ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಆನೆ ಉಪಟಳಕ್ಕೆ ಜನ ಹೈರಾಣ, ಪುಂಡಾನೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ

; ಮೂರು ದಿನಗಳ ಕಾರ್ಯಾಚರಣೆಗೆ ಸಿದ್ಧತೆ
Published 5 ಆಗಸ್ಟ್ 2023, 6:45 IST
Last Updated 5 ಆಗಸ್ಟ್ 2023, 6:45 IST
ಅಕ್ಷರ ಗಾತ್ರ

ಹನೂರು: ಮಲೆಮಹದೇಶ್ವರ ವನ್ಯಧಾಮದ ಪೊನ್ನಾಚಿ ಗ್ರಾಮದ ಸುತ್ತಮುತ್ತ ಹಲವು ತಿಂಗಳುಗಳಿಂದ ಉಪಟಳ ನೀಡುತ್ತಿರುವ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕೊನೆಗೂ ಮನಸ್ಸು ಮಾಡಿದೆ. ಸೆರೆ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಸಿದೆ. 

ಆನೆ ಸೆರೆ ಹಿಡಿಯಲು ಜೂನ್‌ 26ರಂದೇ ಪಿಸಿಸಿಎಫ್‌ ಅವರು ಅನುಮತಿ ನೀಡಿದ್ದರು. ಆದರೆ, ಇಲಾಖೆ ವಿಳಂಬ ಮಾಡಿತ್ತು. ಇದಕ್ಕೆ ಜನರಿಂದ ಆಕ್ರೋಶವೂ ವ್ಯಕ್ತವಾಗಿತ್ತು.  

ಇದೇ 9ಕ್ಕೆ ಕಾರ್ಯಾಚರಣೆ ಆರಂಭವಾಗಲಿದೆ. ಮೊದಲ ದಿನ ಆನೆ ಸಿಗದಿದ್ದರೆ, ಮತ್ತೆರಡು ದಿನ (10, 11) ಕಾರ್ಯಾಚರಣೆ ಮುಂದುವರಿಯಲಿದೆ.  ಇದಕ್ಕಾಗಿ ನಾಗರಹೊಳೆ ಅಭಯಾರಣ್ಯದಿಂದ ಐದು ಆನೆಗಳನ್ನು ಇಲಾಖೆ ಕರೆತರಲು ಸಿದ್ಧತೆ ನಡೆಸಿದ್ದು, ಒಂಟಿ ಆನೆ ನೀಡಿದ ಹಾವಳಿ ಕಂಡು ಬಂದ ಪ್ರದೇಶಗಳಲ್ಲಿ ಇಲಾಖೆ ಆನೆಯ ಸೆರೆ ಹಿಡಿಯಲು ಪ್ರಯತ್ನಿಸಲಿದೆ.  

ಪೊನ್ನಾಚಿ ಸುತ್ತಮುತ್ತ ಇರುವ ಕಕ್ಕೆಹೊಲ, ಗೆರಟ್ಟಿ, ಮರೂರು, ರಾಮೇಗೌಡನಹಳ್ಳಿ, ದೊಡ್ಡಬೆಟ್ಟ, ಅಸ್ತೂರು, ಚಿಕ್ಕಮರೂರು, ಹಳೆ ಮರೂರು, ಜಯಮ್ಮನದೊಡ್ಡಿ ಮುಂತಾದ ಗ್ರಾಮಗಳಲ್ಲಿ ದೀರ್ಘ ಸಮಯದಿಂದ ಆನೆಯೊಂದು ಹಗಲು ರಾತ್ರಿಯೆನ್ನದೇ  ಗ್ರಾಮಗಳಿಗೆ ನುಗ್ಗಿ ಜಮೀನಿನಲ್ಲಿರುವ ಫಸಲು ನಾಶಗೊಳಿಸುವುದರ ಜೊತೆಗೆ ಮನೆಗಳ ಬಳಿಯೂ ಬಂದು ಮನೆಯ ಗೇಟ್ ಹಾಗೂ ಮರಗಳನ್ನು ನೆಲಕ್ಕುರುಳಿಸುತ್ತಿದೆ.

ಒಂಟಿ ಆನೆಯ ಜೊತೆಗೆ ಇನ್ನೂ ಎರಡು ಆನೆಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದವು. ಮನೆಗಳ ಬಳಿಗೆ ಬರುತ್ತಿದ್ದ ಆನೆಗಳು ಮನೆ ಮುಂದಿದ್ದ ನೀರಿನ ಹೊಂಡಗಳ ಬಳಿ ಬಂದು ದಾಂಧಲೆ ಮಾಡಿ ಹೋಗುತ್ತಿದ್ದವು. ಪುಂಡ ಒಂಟಿ ಆನೆಯ ಉಪಟಳಕ್ಕೆ ಹೋಲಿಸಿದರೆ ಉಳಿದೆರಡು ಆನೆಗಳ ಹಾವಳಿ ಕಡಿಮೆ. 

‘ಆನೆ ಜಮೀನಿಗೆ ಅಲ್ಲದೇ ಮನೆಗಳ ಬಳಿಗೂ ಬರುತ್ತಿದೆ. ರಾತ್ರಿ ವೇಳೆ ವೃದ್ಧರು, ಮಕ್ಕಳು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಮನೆಯ ಹೊರಗೆ ಅದು ಏನೆ ಮಾಡಿದರೂ ಯಾರು ಹೊರಗೆ ಬಾರದಂಥ ಪರಿಸ್ಥಿತಿಯಲ್ಲಿದ್ದೇವೆ’ ಎನ್ನುತ್ತಾರೆ ಗ್ರಾಮಸ್ಥರು.

ಕೃಷಿಯನ್ನೇ ಬಿಟ್ಟರು: ಗ್ರಾಮಗಳ ಸಮೀವಿರುವ ಜಮೀನುಗಳಿಗೆ ನಿರಂತರವಾಗಿ ಲಗ್ಗೆಯಿಡುತ್ತಿದ್ದ ಕಾಡಾನೆಗಳ ಹಾವಳಿಯಿಂದಾಗಿ ಬಹುತೇಕ ಕುಟುಂಬಗಳ ಕೃಷಿ ಮಾಡುವುದನ್ನೇ ನಿಲ್ಲಿಸಿವೆ. ಜಮೀನಿನಲ್ಲಿ ಯಾವುದೇ ಫಸಲು ಹಾಕಿದರೂ ಅದು ಆನೆಗಳ ಪಾಲಾಗುತ್ತಿದ್ದನ್ನು ಕಂಡು ಬೇಸೆತ್ತ ರೈತ ಕುಟುಂಬಗಳು ಕೃಷಿ ಮಾಡುವುದನ್ನೇ ಬಿಟ್ಟು ಕೂಲಿ ಕೆಲಸಕ್ಕಾಗಿ ಬೇರೆಡೆ ವಲಸೆ ಹೋಗುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ.

ರೇಡಿಯೊ ಕಾಲರ್‌ ಹಾಕಿರುವ ಆನೆಯೇ?
ಉಪಟಳ ನೀಡುತ್ತಿರುವ ಒಂಟಿ ಆನೆಗೆ ಈ ಹಿಂದೆ ರೇಡಿಯೊ ಹಾಕಲಾಗಿತ್ತು ಎಂದು ಹೇಳುತ್ತಾರೆ ಗ್ರಾಮಸ್ಥರು.  ವರ್ಷದ ಹಿಂದೆ ಪೊನ್ನಾಚಿಯಲ್ಲಿ ಉಪಟಳ ಕೊಡುತ್ತಿದ್ದ ಕಾಡಾನೆಗೆ ರೇಡಿಯೊ ಕಾಲರ್ ಅಳವಡಿಸಲಾಗಿತ್ತು. ತೊಂದರೆ ಕೊಡುವ ಆನೆ ಗ್ರಾಮಕ್ಕೆ ಬರುತ್ತಿದ್ದಂತೆ ಸ್ಥಳೀಯ ವಲಯ ಅರಣ್ಯಾಧಿಕಾರಿಗೆ ಜಿಪಿಎಸ್ ಮೂಲಕ ಸಂದೇಶ ಹೋಗುವುದರಿಂದ ಆನೆ ಹಾವಳಿಯನ್ನು ಮುಂಚಿತವಾಗಿ ತಪ್ಪಿಸುವುದು ಇದರ ಮುಖ್ಯ ಉದ್ದೇಶ. ‘ರೇಡಿಯಪ ಕಾಲರ್ ಅಳವಡಿಸಿದ್ದ ಆನೆ ಕೆಲವು ತಿಂಗಳಲ್ಲೇ ಕಾಲರ್ ಕಳಚಿಕೊಂಡಿದೆ. ಅರಣ್ಯಾಧಿಕಾರಿಗಳು ರೇಡಿಯೊ ಕಾಲರ್ ಅಳವಡಿಸಿದ್ದ ಆನೆಯೇ ಈಗ ಹೆಚ್ಚು ತೊಂದರೆ ಕೊಡುತ್ತಿದೆ. ಹಾಗಾಗಿ ಕಾಡಾನೆಯನ್ನು ಬೇಗ ಸೆರೆ ಹಿಡಿಯಬೇಕು’ ಎಂದು ಪೊನ್ನಾಚಿಯ ನಿವಾಸಿ ರಾಜು ಒತ್ತಾಯಿಸಿದರು. 
ಕಾಡಾನೆ ಸೆರೆ ಹಿಡಿಯಲು ಅನುಮತಿ ನೀಡುವಂತೆ ಪಿಸಿಸಿಎಫ್ ಅವರಿಗೆ ಮನವಿ ಮಾಡಲಾಗಿತ್ತು. ಸಮ್ಮತಿ ಸಿಕ್ಕಿದ್ದು ಕೂಡಲೇ ಕಾರ್ಯಾಚರಣೆ ಆರಂಭಿಲಾಗುವುದು.
-ಎಂ ಮಾಲತಿಪ್ರಿಯಾ, ಪ್ರಭಾರ ಸಿಸಿಎಫ್ ಚಾಮರಾಜನಗರ ವೃತ್ತ
ಆನೆ ಸೆರೆಗೆ ಕಾರ್ಯಾಚರಣೆಗೆ ದಿನ ನಿಗದಿ ಮಾಡಲಾಗಿದೆ. ಒಂದೇ ದಿನಕ್ಕೆ ಆನೆ ಸಿಗದಿದ್ದರೆ ಮತ್ತೆ ಎರಡು ದಿನಗಳ ಕಾಲ ಮುಂದುವರಿಸಲಾಗುವುದು
-ಜಿ ಸಂತೋಷ್ ಕುಮಾರ್ ಡಿಸಿಎಫ್ ಮಲೆಮಹದೇಶ್ವರ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT