸೂರ್ಯಕಾಂತಿಯನ್ನು ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.
ಬಿತ್ತನೆ ಬೀಜ ವಿತರಣೆ ನಡೆಯುತ್ತಿದೆ. ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ. ರಸಗೊಬ್ಬರವೂ ಸಾಕಷ್ಟಿದೆಎಸ್.ಎಸ್.ಆಬೀದ್ ಜಂಟಿ ಕೃಷಿ ನಿರ್ದೇಶಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.