ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ವರುಣನ ಆಗಮನ: ಕೃಷಿ‌ಗೆ ರೈತರ ಗಮನ

Published 9 ಮೇ 2024, 7:27 IST
Last Updated 9 ಮೇ 2024, 7:27 IST
ಅಕ್ಷರ ಗಾತ್ರ

ಚಾಮರಾಜನಗರ: ಬರದ ಹೊಡೆತಕ್ಕೆ ನಲುಗಿದ್ದ ಜಿಲ್ಲೆಯ ರೈತರ ಮುಖದಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಸಾಧಾರಣ ಮಳೆ ಮಂದಹಾಸ ಮೂಡಿಸಿದೆ.

ಕೃಷಿಕರು ನಿರಾಳರಾಗುವಷ್ಟು ಮಳೆ ಬಂದಿಲ್ಲ. ಆದರೆ, ಇನ್ನೂ ಕೆಲವು ದಿನಗಳ ಕಾಲ ಮಳೆಯಾಗಬಹುದು ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಬೆಳೆಗಾರರಲ್ಲಿ ನೆಮ್ಮದಿಯ ಭಾವ ಮೂಡಿಸಿದೆ. 

ಮುಂಗಾರು ಪೂರ್ವ ಮಳೆ ಜಿಲ್ಲೆಗೆ ಕಾಲಿಡುತ್ತಿದ್ದಂತೆಯೇ ಕೆಲವು ಕೃಷಿಕರು ಭೂಮಿಯನ್ನು ಉಳುಮೆ ಮಾಡಲು ಮುಂದಡಿ ಇಟ್ಟಿದ್ದಾರೆ.  

ಇತ್ತ ಕೃಷಿ ಇಲಾಖೆ ಕೂಡ ರೈತರಿಗೆ ಬಿತ್ತನೆ ವಿತರಿಸುವ ಕಾರ್ಯ ಆರಂಭಿಸಿದೆ. ಜಿಲ್ಲೆಯ ಎಲ್ಲ ರೈತ ಕೇಂದ್ರಗಳಲ್ಲಿ ವಿವಿಧ ಬಿತ್ತನೆ ಬೀಜಗಳು ಲಭ್ಯವಿವೆ. ಗುಂಡ್ಲುಪೇಟೆ, ಚಾಮರಾಜನಗರ, ಯಳಂದೂರು ತಾಲ್ಲೂಕುಗಳಲ್ಲಿ ರೈತರು ಬಿತ್ತನೆ ಬೀಜ ಖರೀದಿಸುತ್ತಿದ್ದಾರೆ. 

ಸೂರ್ಯಕಾಂತಿ, ಉದ್ದು, ಹೆಸರು, ಅಲಸಂದೆ ಬಿತ್ತನೆ ಬೀಜಗಳನ್ನು ಪ್ರಮುಖವಾಗಿ ವಿತರಿಸಲಾಗುತ್ತಿದೆ. ಜಿಲ್ಲಾ ಕೃಷಿ ಇಲಾಖೆಗೆ 921.80 ಕ್ವಿಂಟಲ್‌ಗಳಷ್ಟು ಬಿತ್ತನೆ ಬೀಜ ಪೂರೈಕೆಯಾಗಿದ್ದು, 57.77 ಕ್ವಿಂಟಲ್‌ಗಳಷ್ಟು ವಿತರಣೆ ಮಾಡಿದೆ. 864.03 ಕ್ವಿಂಟಲ್‌ಗಳಷ್ಟು ದಾಸ್ತಾನು ಇದೆ. 

‘ಮಳೆಗಾಲ ಆರಂಭವಾಗುವ ನಿರೀಕ್ಷೆ ಮೂಡಿಸಿದ್ದು ಭೂಮಿ ಸಿದ್ಧತೆ ನಡೆಸಲಾಗಿದೆ. ಉಳುಮೆ, ಕಳೆ, ಗಿಡಗಂಟಿ ನಿರ್ವಹಣೆ, ಕಾಲುವೆ ಸೋಸುವುದು, ನೀರಿನ ಮೂಲಗಳ ಸಂರಕ್ಷಣೆ ಹಾಗೂ ಅನುಪಯುಕ್ತ ತ್ಯಾಜ್ಯಗಳನ್ನು ಸುಟ್ಟು ಭೂಮಿ ಹಸನು ಮಾಡಲಾಗುತ್ತಿದೆ’ ಎಂದು ಯಳಂದೂರು ತಾಲ್ಲೂಕಿನ ಅಂಬಳೆ ರೈತ ಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಒಂದೆರಡು ದಿನಗಳಿಂದ ಸದ್ಯ ಟ್ರ್ಯಾಕ್ಟರ್ ಮತ್ತು ಟಿಲ್ಲರ್ ಕೆಲಸಗಳಿಗೆ ಬೇಡಿಕೆ ಬಂದಿದೆ. ಶ್ರಮಿಕರಿಗೂ ಬೇಡಿಕೆ ತಂದಿದೆ. ಕಾಫಿ ಮತ್ತು ಮೆಣಸು ತೋಟಗಳ ವಾಣಿಜ್ಯ ಕೃಷಿಕರು ಗೊಬ್ಬರ, ನೀರು ಮತ್ತು ಕೆಲಸಗಾರರನ್ನು ಹೊಂದಿಸುವತ್ತ ಚಿತ್ತ ಹರಿಸಿದ್ದು, ಮಳೆರಾಯನ ಕೃಪೆಗಾಗಿ ಕಾಯ್ದಿದ್ದಾರೆ.

ಬೇಸಿಗೆ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ನಡೆಯದಿರುವುದರಿಂದ ಇನ್ನೂ ಒಂದೆರಡು ಮಳೆ ಬಿದ್ದರೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆಯುವ ನಿರೀಕ್ಷೆ ಇದೆ. 

ಬಿತ್ತನೆ ಗುರಿ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಹಂಗಾಮಿಗೆ ಒಟ್ಟು 1.09 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ. 

ಗುಂಡ್ಲುಪೇಟೆಯಲ್ಲಿ ಅತಿ ಹೆಚ್ಚು 33,447 ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆಗಳು ಬಿತ್ತನೆಯಾಗುವ ನಿರೀಕ್ಷೆ ಇದೆ. ಹನೂರಿನಲ್ಲಿ 27,120 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 

‘ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಅಂದರೆ, ಏಪ್ರಿಲ್‌ ಆರಂಭದಲ್ಲಿ ಹತ್ತಿ ಬಿತ್ತನೆಯಾಗುತ್ತದೆ. ಈ ಬಾರಿ ಮಳೆ ಬಾರದಿರುವುದರಿಂದ ಹತ್ತಿ ಬಿತ್ತನೆಯಾಗಿಲ್ಲ. ಹಾಗಾಗಿ, ರೈತರು ಅದರ ಬದಲಾಗಿ ಸೂರ್ಯಕಾಂತಿ, ಮುಸುಕಿನ ಜೋಳ ಬಿತ್ತನೆ ಮಾಡುವ ಸಾಧ್ಯತೆ ಇದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಆಬೀದ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಮುಂಗಾರು ಪೂರ್ವ ಅವಧಿಯಲ್ಲಿ ಉದ್ದು, ಹೆಸರು, ಅಲಸಂದೆ ಸೂರ್ಯಕಾಂತಿಯನ್ನು ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು. 

ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯ ನವಿಲೂರಿನಲ್ಲಿರುವ ಕೆರೆಯೊಂದು ಇತ್ತೀಚೆಗೆ ಸುರಿದ ಮಳೆಗೆ ತುಂಬಿರುವುದು
ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯ ನವಿಲೂರಿನಲ್ಲಿರುವ ಕೆರೆಯೊಂದು ಇತ್ತೀಚೆಗೆ ಸುರಿದ ಮಳೆಗೆ ತುಂಬಿರುವುದು
ಬಿತ್ತನೆ ಬೀಜ ವಿತರಣೆ ನಡೆಯುತ್ತಿದೆ. ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ. ರಸಗೊಬ್ಬರವೂ ಸಾಕಷ್ಟಿದೆ
ಎಸ್‌.ಎಸ್‌.ಆಬೀದ್‌ ಜಂಟಿ ಕೃಷಿ ನಿರ್ದೇಶಕ
ಮಳೆಯ ನಿರೀಕ್ಷೆಯಲ್ಲಿ ಅನ್ನದಾತ
ಯಳಂದೂರು: ತಾಲ್ಲೂಕಿನ ಶೇ 85 ರಷ್ಟು ಭಾಗದ ರೈತರು ಮುಂಗಾರು ಹಂಗಾಮಿನ ನಿರೀಕ್ಷೆಯಲ್ಲಿ ಭೂಮಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಒಂದೆರಡು ಮಳೆ ಕಾಣಿಸಿಕೊಂಡಿದೆ. ಆದರೆ ಮಣ್ಣು ತಂಪಾಗಿಸುವಷ್ಟು ಸುರಿದಿಲ್ಲ. ಒಣ ಭೂಮಿಯ ಕಾವು ಆರಿಲ್ಲ. ಈ ನಡುವೆ ಉತ್ತುವ ಮತ್ತು ಬಿತ್ತುವ ಪ್ರಕ್ರಿಯಿಗೆ ಬೇಸಾಯಗಾರರು ಮುಂದಾಗಿದ್ದಾರೆ. ನೀರಿನ ಮೂಲ ಹೊಂದಿರುವ ಮಂದಿ 1585 ಹೆಕ್ಟೇರ್ ಪ್ರದೇಶದಲ್ಲಿ ಬೇಸಿಗೆ ಬೆಳೆಯಾಗಿ ಕಬ್ಬು ಭತ್ತ ರಾಗಿ ಉದ್ದು ಮುಸುಕಿನ ಜೋಳ ಮತ್ತು ಬಿಳಿಜೋಳ ನಾಟಿ ಮಾಡಿದ್ದಾರೆ. ಜಾನುವಾರು ಹೊಂದಿರುವ ಹಿಡುವಳಿದಾರರು ಮೇವಿಗಾಗಿ ಕೃಷಿ ಮಾಡಿದ್ದು ಹೆಚ್ಚುವರಿ ಫಸಲನ್ನು ಅವಧಿಗೂ ಮೊದಲೇ ಮಾರಾಟ ಮಾಡಿ ತುಸು ಆದಾಯ ಗಳಿಸುವತ್ತಲೂ ಕೃಷಿಯಲ್ಲಿ ತೊಡಗಿದ್ದಾರೆ.   ‘ಬೇಸಿಗೆ ಅವಧಿಯಲ್ಲಿ ಭತ್ತ 290 ಹೆಕ್ಟೇರ್ ಬಿಳಿಜೋಳ 80 ರಾಗಿ 170 ಮೆಕ್ಕೆಜೋಳ 295 ಉದ್ದು 110 ಹಾಗೂ ಕಬ್ಬು 640 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ತೆಂಗು ಅಡಿಕೆ ತೋಟಗಳಿಗೆ ನೀರಿನ ಕೊರತೆ ಬಾಧಿಸಿದೆ. ಮಳೆ ಆರಂಭವಾದರೆ ಮೇ 15 ರೊಳಗೆ ಉದ್ದು ಹೆಸರು ಮತ್ತು ಅಲಸಂದೆ ಬಿತ್ತನೆಗೆ ಅವಕಾಶ ಇದೆ. ನಂತರ ಚಂಬೆ ಮತ್ತು ಸೆಣಬು ವಿತರಣೆಗೆ ಯೋಜನೆ ರೂಪಿಸಬೇಕಾಗುತ್ತದೆ’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ. ವೆಂಕಟರಂಗಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT